ರಾಮನಗರ: ಕಳೆದ ನಾಲ್ಕು ದಿನಗಳಿಂದ ವಿವಾದದ ಕೇಂದ್ರ ಬಿಂದುವಾಗಿ ರಾಜ್ಯದ ಗಮನ ಸೆಳೆದಿದ್ದ ಬಿಡದಿಯ ನಿತ್ಯಾನಂದ ಧ್ಯಾನಪೀಠಕ್ಕೆ ತಾತ್ಕಾಲಿಕ ಬೀಗ ಜಡಿಯಲು ಮುಖ್ಯಮಂತ್ರಿ ಆದೇಶ ನೀಡಿದ ಹಿನ್ನೆಲೆಯಲ್ಲಿ ಭಕ್ತಾದಿಗಳು ಆಶ್ರಮ ಖಾಲಿ ಮಾಡಿದ್ದಾರೆ.ಧ್ಯಾನಪೀಠದ ಸಿಬ್ಬಂದಿ ಸಹ ತಮ್ಮ ಗಂಟು ಮೂಟೆ ಕಟ್ಟಿ ಹೊರ ಹೋಗಲು ಸಿದ್ಧತೆ ನಡೆಸಿದ್ದು, ಬೀಗ ಮುದ್ರೆ ಬೀಳದಿರುವುದರಿಂದ ಅವರು ಅಲ್ಲಿಯೇ ಉಳಿದುಕೊಂಡಿದ್ದಾರೆ.ತೀವ್ರ ಚಟುವಟಿಕೆ:ಧ್ಯಾನಪೀಠಕ್ಕೆ ತಾತ್ಕಾಲಿಕ ಬೀಗ ಮುದ್ರೆ ಹಾಕುವಂತೆ ಮುಖ್ಯಮಂತ್ರಿ ಸದಾನಂದ ಗೌಡ ಬೆಂಗಳೂರಿನಲ್ಲಿ ಆದೇಶಿಸುತ್ತಿರುವಂತೆಯೇ ಧ್ಯಾನಪೀಠದ ಉತ್ತರದ ದ್ವಾರದಲ್ಲಿ ಎಂದೂ ಕೆಲವು ಚಟುವಟಿಕೆಗಳು ಕಂಡು ಬಂದವು.ಮುಖ್ಯಮಂತ್ರಿ ಆದೇಶದ ನಂತರ ಧ್ಯಾನಪೀಠದ ಸುತ್ತ ಹೆಚ್ಚಿನ ಸಿಬ್ಬಂದಿಯನ್ನು ಜಿಲ್ಲಾಡಳಿತ ನಿಯೋಜಿಸಿದ್ದು, ಹದ್ದಿನ ಕಣ್ಣಿಟ್ಟಿದ್ದಾರೆ. ಬೆಳಗ್ಗೆ ಹಲವು ಕಾರುಗಳು ಆಶ್ರಮದಿಂದ ಹೊರಹೋಗಿದ್ದು, ಭಕ್ತರು ಇದರಲ್ಲಿದ್ದರು ಎಂದು ಸ್ಥಳೀಯರು ತಿಳಿಸಿದರು.ಹಾರ್ಡ ಡಿಸ್ಕ್ ಪತ್ತೆ:ಧ್ಯಾನಪೀಠದಿಂದ ಹೊರ ಹೊರಟಿದ್ದ ಎಲ್ಲ ಭಕ್ತಾದಿಗಳು ಮತ್ತು ಆಶ್ರಮದ ಸಿಬ್ಬಂದಿಗಳನ್ನು ಪೊಲೀಸರು ತಪಾಸಣೆ ನಡೆಸಿ ಕಳುಹಿಸಿದರು. ತಪಾಸಣೆ ಮಾಡುತ್ತಿದ್ದ ವೇಳೆ ವಿದೇಶಿ ಮಹಿಳೆಯೊಬ್ಬರ ಬ್ಯಾಗಿನಲ್ಲಿ ಹಾರ್ಡ್ ಡಿಸ್ಕ್ ಪತ್ತೆಯಾಗಿದ್ದರಿಂದ ಆ ಮಹಿಳೆಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಹಾರ್ಡ್ ಡಿಸ್ಕ್ನಲ್ಲಿರುವ ಮಾಹಿತಿ ಧ್ಯಾನಪೀಠಕ್ಕೆ ಪೂರಕವಾಗಿಲ್ಲ ಎಂಬುದು ದೃಢಪಡಿಸಿಕೊಂಡ ನಂತರವಷ್ಟೇ ಆ ಮಹಿಳೆಯನ್ನು ಬಿಡಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಧ್ಯಾನಪೀಠದ ಕುರಿತು ಹೆಚ್ಚಿನ ಮಾಹಿತಿ ನೀಡಲು ಪೊಲಿಸ್ ಅಧಿಕಾರಿಗಳು ನಿರಾಕರಿಸಿದರು.ಇನ್ನೂ ಬೀಳದ ಬೀಗ:ಧ್ಯಾನಪೀಠಕ್ಕೆ ಬೀಗಮುದ್ರೆ ಹಾಕುವಂತೆ ಮುಖ್ಯಮಂತ್ರಿ ಆದೇಶ ನೀಡಿದ್ದರೂ, ಅಧಿಕೃತ ಆದೇಶವಿನ್ನೂ ಬಂದಿಲ್ಲ. ಸರ್ಕಾರದಿಂದ ಧ್ಯಾನಪೀಠಕ್ಕೆ ಬೀಗ ಮುದ್ರೆ ಹಾಕುವಂತೆ ಅಧಿಕೃತ ಆದೇಶ ಬಂದ ಮೇಲಷ್ಟೆ ಜಿಲ್ಲಾಧಿಕಾರಿ ಬೀಗಮುದ್ರೆ ಹಾಕುವ ಕಾರ್ಯಕ್ಕೆ ಮುಂದಾಗುತ್ತಾರೆ ಎಂದು ಜಿಲ್ಲಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ..