Udayavani | Jun 02, 2012
ನವಿಮುಂಬಯಿ : ಬೋಂಬೇ ಬಂಟ್ಸ್ ಅಸೋಸಿಯೇಶನ್ನ ಮಹಿಳಾ ವಿಭಾಗದ ವತಿಯಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರವು ಜೂ. 10 ರಂದು ಸಯನ್ ಪರಿಸರದ ಸ್ವಾಮಿ ನಿತ್ಯಾನಂದ ಸಭಾಗೃಹದಲ್ಲಿ ನೆರವೇರಲಿದೆ.

ಬೋಂಬೇ ಬಂಟ್ಸ್ ಅಸೋಸಿಯೇಶನ್ನ ಮಹಿಳಾ ವಿಭಾಗವು ಕಳೆದ ಅನೇಕ ವರ್ಷಗಳಿಂದ ವೈದ್ಯಕೀಯ, ಸಾಂಸ್ಕೃತಿಕ ಹಾಗೂ ವ್ಯಕ್ತಿತ್ವ ವಿಕಸನ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ವಿಭಿನ್ನವಾದ ಸೇವೆಯನ್ನು ಮಾಡಿಕೊಂಡು ಬಂದಿದ್ದು, ಇದೀಗ ದಿ| ಎಳಿಯಾರ್ ಸದಾಶಿವ ಶೆಟ್ಟಿ ಮೆಮೋರಿಯಲ್ ಮೆಡಿಕಲ್ ಫೌಂಡೇಷನ್ ನಿರ್ದೇಶಕ ಹಾಗೂ ಸಯನ್ ಸೋಮಯ್ಯ ಮೆಡಿಕಲ್ ಕಾಲೇಜಿನ ಶಸ್ತ್ರಚಿಕಿತ್ಸಾ ಉಪನ್ಯಾಸಕ ಡಾ| ರತ್ನಾಕರ ಶೆಟ್ಟಿ ಮತ್ತು ಅವರ ನುರಿತ ವೈದ್ಯರುಗಳ ತಂಡದ ಸಹಯೋಗದೊಂದಿಗೆ ಅಸೋಸಿಯೇಶನ್ನ ಸರ್ವ ಸದಸ್ಯರು, ಸದಸ್ಯೆಯರು ಮತ್ತು ಅವರ ಪರಿವಾರದ ಸದಸ್ಯರುಗಳು ಆರ್ಥಿಕವಾಗಿ ಹಿಂದುಳಿದ ಸರ್ವ ತುಳು-ಕನ್ನಡ ಬಾಂಧವರಿಗಾಗಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದೆ. ನಗರದ ಹೆಸರಾಂತ ಕ್ಯಾನ್ಸರ್ ತಪಾಸಣಾ ಹಾಗೂ ವೈದ್ಯಕೀಯ ಸಲಹಾ ತಜ್ಞೆ ಡಾ| ಗೀತಾಂಜಲಿ ಅಮೀನ್ ಮತ್ತು ಬೋಂಬೇ ಹಾಸ್ಪಿಟಲ್ನ ಹಿರಿಯ ಸರ್ಜನ್, ಉಪನ್ಯಾಸಕ ಡಾ| ಕಿಶೋರ್ ಅಡ್ಯಂತಾಯ ಸಹಿತ ಸುಮಾರು 10 ವೈದ್ಯರುಗಳ ತಂಡ ಹಾಗೂ ನರ್ಸ್ಗಳು ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.
ಬೆಳಗ್ಗೆ 8 ಗಂಟೆಯಿಂದ ಅಪರಾಹ್ನ 2 ಗಂಟೆಯವರೆಗೆ ನಡೆಯಲಿರುವ ಈ ಶಿಬಿರದಲ್ಲಿ ಮಹಿಳೆಯರಿಗಾಗಿ ಸರ್ವೈಕಲ್ ಕ್ಯಾನ್ಸರ್, ಬ್ರೆಸ್ಟ್ ಕ್ಯಾನ್ಸರ್, ಗರ್ಭಾಶಯ ಕ್ಯಾನ್ಸರ್ ಮತ್ತು ಮೆಮೊಗ್ರಫಿ ತಪಾಸಣೆಯನ್ನು ಆಯೋಜಿಸಲಾಗಿದೆ. ಪುರುಷರಿಗಾಗಿ ಸಿಹಿಮೂತ್ರ ತಪಾಸಣೆ, ರಕ್ತಪರೀಕ್ಷೆ, ಹಲ್ಲುಗಳ ತಪಾಸಣೆ, ಎಲುಬಿನ ಕ್ಯಾಲ್ಸಿಯಂ ತಪಾಸಣೆ, ಎಲುಬುರೋಗ ತಪಾಸಣೆ, ಎಲುಬು ಸಾಂದ್ರತೆ ತಪಾಸಣೆ ಇತ್ಯಾದಿಗಳನ್ನು ಏರ್ಪಡಿಸಲಾಗಿದೆ. ಅಸೋಸಿಯೇಶನ್ನ ಸರ್ವ ಪದಾಧಿಕಾರಿಗಳು, ಆಡಳಿತ ಸಮಿತಿಯ ಸದಸ್ಯರು, ಯುವ ವಿಭಾಗದ ಪದಾಧಿಕಾರಿಗಳು, ಸದಸ್ಯರುಗಳು ಮತ್ತು ಮಹಿಳಾ ವಿಭಾಗದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರುಗಳ ಸಹಕಾರ, ಮಾರ್ಗದರ್ಶನದೊಂದಿಗೆ ನಡೆಯಲಿರುವ ಈ ಶಿಬಿರದಲ್ಲಿ ಆರ್ಥಿಕವಾಗಿ ಹಿಂದುಳಿದ ಸರ್ವ ಬಂಟ ಬಾಂಧವರು ಪಾಲ್ಗೊಳ್ಳುವಂತೆ ಅಸೋಸಿಯೇಶನ್ನ ಅಧ್ಯಕ್ಷ ಅಡ್ವೊಕೇಟ್ ರತ್ನಾಕರ ವಿ. ಶೆಟ್ಟಿ. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಆಶಾ ಶಿವರಾಮ ಶೆಟ್ಟಿ, ಶಿಬಿರದ ಮುಖ್ಯ ರೂವಾರಿ ಡಾ| ರತ್ನಾಕರ ಶೆಟ್ಟಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.