ಹೊಸದಿಲ್ಲಿ: ಪಠ್ಯ ಪುಸ್ತಕದ ವಿವಾದಗ್ರಸ್ತ ವ್ಯಂಗ್ಯಚಿತ್ರ ಸೋಮವಾರ ಕೂಡ ಲೋಕಸಭೆಯಲ್ಲಿ ಕಾವೇರಿದ ವಾತಾವರಣಕ್ಕೆ ಕಾರಣವಾಗಿದ್ದು, ಈ ವ್ಯಂಗ್ಯಚಿತ್ರಗಳು ಸಮಾಜದ ಒಂದು ವರ್ಗದ ಭಾವನೆಗೆ ನೋವುಂಟು ಮಾಡಿರುವುದರಿಂದ ಅದರ ವಿರುದ್ಧ ತತ್ಕ್ಷಣ ಕ್ರಮ ಕೈಗೊಳ್ಳಬೇಕೆಂದು ಸದಸ್ಯರು ಒತ್ತಾಯಿಸಿದರು.ಪ್ರಶ್ನೋತ್ತರ ಅವಧಿಯಲ್ಲಿ ಈ ವಿಚಾರವನ್ನು ಎತ್ತಿದ ಎಸ್ಎಡಿಯ ಹರ್ಸಿಮೃತ್ ಕೌರ್ ಮತ್ತು ಎಸ್ಪಿಯ ಶೈಲೇಂದ್ರ ಕುಮಾರ್ ವ್ಯಂಗ್ಯಚಿತ್ರಗಳಿರುವ ಸಿಬಿಎಸ್ಇ ಪಠ್ಯ ಪುಸ್ತಕಗಳನ್ನು ಹಿಂದೆಗೆದುಕೊಳ್ಳಬೇಕೆಂದು ಒತ್ತಾಯಿಸಿದಾಗ ಸಂಜಯ್ ನಿರುಪಮ್ ಮತ್ತು ಲಾಲ್ ಸಿಂಗ್ ಸಹಿತ ಹಲವು ಕಾಂಗ್ರೆಸ್ ಸದಸ್ಯರು ಅವರ ಬೆಂಬಲಕ್ಕೆ ನಿಂತು ಮಾನವ ಸಂಪದಭಿವೃದ್ಧಿ ಸಚಿವ ಕಪಿಲ್ ಸಿಬಲ್ ಅವರಿಂದ ಸ್ಪಷ್ಟೀಕರಣ ಕೋರಿದರು. ಈ ಸಂದರ್ಭದಲ್ಲಿ ಸಿಬಲ್ ಸದನದಲ್ಲಿರಲಿಲ್ಲ.ಸರಕಾರದ ಪರವಾಗಿ ಸ್ಪಷ್ಟೀಕರಣ ನೀಡಿದ ಸಂಸದೀಯ ವ್ಯವಹಾರಗಳ ಸಚಿವ ಕಪಿಲ್ ಸಿಬಲ್ ಈ ವಿಚಾರ ಸದನದಲ್ಲಿ ಪ್ರಸ್ತಾವಕ್ಕೆ ಬರುವ ಮೊದಲೇ ಸಚಿವರು ಪಠ್ಯಪುಸ್ತಕದಿಂದ ವ್ಯಂಗ್ಯಚಿತ್ರಗಳನ್ನು ಕಿತ್ತು ಹಾಕಲು ಆದೇಶಿಸಿದ್ದರು ಎಂದರು. ಅವರ ಉತ್ತರದಿಂದ ಸದಸ್ಯರು ಸಮಾಧಾನಗೊಳ್ಳದಿದ್ದಾಗ ವಿತ್ತ ಸಚಿವ ಪ್ರಣವ್ ಮುಖರ್ಜಿ ಪಠ್ಯ ಪುಸ್ತಕದಲ್ಲಿರುವ ಎಲ್ಲ ಆಕ್ಷೇಪಾರ್ಹ ವಿಷಯಗಳನ್ನು ಕಿತ್ತು ಹಾಕುತ್ತೇವೆ ಎಂದು ಆಶ್ವಾಸನೆಯಿತ್ತರು.