Udayavani | May 12, 2012
ಉಡುಪಿ : ಸರಕಾರದಿಂದ ಆಟೋರಿಕ್ಷಾ ಚಾಲಕರು ಮತ್ತು ಟ್ಯಾಕ್ಸಿ ಚಾಲಕರಿಗೆ ವಿಮೆ ಒದಗಿಸುವ ಯೋಜನೆಯು ಈ ಬಾರಿಯ ಬಜೆಟ್ನಲ್ಲಿ ಪ್ರಸ್ತಾವವಾಗಿದ್ದು ಇದು ಮುಂದಿನ ತಿಂಗಳಿನಿಂದ ಚಾಲಕರಿಗೆ ದೊರೆಯಲಿದೆ ಎಂದು ಶಾಸಕ ಕೆ.ರಘುಪತಿ ಭಟ್ ತಿಳಿಸಿದರು.
ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸ್ಮಾರಕ ಸಭಾಭವನದಲ್ಲಿ ಮೇ 12ರಂದು ನಡೆದ ಉಡುಪಿ ತಾಲೂಕು ಮಟ್ಟದ ಆಟೋರಿಕ್ಷಾ ಚಾಲಕರ ವಿವಿಧ ಸಂಘಟನೆಗಳ ಒಕ್ಕೂಟದ 'ಉಡುಪಿ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘಗಳ ಒಕ್ಕೂಟ ಸಮಿತಿ'ಯ ಪ್ರಥಮ ಸಂಘಟನಾ ಸಮಾವೇಶದ ಅಧ್ಯಕ್ಷತೆ ವಹಿಸಿ, ರಿಕ್ಷಾ ಚಾಲಕರಿಂದ ಸಮ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ವಿಮೆ ಅನುಷ್ಠಾನ ಕುರಿತಾದ ಸಭೆಗಳು ನಡೆಯುತ್ತಿದ್ದು ಪ್ರೀಮಿಯಂ ಮೊತ್ತವನ್ನು ಸರಕಾರವೇ ಭರಿಸಲಿದೆ ಎಂದು ಭಟ್ ತಿಳಿಸಿದರು. ಉಡುಪಿ ನಗರದೊಳಗೆ ಗ್ರಾಮೀಣ ಪ್ರದೇಶದ ರಿಕ್ಷಾಗಳು ಕೂಡ ಪ್ರವೇಶಿಸಲು ಅನುಕೂಲವಾಗುವಂತೆ 7,000 ರಿಕ್ಷಾಗಳಿಗೆ ಪರವಾನಿಗೆ ನೀಡಲಾಗಿದೆ. ಉಡುಪಿಯಲ್ಲಿ ಗ್ಯಾಸ್ ಬಂಕ್ ಇಲ್ಲದ ಕಾರಣ ಉಡುಪಿಯಲ್ಲಿ ರಿಕ್ಷಾಗಳಿಗೆ ಗ್ಯಾಸ್ಕಿಟ್ ಕಡ್ಡಾಯ ಎಂಬ ನಿಯಮವನ್ನು ಕೂಡ ತೆಗೆದುಹಾಕುವ ಮೂಲಕ ರಿಕ್ಷಾ ಚಾಲಕರಿಗೆ ಅನುಕೂಲ ಮಾಡಿಕೊಡಲಾಗಿದೆ. ಆದರೆ ರಿಕ್ಷಾ ಚಾಲಕರು ಮೀಟರ್ನ್ನು ಕಡ್ಡಾಯವಾಗಿ ಅಳವಡಿಸಿ ಅದರ ಪ್ರಕಾರವೇ ಪ್ರಯಾಣಿಕರಿಂದ ಪ್ರಯಾಣದರ ಪಡೆಯಬೇಕು. ಸಂಘಟನೆ, ಬೇಡಿಕೆ ಈಡೇರಿಕೆಗೆ ಜನಶಕ್ತಿ ಅಗತ್ಯವಿದೆ. ಇಂತಹ ಒಕ್ಕೂಟವು ಜಿಲ್ಲಾ ಮಟ್ಟ ಮತ್ತು ರಾಜ್ಯಮಟ್ಟದಲ್ಲಿಯೂ ಆಗಬೇಕಾಗಿದೆ ಎಂದು ಅವರು ಹೇಳಿದರು.
ಉಡುಪಿಯಲ್ಲಿ ರಿಕ್ಷಾಗಳಿಗೆ ಗ್ಯಾಸ್ಕಿಟ್ ಅಳವಡಿಕೆ ಕಡ್ಡಾಯ ಎಂಬ ನಿಯಮದಿಂದ ವಿನಾಯಿತಿ ದೊರಕಿಸಿಕೊಟ್ಟಿರುವುದು, ಗ್ರಾಮೀಣ ರಿಕ್ಷಾಗಳು ಕೂಡ ನಗರ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿರುವುದು ಮೊದಲಾದ ಕಾರ್ಯಸಾಧನೆಗಳಿಗಾಗಿ ಶಾಸಕರನ್ನು ರಿಕ್ಷಾ ಚಾಲಕರು ಸಮ್ಮಾನಿಸಿದರು. ಮಣಿಪಾಲ ವಿ.ವಿಯ ಸಹಯೋಗದೊಂದಿಗೆ ರಿಕ್ಷಾ ಚಾಲಕರಿಗೆ ಒದಗಿಸಲಾದ ಆರೋಗ್ಯ ಕಾರ್ಡ್ಗಳನ್ನು ವಿತರಿಸಲಾಯಿತು. ಜಿಲ್ಲಾ ಮಟ್ಟದಲ್ಲಿ ಆಟೋಚಾಲಕರ ಕಲ್ಯಾಣ ಮಂಡಳಿಯನ್ನು ಆರಂಭ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಶಾಸಕರಿಗೆ ಸಲ್ಲಿಸಲಾಯಿತು.
ಸಮಾವೇಶವನ್ನು ಉದ್ಘಾಟಿಸಿದ ಹನುಮಾನ್ ಮೋಟಾರ್ನ ಆಡಳಿತ ನಿರ್ದೇಶಕ ಪಿ.ರಬೀಂದ್ರ ನಾಯಕ್ ಅವರು ಮಾತನಾಡಿ, ರಿಕ್ಷಾ ಚಾಲಕರು ಉತ್ತಮ ಸೇವೆ, ಸಂಘಟನೆಯ ಮೂಲಕ ಮಾದರಿಯಾಗಬೇಕು ಎಂದರು. ಶಾಸಕ ಕೋಟ ಶ್ರೀನಿವಾಸ ಪೂಜಾರಿ, ಸಾರಿಗೆ ಅಧಿಕಾರಿ ಎಚ್.ಎನ್.ರಮೇಶ್, ಎಸ್ಪಿ ಡಾ|ಬೋರಲಿಂಗಯ್ಯ, ಮಣಿಪಾಲ ವಿ.ವಿ. ಆರೋಗ್ಯ ವಿಮೆ ವಿಭಾಗದ ಡಿಜಿಎಂ ಡಾ|ಶ್ರೀಪತಿ ರಾವ್, ಉಜ್ವಲ್ ಡೆವಲಪರ್ನ ಪುರುಷೋತ್ತಮ ಶೆಟ್ಟಿ, ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿ ವಿಠಲ್ ರಾವ್, ಕಾರ್ಕಳ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಆಟೋ ರಿಕ್ಷಾ ಚಾಲಕರ ಸಂಘದ ಪದಾಧಿಕಾರಿಗಳಾದ ರಾಜು ದೇವಾಡಿಗ, ಸಂಜೀವ ಪೂಜಾರಿ, ವಾಸು ಪೂಜಾರಿ, ಸುರೇಶ್ ಅಮೀನ್ ಮೊದಲಾದವರು ಉಪಸ್ಥಿತರಿದ್ದರು.
ಸಮಿತಿಯ ಗೌರವಾಧ್ಯಕ್ಷ ಬಿ.ಸುಧಾಕರ ಶೆಟ್ಟಿ ಸ್ವಾಗತಿಸಿ ಅಧ್ಯಕ್ಷ ಮಹೇಶ್ ಠಾಕೂರ್ ವಂದಿಸಿದರು. ಶ್ರೀನಿವಾಸ ರಾವ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಸುದೇವ ಭಟ್ ಕಾರ್ಯಕ್ರಮ ನಿರ್ವಹಿಸಿದರು.