ಮಂಗಳೂರು : ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಉದ್ಭವಿಸಿಲ್ಲ; ಯಾವುದೇ ಸಚಿವರಾಗಲಿ, ಶಾಸಕರಾಗಲಿ ರಾಜೀನಾಮೆ ನೀಡಿಲ್ಲ; ಎಲ್ಲವೂ ಮಾಧ್ಯಮಗಳ ಊಹಾ ಪೋಹ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ರವಿವಾರ ಬೆಳಗ್ಗೆ ಇಲ್ಲಿ ತಿಳಿಸಿದರು.ಶನಿವಾರ ಮಂಗಳೂರಿಗೆ ಆಗಮಿಸಿ ರಾತ್ರಿ ನಗರದಲ್ಲಿರುವ ತಮ್ಮ ಮನೆಯಲ್ಲಿ ವಾಸ್ತವ್ಯ ಮಾಡಿದ್ದ ಮುಖ್ಯಮಂತ್ರಿ ಅವರು ರವಿವಾರ ಬೆಳಗ್ಗೆ ಬೆಂಗಳೂರಿಗೆ ನಿರ್ಗಮಿಸುವ ಮೊದಲು ಸುದ್ದಿಗಾರರ ಜತೆ ಮಾತನಾಡಿದರು.ಈ ಊಹಾ ಪೋಹಗಳಿಗೆ ಮಾಧ್ಯಮದವರೇ ತೆರೆ ಎಳೆಯಬೇಕು. ಮಾಧ್ಯಮದವರ ದೋಸ್ತಿಗಳೆನ್ನಲಾದ ಕೆಲವರು ನೇರವಾಗಿ ವಾಧ್ಯಮದವರ ಬಳಿ ಹೋಗಿ ಹೇಳಿಕೆ ನೀಡುತ್ತಿದ್ದಾರೆ. ಅವರ ಹೇಳಿಕೆಗಳಿಗೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ ಎಂದು ಮುಖ್ಯಮಂತ್ರಿ ವಿವರಿಸಿದರು.ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರು ವಿದೇಶ ಪ್ರವಾಸವನ್ನು ಮೊಟಕುಗೊಳಿಸಿರುವುದು ನನ್ನ ಗಮನಕ್ಕೆ ಬಂದಿಲ್ಲ. ಮುಖ್ಯಮಂತ್ರಿಯಾಗಿ ನಾನೇ ಮುಂದುವರಿಯುತ್ತೇನೆ. ನನ್ನ ದಿಲ್ಲಿ ಪ್ರವಾಸದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಡಿ.ವಿ. ಸದಾನಂದ ಗೌಡ ತಿಳಿಸಿದರು.