ಪುತ್ತೂರು : ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸಮುದ್ರವಿದ್ದರೂ ಇಲ್ಲಿನ ಹೆಚ್ಚಿನ ಹೊಟೇಲುಗಳಲ್ಲಿ ಮೀನು ಪದಾರ್ಥ ಮತ್ತು ಕರಿದ ಮೀನುಗಳಿಗೆ ದುಬಾರಿ ದರ ಯಾಕೆ ಎಂದು ಗ್ರಾಹಕರಿಗೆ ಅರ್ಥವಾಗುವುದಿಲ್ಲ.ಭಾರೀ ಬೇಡಿಕೆ ಇರುವ ಅಂಜಲ್ ಮೀನಿಗೆ ಕೆ.ಜಿ.ಗೆ 500 ರೂ. ದರ ಮಾರುಕಟ್ಟೆಯಲ್ಲಿದೆ. ಅದೇ ಅಂಜಲನ್ನು ಚಕ್ರದ ಆಕಾರದಲ್ಲಿ ತೆಳುವಾಗಿ ಕತ್ತರಿಸಿ ಮಾಡಿದ ಒಂದು ತುಂಡಿಗೆ ಹೋಟೇಲ್ನಲ್ಲಿ ಕನಿಷ್ಠ 150ರಿಂದ ತೊಡಗಿ 250 ರೂ.ಗಳ ತನಕ ದರ ವಿಧಿಸಲಾಗುತ್ತದೆ. ಹೆಚ್ಚಿನ ಹೊಟೇಲುಗಳ ಮೆನು ಕಾರ್ಡ್ಗಳಲ್ಲಿ ಮೀನಿನ ಖಾದ್ಯಗಳಿಗೆ ಸಂಬಂಧಪಟ್ಟ ದರವನ್ನು ನಮೂದಿಸುವುದಿಲ್ಲ. ಬದಲಾಗಿ ಮೀನುಗಳ ಹೆಸರಿನ ಮುಂದೆ ದರ ಬರೆಯುವ ಬದಲು ರೇಟ್ 'ಸೀಸನಲ್' ಎಂದು ಮುದ್ರಿಸಲಾಗಿದೆ.ಯಾವುದೇ ಮೀನುಗಳ ಪದಾರ್ಥ ಅಥವಾ ಇತರ ಖಾದ್ಯಗಳಿಗೆ ಹೊಟೇಲುಗಳಲ್ಲಿ ದರ ನಿಗದಿಗೆ ಯಾವುದೇ ಮಾನದಂಡವಿಲ್ಲ ಮತ್ತು ಕಾನೂನಿಲ್ಲಿಯೂ ದರ ನಿಯಂತ್ರಣದ ಕುರಿತು ಯಾವುದೇ ಮಾಹಿತಿ ಇಲ್ಲ.ಆದ ಕಾರಣವೇ ಮೀನುಗಾರಿಕೆ ಇರುವ ಅವಿಭಜಿತ ದ.ಕ. ಜಿಲ್ಲೆಯ ಹೊಟೇಲುಗಳಲ್ಲಿ ಮೀನುಗಳ ಪದಾರ್ಥ ಮತ್ತು ಖಾದ್ಯಗಳಿಗೆ ಲಗಾಮಿಲ್ಲದ ದರ ವಿಧಿಸಲಾಗುತ್ತದೆ.ಹೊರ ಜಿಲ್ಲೆಗಳಲ್ಲಿ ಸಮುದ್ರ ಇಲ್ಲ. ಸಮುದ್ರ ಇರುವ ಜಿಲ್ಲೆಗಳಿಂದ ಅಂತಹ ಪ್ರದೇಶಗಳಿಗೆ ಮೀನು ಸರಬರಾಜಾಗುತ್ತದೆ. ಅಂತಹ ಪ್ರದೇಶಗಳಲ್ಲಿ ಕೂಡ ಇಲ್ಲದಷ್ಟು ದುಬಾರಿ ದರ ಮೀನುಗಾರಿಕೆ ಇರುವ ದ.ಕ. ಜಿಲ್ಲೆಯ ಹೊಟೇಲುಗಳಲ್ಲಿದೆ. ಮಾಂಜಿ, ಸಿಗಡಿ ಮೊದಲಾದ ಮೀನುಗಳ ಖಾದ್ಯಗಳ ದರ ಕೇಳಿದಾಗಲೇ ಬೆವರುವ ಸ್ಥಿತಿ ಇದೆ.ಒಂದು ಕೆ.ಜಿ. ಮೀನಿನ ದರವನ್ನು ಒಂದು ತುಂಡು ಕರಿದ ಮೀನಿಗೆ ವಿಧಿಸುವುದರಲ್ಲಿ ಯಾವ ನ್ಯಾಯವೂ ಇಲ್ಲ. ಪುರಸಭೆ, ನಗರ ಸಭೆ, ನಗರಪಾಲಿಕೆಗಳ ಅಧಿಕಾರಿಗಳು ತನಿಖೆ ನಡೆಸಬೇಕು. ಗ್ರಾಹಕ ಹಿತಾಸಕ್ತಿಯಿಂದ ಮೀನು ಖಾದ್ಯ ದರ ನಿಗದಿ ಕುರಿತಂತೆ ನಿಯಂತ್ರಣ ಕಾಯಿದೆಯನ್ನು ಜಾರಿಗೊಳಿಸುವ ಅಗತ್ಯವಿದೆ ಎಂದು ಸ್ಥಳೀಯರಾದ ಸಂಜೀವ ಗಾಣಿಗ ಮತ್ತು ಅಶ್ರಫ್ ಬಸ್ತಿಕಾರ್ ಅವರು ಅಭಿಪ್ರಾಯಿಸಿದರು.
Why this anjaal...anjaal... anjaal Fry...!!!!!