28ರಂದು ಕೋರ್ಟ್ಗೆ ಬರಲು ತಾಕೀತುಹೈದರಾಬಾದ್: ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಮೇ 28ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಕೋರ್ಟ್ ಹೊರಡಿಸಿದ್ದ ಸಮನ್ಸ್ ಅನ್ನು ಸಿಬಿಐ ಅಧಿಕಾರಿಗಳು ವೈಎಸ್ಸಾರ್ ಕಾಂಗ್ರೆಸ್ ಸಂಸ್ಥಾಪಕ ಜಗನ್ಮೋಹನ ರೆಡ್ಡಿ ಅವರಿಗೆ ಸೋಮವಾರ ಹಸ್ತಾಂತರಿಸಿದ್ದಾರೆ.ಮುಂದಿನ ತಿಂಗಳು ನಡೆಯಲಿರುವ ಉಪ ಚುನಾವಣೆಗಳ ಪ್ರಚಾರ ಕಾರ್ಯದಲ್ಲಿ ನಿರತರಾಗಿರುವ ಜಗನ್ಮೋಹನ ರೆಡ್ಡಿ ಅವರನ್ನು ಕರ್ನೂಲು ಜಿಲ್ಲೆಯ ಯೆಮ್ಮಿಗನೂರಿನಲ್ಲಿ ಭೇಟಿ ಮಾಡಿದ ಸಿಬಿಐ ಅಧಿಕಾರಿಗಳು ಅವರ ಕೈಗೆ ಸಿಬಿಐ ಕೋರ್ಟ್ ಸಮನ್ಸ್ ಪ್ರತಿಯನ್ನು ಇಟ್ಟರು.ಮೇ 28ರಂದು ಖುದ್ದಾಗಿ ಅಥವಾ ವಕೀಲರ ಮೂಲಕ ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ನಲ್ಲಿ ಸೂಚಿಸಲಾಗಿದೆ. ಜಗನ್ ಅವರಲ್ಲದೇ ಪ್ರಕರಣದ ಇತರೆ 12 ಮಂದಿ ಆರೋಪಿಗಳಿಗೂ ಸಮನ್ಸ್ ನೀಡಲಾಗಿದೆ.ಈ ನಡುವೆ, ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದನ್ನು ಪ್ರಶ್ನಿಸಿ ಜಗನ್ ಒಡೆತನದ ಸಾಕ್ಷಿ ಮಾಧ್ಯಮ ಸಮೂಹದ ಮಾತೃ ಕಂಪನಿ ಜಗತಿ ಪಬ್ಲಿಕೇಷನ್ ಸಲ್ಲಿಸಿದ್ದ ಅರ್ಜಿಯನ್ನು ನಾಂಪಲ್ಲಿಯ ಸಿಬಿಐ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ.