ಪುತ್ತೂರು: ರಾಜ್ಯದಲ್ಲಿ ಮೂರು ಬಾರಿ ವಿದ್ಯುತ್ ದರ ಏರಿಕೆ, ನೀರಿನ ದರ, ಬಸ್ ಪ್ರಯಾಣ ದರವನ್ನು ಏರಿಕೆ ಮಾಡಿದ ಬಿಜೆಪಿಯವರಿಗೆ ಕೇಂದ್ರ ಸರಕಾರದ ಪೆಟ್ರೋಲ್ ದರ ಏರಿಕೆ ವಿರುದ್ಧ ಪ್ರತಿಭಟನೆ ಮತ್ತು ಬಂದ್ ನಡೆಸಲು ಯಾವ ನೈತಿಕ ಹಕ್ಕು ಇದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಶ್ನಿಸಿದೆ.ಸುದ್ದಿಗಾರರೊಂದಿಗೆ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ. ಹೇಮನಾಥ ಶೆಟ್ಟಿ, ಬೆಲೆ ಇಳಿಕೆಗೆ ಪರಿಹಾರ ರಾಜ್ಯ ಸರಕಾರದ ಬಳಿ ಇದೆ. ಅದನ್ನು ಮಾಡದೆ ಪೆಟ್ರೋಲ್ ದರ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆಗೆ ಇಳಿದಿದೆ. ಬಂದ್ ಸಂದರ್ಭದಲ್ಲಿ ಆಗುವ ನಷ್ಟವನ್ನು ಪೆಟ್ರೋಲ್ ಬೆಲೆ ಇಳಿಕೆಗೆ ಬಳಕೆ ಮಾಡಿದರೆ ಜನಸಾಮಾನ್ಯರಿಗೆ ಸಹಕಾರವಾಗುತ್ತಿತ್ತು ಎಂದರು.ಮೇ 31 ರಂದು ದ.ಕ. ಜಿಲ್ಲೆಯಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಶುಭ ಕಾರ್ಯಗಳು ನಡೆಯುತ್ತಿದ್ದು, ಬಂದ್ ಕಾರಣದಿಂದಾಗಿ ಗೊಂದಲ ಉಂಟಾಗಿದೆ. ಬಿಜೆಪಿಯವರು ಆಡಳಿತ ಪಕ್ಷದಲ್ಲಿದ್ದರೂ ವಿರೋಧ ಪಕ್ಷದಲ್ಲಿದ್ದರೂ ಪ್ರತಿಭಟನೆಯೇ ಇವರ ಮೂಲ ಮಂತ್ರವಾಗಿದೆ ಎಂದು ಟೀಕಿಸಿದರು.ದ.ಕ. ಜಿಲ್ಲಾ ಬಿಜೆಪಿ ಸಮಿತಿಯು ಜಿಲ್ಲೆಯಲ್ಲಿ ಬಂದ್ ಕರೆಯನ್ನು ಹಿಂದೆೆಗೆದುಕೊಳ್ಳುವಂತೆ ಬ್ಲಾಕ್ ಕಾಂಗ್ರೆಸ್ ಸಮಿತಿ ಆಗ್ರಹಿಸಿದೆ. ಜನವಿರೋಧಿ ಬಂದ್ ಅನ್ನು ಬಹಿಷ್ಕರಿಸುವಂತೆ ಕಾಂಗ್ರೆಸ್ ಸಾರ್ವಜನಿಕರಿಗೆ ಕರೆ ನೀಡಿದೆ.ಪತ್ರಿಕಾಗೋಷ್ಠಿಯಲ್ಲಿ ಪುರಸಭಾ ಸದಸ್ಯರಾದ ಎಚ್. ಮಹಮ್ಮದಾಲಿ, ಅನ್ವರ್ ಖಾಸಿಂ, ಬಪ್ಪಳಿಗೆ ಕಿಟ್ಟಣ್ಣ ಗೌಡ ಉಪಸ್ಥಿತರಿದ್ದರು.