Udayavani | May 30, 2012
ಕಾಪು : ದೇಶ - ವಿದೇಶಗಳಲ್ಲಿ ಖ್ಯಾತಿ ಗಳಿಸಿರುವ ಶಂಕರಪುರ ಮಲ್ಲಿಗೆಯ ದರ ಮತ್ತೆ ಗಗನಕ್ಕೇರಿದೆ. ಬುಧವಾರ ಶಂಕರಪುರ ಮಲ್ಲಿಗೆಯ ಧಾರಣೆ ಕಟ್ಟೆಯಲ್ಲಿ ಅಟ್ಟೆಗೆ 820 ರೂ.ಗಳ ವರೆಗೆ ನೆಗೆದಿದ್ದು (ಒಂದು ಚೆಂಡು ಮಲ್ಲಿಗೆಗೆ 209 ರೂ.) ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.
ಮೇ ತಿಂಗಳ ಆರಂಭದಿಂದಲೇ ಭಾರೀ ಏರುಪೇರು ಕಂಡಿದ್ದ ಮಲ್ಲಿಗೆಯ ಬೆಲೆಯು ತಿಂಗಳ ಮಧ್ಯದಲ್ಲಿ ಅಟ್ಟೆಗೆ 45 ರೂ. ವರೆಗೆ ಭಾರೀ ಕುಸಿತ ಕಂಡು ಬಂದಿತ್ತು. ಆ ಮೂಲಕ ಬೆಳೆಗಾರರು ತೀರಾ ಆತಂಕಿತರಾಗುವಂತಾಗಿತ್ತು. ಇದೀಗ ಕೆಲವೇ ದಿನಗಳಲ್ಲಿ ಅಟ್ಟೆಗೆ 775 ರೂ.ಗೆ ವರೆಗೆ ಏರಿಕೆ ಯಾಗಿದ್ದು ಬೆಳೆಗಾರರು ಅನಿರೀಕ್ಷಿತವಾಗಿ ಸಂತಸ ಪಡುವಂತಾಗಿದೆ.
ತಿಂಗಳಾರಂಭದ ದಿನಗಳನ್ನು ಹೊರತುಪಡಿಸಿದರೆ ಕೆಲವು ದಿನಗಳಿಂದ ಕರಾವಳಿಯಲ್ಲಿ ಯಾವುದೇ ಶುಭಕಾರ್ಯಗಳು ನಡೆಯದಿದ್ದ ಕಾರಣ ಮಲ್ಲಿಗೆ ಬೆಲೆಯ ಏರುಪೇರಿನ ಬಗ್ಗೆ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಬುಧವಾರದ ಮಾರುಕಟ್ಟೆಯಲ್ಲಿ ಬೆಲೆ ದಿಢೀರನೆ ಏರಿಕೆಯಾಗಿದ್ದು ಮುಂದಿನ ಒಂದು ವಾರದಲ್ಲಿ ಮಲ್ಲಿಗೆಯ ಬೆಲೆ ಇದೇ ರೀತಿಯಾಗಿ ಉಳಿಯುವ ಸಾಧ್ಯತೆಗಳಿವೆ ಎಂಬ ಮಾತುಗಳು ಮಲ್ಲಿಗೆ ಮಾರಾಟಗಾರರಿಂದ ಕೇಳಿ ಬರುತ್ತಿರುವುದು ಗ್ರಾಹಕರಲ್ಲಿ ಚಿಂತೆ ಮೂಡಿಸಿದೆ.
ವಿವಿಧೆಡೆ ವಿವಿಧ ಧಾರಣೆ
ಮಲ್ಲಿಗೆಗೆ ಕಟ್ಟೆಯಲ್ಲಿ ಎಷ್ಟೇ ಬೆಲೆ ನಿಗದಿಯಾದರೂ ಮಾರುಕಟ್ಟೆಯಲ್ಲಿ ಮಾತ್ರ ಒಂದೊಂದು ಕಡೆ ಒಂದೊಂದು ರೀತಿಯ ಬೆಲೆ ಇರುತ್ತದೆ. ಕನಿಷ್ಠ ಅಂತರದ ಹೂವಿನ ಅಂಗಡಿಗಳಲ್ಲೂ ಮಲ್ಲಿಗೆಯ ದರ ಬೇರೆಬೇರೆ ರೀತಿಯಲ್ಲಿರುವುದರಿಂದ ಗ್ರಾಹಕರಿಗೆ ಮಲ್ಲಿಗೆ ಹೊರೆಯೆಂಬಂತಾದರೆ ಮಲ್ಲಿಗೆ ಬೆಳೆಗಾರರಿಗೆ ಮಾತ್ರ ಏನೂ ಇಲ್ಲ ಎಂಬಂತಾಗುತ್ತದೆ.
ಬುಧವಾರ ಕಟ್ಟೆಯ ದರ 820 ರೂ.ಗಳಾಗಿದ್ದರೆ, ಕಾಪುವಿನಲ್ಲಿ 840 ರೂ., ಶಿರ್ವದಲ್ಲಿ 950 ರೂ., ಕಟಪಾಡಿಯಲ್ಲಿ 850 ರೂ., ಉದ್ಯಾವರದಲ್ಲಿ 950 ರೂ., ಉಡುಪಿಯಲ್ಲಿ 900ಧಿ - 1,000 ರೂ., ಪಡುಬಿದ್ರಿಯಲ್ಲಿ 950 ರೂ., ಮೂಲ್ಕಿಯಲ್ಲಿ 890 ರೂ.ಗಳಾಗಿದ್ದು, ಪ್ರತೀ ಚೆಂಡು ಮಲ್ಲಿಗೆ ಒಂದೊಂದು ಕಡೆ ಒಂದೊದು ರೀತಿಯ ಬೆಲೆಯಲ್ಲಿ ಮಾರಾಟಗೊಂಡಿದೆ.