ಶಿರ್ವ : ತೀರಾ ನಾದುರಸ್ತಿಯಲ್ಲಿರುವ ಶಿರ್ವ ಪ್ರಿನ್ಸ್ ಪಾಯಿಂಟ್ ಬಳಿಯಿಂದ ಕುಂಜಿಗುಡ್ಡೆಯ ಮೂಲಕವಾಗಿ ಮುದರಂಗಡಿಗೆ ಸಂಚಾರ ಕಲ್ಪಿಸುವ ಗ್ರಾಮೀಣ ರಸ್ತೆಯನ್ನು ದುರಸ್ತಿಗೊಳಿಸುವಂತೆ ಒತ್ತಾಯಿಸಿ ಸ್ಥಳೀಯರು ಕಳೆದ ಐದು ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆಗೆ ಕೊನೆಗೂ ಜನಪ್ರತಿನಿಧಿಗಳಿಂದ ಸ್ಪಂದನೆ ವ್ಯಕ್ತವಾಗಿದೆ.ಎಲ್ಲೂರು ಕ್ಷೇತ್ರದ ಜಿ.ಪಂ. ಸದಸ್ಯ ಅರುಣ್ ಶೆಟ್ಟಿ ಪಾದೂರು ಮತ್ತು ಮುದರಂಗಡಿ ಗ್ರಾ.ಪಂ. ಅಧ್ಯಕ್ಷ ಸುನೀಲ್ರಾಜ್ ಶೆಟ್ಟಿ ಅವರು ಉಡುಪಿ ಜಿ.ಪಂ. ಎಂಜಿನಿಯರಿಂಗ್ ಇಲಾಖೆಯ ಅಧಿಕಾರಿ ಫಯಾಜ್ ಅವರನ್ನು ಸೋಮವಾರ ಸ್ಥಳಕ್ಕೆ ಕರೆದುಕೊಂಡು ಬಂದು ಶಿರ್ವ ಪ್ರಿನ್ಸ್ ಪಾಯಿಂಟ್ - ಮುದರಂಗಡಿ ರಸ್ತೆಯನ್ನು ದುರಸ್ತಿಗೊಳಿಸುವ ನಿಟ್ಟಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಮುದರಂಗಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಡೇವಿಡ್ ಡಿಸೋಜ ಹಾಗೂ ಪ್ರತಿಭಟನಕಾರರೊಂದಿಗೆ ಮಾತುಕತೆ ನಡೆಸಿ ಕಾಮಗಾರಿ ನಡೆಸಲು ಪರಿಶೀಲನೆ ನಡೆಸಿದರು.ಈ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಬಿಡುಗಡೆಗೊಳಿಸಿರುವ 2 ಲಕ್ಷ ರೂ. ಮತ್ತು ಗ್ರಾ.ಪಂ. ಕ್ರಿಯಾ ಯೋಜನೆಯಡಿ ನಿಗದಿ ಪಡಿಸಿರುವ 1 ಲಕ್ಷ ರೂ. ಅನುದಾನದೊಂದಿಗೆ ರಸ್ತೆಯ ಹೊಂಡ ಗುಂಡಿಗಳನ್ನು ಜಲ್ಲಿ ಮತ್ತು ಮಣ್ಣಿನಿಂದ ತುಂಬಿ ಕಚ್ಚಾ ರಸ್ತೆ ನಿರ್ಮಿಸಲಾಗುವುದು ಎಂದು ಜಿ.ಪಂ. ಸದಸ್ಯ ಅರುಣ್ ಶೆಟ್ಟಿ ಪಾದೂರು ಉದಯವಾಣಿಗೆ ತಿಳಿಸಿದ್ದಾರೆ.ತಾ.ಪಂ. ಸದಸ್ಯೆ ಲಿಲ್ಲಿ ಡಿಸೋಜ, ಮುದರಂಗಡಿ ಗ್ರಾ.ಪಂ. ಅಧ್ಯಕ್ಷ ಸುನೀಲ್ರಾಜ್ ಶೆಟ್ಟಿ ಸಾಂತೂರು, ಉಪಾಧ್ಯಕ್ಷ ಮುದ್ದು ಸುವರ್ಣ, ಅಭಿವೃದ್ಧಿ ಅಧಿಕಾರಿ ವಾಸುದೇವ ಸಾಲ್ಯಾನ್, ಸದಸ್ಯರಾದ ಶಿವರಾಮ ಭಂಡಾರಿ, ಪ್ರಸಿಲ್ಲಾ ಮಥಾಯಿಸ್, ಗುತ್ತಿಗೆದಾರ ಚಂದ್ರಶೇಖರ ಶೆಟ್ಟಿ ಪಳ್ಳಿ ಮೊದಲಾದವರು ಉಪಸ್ಥಿತರಿದ್ದರು.