ಉಡುಪಿ : ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಪೆಟ್ರೋಲಿನ ಬೆಲೆಯನ್ನು ಲೀಟರಿಗೆ ರೂ. 7.50 ರಷ್ಟು ಏರಿಸಿದ ಕೇಂದ್ರದ ಯುಪಿಎ ಸರಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ವಿಮಾ ನೌಕರರ ಸಂಘದ ವತಿಯಿಂದ ಉಡುಪಿ ವಿಭಾಗದ ಉಡುಪಿ, ದಕ್ಷಿಣಕನ್ನಡ, ಚಿಕ್ಕಮಗಳೂರು ಜಿಲ್ಲೆಗಳನ್ನೊಳಗೊಂಡ 17 ವಿಮಾ ಶಾಖೆಗಳ ಮುಂಭಾಗದಲ್ಲಿ ಗುರುವಾರ ಮತ ಪ್ರದರ್ಶನವನ್ನು ನಡೆಸಲಾಯಿತು.ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ನ ಎದುರು ರೂಪಾಯಿ ಅಪಮೌಲ್ಯಗೊಂಡಿರುವುದರಿಂದ ಕಚ್ಚಾತೈಲವನ್ನು ಹೆಚ್ಚಿನ ಬೆಲೆ ತೆತ್ತು ಖರೀದಿಸಬೇಕಾಗಿದೆ. ಇದರ ಪರಿಣಾಮವಾಗಿ ಪೆಟ್ರೋಲಿನ ಬೆಲೆಯನ್ನು ಅನಿವಾರ್ಯವಾಗಿ ಏರಿಸಬೇಕಾಗಿದೆ ಎನ್ನುವ ಕೇಂದ್ರ ಸರಕಾರದ ವಾದದಲ್ಲಿ ಯಾವುದೇ ಹುರುಳಿಲ್ಲ. ಯೂರೋಪಿಯನ್ ಯೂನಿಯನ್ ಹಾಗೂ ಅಮೇರಿಕದಲ್ಲಾಗಿರುವ ಆರ್ಥಿಕ ಕುಸಿತದಿಂದಾಗಿ ಡಾಲರ್ ತನ್ನ ಮೌಲ್ಯವನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿರುವಾಗ ಅಮೆರಿಕವನ್ನು ಉದ್ಧರಿಸಲು ರೂಪಾಯಿಯ ಮೌಲ್ಯವನ್ನು ಇಳಿಸಿರುವ ಕೇಂದ್ರ ಸರಕಾರದ ನೀತಿ ಜನವಿರೋಧಿಯಾಗಿದೆ ಎಂದು ವಿಮಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಯು. ಗುರುದತ್ ಉಡುಪಿಯಲ್ಲಿ ಹೇಳಿದರು.ಪೆಟ್ರೋಲಿಯಂ ಪದಾರ್ಥಗಳ ಮೇಲಿನ ನಿಯಂತ್ರಣವನ್ನು ಹಿಂಪಡೆದಿರುವ ಸರಕಾರ ಖಾಸಗೀ ತೈಲ ಸಂಸ್ಥೆಗಳಿಗೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಎಗ್ಗಿಲ್ಲದೆ ಏರಿಸಲು ಅವಕಾಶ ಕಲ್ಪಿಸಿದೆ. ಇದರಿಂದಾಗಿ ಜನಸಾಮಾನ್ಯ ಮತ್ತು ಮಧ್ಯಮ ವರ್ಗದ ಜನ ಪರದಾಡುವಂತಾಗಿದೆ ಎಂದವರು ಹೇಳಿದರು.