Udayavani | Jun 11, 2012
ಹೊಸದಿಲ್ಲಿ : ಬಹು ನಿರೀಕ್ಷೆಯ ಲಂಡನ್ ಒಲಿಂಪಿಕ್ಸ್ಗೆ ಭಾರತ ಹಾಕಿ ತಂಡವನ್ನು ಪ್ರಕಟಿಸಲಾಗಿದೆ. ಯಾವುದೇ ಅಚ್ಚರಿಗೆ ಅವಕಾಶ ನೀಡದ ಹಾಕಿ ಇಂಡಿಯಾ, ನಾಯಕ ಸ್ಥಾನಕ್ಕೆ ಕರ್ನಾಟಕದ ಗೋಲ್ ಕೀಪರ್ ಭರತ್ ಚೆತ್ರಿ ಅವರನ್ನು ಆಯ್ಕೆ ಮಾಡಿದೆ. ತಂಡದ ಸಂಪರ್ಕ ಆಟಗಾರ ಸರ್ದಾರ್ ಸಿಂಗ್ ಉಪನಾಯಕನ ಜವಾಬ್ದಾರಿ ಹೊತ್ತಿದ್ದಾರೆ.
ಸೋಮವಾರ ಪ್ರಕಟಿಸಲಾದ 16 ಸದಸ್ಯರ ತಂಡದಲ್ಲಿ ಕೇವಲ 2 ಬದಲಾವಣೆ ಮಾಡಲಾಗಿದೆ. ಸುಲ್ತಾನ್ ಅಜ್ಲಾನ್ ಷಾ ಹಾಕಿ ಟೂರ್ನಿಯಲ್ಲಿ ಮೂರನೇ ಸ್ಥಾನ ಪಡೆದ ತಂಡವನ್ನೇ ಉಳಿಸಿಕೊಳ್ಳಲಾಗಿದ್ದು, ತಂಡದ ಪ್ರಮುಖ ಮುನ್ಪಡೆ ಆಟಗಾರ ಯುವರಾಜ್ ವಾಲ್ಮೀಕಿ ಮತ್ತು ರೂಪಿಂದರ್ ಸಿಂಗ್ ಬದಲು ಕರ್ನಾಟಕದವರೇ ಆದ ಇಗ್ನೇಸ್ ತಿರ್ಕಿ ಮತ್ತು ಗುರ್ವಿಂದರ್ ಸಿಂಗ್ ಚಾಂಡಿ ಅವರಿಗೆ ಸ್ಥಾನ ನೀಡಲಾಗಿದೆ.
ವಾಲ್ಮೀಕಿ ಮತ್ತು ರೂಪಿಂದರ್ ಸಿಂಗ್ ಅವರನ್ನು ತಂಡದಿಂದ ಕೈಬಿಡುವ ಸಾಧ್ಯತೆಗಳು ಇದ್ದವು. ಫೆಬ್ರವರಿಯಲ್ಲಿ ನಡೆದ ಒಲಿಂಪಿಕ್ಸ್ ಅರ್ಹತಾ ಸುತ್ತಿನಲ್ಲಿ ವಾಲ್ಮೀಕಿ ಗಾಯಗೊಂಡಿದ್ದರು. ಇದರ ಹೊರತಾಗಿಯೂ ಮಲೇಶ್ಯದಲ್ಲಿ ನಡೆದ ಅಜ್ಲಾನ್ ಷಾ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿತ್ತು.

ಬಾಲಾವಾಡಿಯಲ್ಲಿ ಜೂನ್ 6 ಮತ್ತು 7 ರಂದು ನಡೆದ ಎರಡು ದಿನಗಳ ಆಯ್ಕೆ ಟ್ರಯಲ್ಸ್ ಅನಂತರ ತಂಡವನ್ನು ಅಂತಿಮಗೊಳಿಸಲಾಯಿತು. ತಂಡದಲ್ಲಿ ಇಬ್ಬರು ಗೋಲ್ಕೀಪರ್ಗಳಿಗೆ ಅವಕಾಶ ನೀಡಲು ತೀರ್ಮಾನಿಸಲಾಯಿತು. ಇದರಿಂದ ಭರತ್ ಚೆತ್ರಿ ಜೊತೆಗೆ ಪಿ.ಆರ್. ಶ್ರೀಜೇಶ್ ಕೂಡ ಸ್ಥಾನ ಪಡೆದರು.
ಜೂನ್ 27ರಿಂದ ಆಗಸ್ಟ್ 12ರವರೆಗೆ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸರವಣ್ಜೀತ್ ಸಿಂಗ್ ಮತ್ತು ಕೊಥಜೀತ್ ಸಿಂಗ್ ಮೀಸಲು ಆಟಗಾರರಾಗಿ ತಂಡದೊಂದಿಗೆ ಪ್ರಯಾಣಿಸಲಿದ್ದಾರೆ. 16 ಆಟಗಾರರ ಪೈಕಿ ಯಾರಾದರೂ ಒಬ್ಬರು ಗಂಭೀರವಾಗಿ ಗಾಯಗೊಂಡರೆ ಮಾತ್ರ ಈ ಇಬ್ಬರು ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ ಎಂದು ಹಾಕಿ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.

ತಂಡದ ಹಿರಿಯ ಆಟಗಾರ ಇಗ್ನೇಸ್ ತಿರ್ಕಿ, ಪೆನಾಲ್ಟಿ ತಜ್ಞರಾದ ಸಂದೀಪ್ ಸಿಂಗ್ ಮತ್ತು ವಿ.ಆರ್. ರಘುನಾಥ್ ಅವರೊಂದಿಗೆ ರಕ್ಷಣಾ ವಿಭಾಗದ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.
ಸಂಪರ್ಕ ವಿಭಾಗವನ್ನು ಸರ್ದಾರ್ ಸಿಂಗ್ ಮುನ್ನಡೆಸಲಿದ್ದು, ಅವರಿಗೆ ಮನ್ಪ್ರೀತ್ ಸಿಂಗ್, ಬೀರೇಂದ್ರ ಲಾಕ್ರಾ ಮತ್ತು ಗುರ್ಬಜ್ ಸಿಂಗ್ ಕೈ ಜೋಡಿಸಲಿದ್ದಾರೆ.
ಸ್ನಾಯು ಸೆಳೆತದಿಂದ ಚೇತರಿಸಿಕೊಂಡಿರುವ ಗುರ್ವಿಂದರ್ ಸಿಂಗ್ ಚಾಂಡಿ, ಶಿವೇಂದ್ರ ಸಿಂಗ್, ದಾನೀಶ್ ಮುಜಾ¤ಬಾ, ತುಷಾರ್ ಖಾಂಡೇಕರ್, ಎಸ್.ವಿ. ಸುನೀಲ್, ಧರಮ್ವೀರ್ ಸಿಂಗ್ ಮತ್ತು ಎಸ್.ಕೆ. ಉತ್ತಪ್ಪ ಮುನ್ಪಡೆ ವಿಭಾಗವನ್ನು ಮುನ್ನಡೆಸಲಿದ್ದಾರೆ.
ಭಾರತ ಹಾಕಿ ತಂಡ
ಗೋಲ್ ಕೀಪರ್: ಭರತ್ ಚೆತ್ರಿ, ಪಿ.ಆರ್. ಶ್ರೀಜೇಶ್.
ಡಿಫೆಂಡರ್: ಇಗ್ನೇಸ್ ತಿರ್ಕಿ, ಸಂದೀಪ್ ಸಿಂಗ್, ವಿ.ಆರ್. ರಘುನಾಥ್.
ಮಿಡ್ ಫೀಲ್ಡರ್: ಸರ್ದಾರ್ ಸಿಂಗ್, ಮನ್ಪ್ರೀತ್ ಸಿಂಗ್, ಬೀರೇಂದ್ರ ಲಾಕ್ರಾ, ಗುರ್ಬಜ್ ಸಿಂಗ್.
ಫಾರ್ವಡ್ರ್ಸ: ಗುರ್ವಿಂದರ್ ಸಿಂಗ್ ಚಾಂಡಿ, ಶಿವೇಂದ್ರ ಸಿಂಗ್, ದಾನೀಶ್ ಮುಜಾ¤ಬಾ, ತುಷಾರ್ ಖಾಂಡೇಕರ್, ಎಸ್.ವಿ. ಸುನೀಲ್, ಧರಮ್ವೀರ್ ಸಿಂಗ್, ಎಸ್.ಕೆ. ಉತ್ತಪ್ಪ.
ಅಧಿಕಾರಿಗಳು: ಮೈಕಲ್ ನಾಬ್ಸ್ (ಪ್ರಧಾನ ಕೋಚ್), ಮೊಹಮ್ಮದ್ ರಿಯಾಜ್ (ಕೋಚ್), ಕ್ಲಾರೆನ್ಸ್ ಲೋಬೊ (ಕೋಚ್), ಡೇವಿಡ್ ಜಾನ್ (ಫಿಸಿಯೊ), ಶ್ರೀಕಾಂತ್ ಅಯ್ಯಂಗಾರ್ (ಮ್ಯಾನೇಜರ್), ಹರಿ ಶಂಕರ್ ನಾರಾಯಣ್ (ವೀಡಿಯೋ ಅನಾಲಿಸ್ಟ್).