ಯಾದಗಿರಿ: ಕವಿಯಾಗುವವನಿಗೆ ನೋವಿರಬೇಕು. ಅಂದಾಗ ಮಾತ್ರ ಕಾವ್ಯ ಸೃಷ್ಟಿಯಾಗಲು ಸಾಧ್ಯ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಸಿದ್ಧರಾಮ ಹೊನ್ಕಲ ಅಭಿಪ್ರಾಯಪಟ್ಟರು.ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಸೋಮವಾರ ಕಸಾಪ ತಾಲೂಕು ಘಟಕದ ನೂತನ ಅಧ್ಯಕ್ಷರ ಪದಗ್ರಹಣ ಮತ್ತು ಅಧಿಕಾರ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಒಬ್ಬ ಕವಿ ಜಗತ್ತನ್ನು ಕಾಣುವುದರ ಜೊತೆಗೆ ಸಮಾಜಿಕ ಕಳಕಳಿ ಮತ್ತು ನೋವಿನ ಅರಿವು ಇದ್ದಾಗ ಮಾತ್ರ ಉತ್ತಮ ಕಾವ್ಯಗಳು ಹೊರಬರುತ್ತವೆ ಎಂದರು.ಒತ್ತಡ ಮತ್ತು ಜಂಜಾಟದಂತಹ ಇಂದಿನ ಸಂದರ್ಭದಲ್ಲಿ ನಾವು ನಮ್ಮಲ್ಲಿರುವ ಅಮೂಲ್ಯವಾದ ಪುಸ್ತಕಗಳನ್ನು ಓದುವ ಗೀಳನ್ನೇ ಬೆಳೆಸಿಕೊಂಡಿಲ್ಲ. ಬದಲಾಗಿ ದೃಶ್ಯ ಮಾಧ್ಯಮಕ್ಕೆ ಮರುಳಾಗಿ ನಮ್ಮ ಮಕ್ಕಳಿಗೂ ಅದೇ ಪರಂಪರೆ ಬೆಳೆಸುತ್ತಿದ್ದೇವೆ. ಜಾಗತೀಕರಣದಿಂದ ನಾಗಲೋಟದಲ್ಲಿ ಓಡುತ್ತಿರುವ ನಮ್ಮ ಸಮಾಜದಲ್ಲಿ ದೃಶ್ಯ ಮಾಧ್ಯಮಗಳು ಅಶ್ಲೀಲ ಚಿತ್ರಗಳನ್ನು ತೋರಿಸುತ್ತಿವೆ. ಮಾಧಕ ನೃತ್ಯಗಳನ್ನು ನಮ್ಮ ಮಕ್ಕಳು ನೋಡುವಂತಾಗಿದೆ. ಪೋಷಕರು ಈ ಬಗ್ಗೆ ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ ಎಂದರು.ಕಾರ್ಯಕ್ರಮದಲ್ಲಿ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಖ್ಯಾತ ನಾಟಕಕಾರ ಎಲ್.ಬಿ.ಕೆ. ಆಲ್ದಾಳ ಅವರನ್ನು ಸನ್ಮಾನಿಸಲಾಯಿತು. ಯುವ ಸಾಹಿತಿ ಡಾ| ಗಾಳೆಪ್ಪ ಪೂಜಾರಿ ವಿಶೇಷ ಉಪನ್ಯಾಸ ನೀಡಿದರು.ಚಿಗರಳ್ಳಿಯ ಶ್ರೀ ಸಿದ್ಧಬಸವ ಕಬೀರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ, ಮಾಜಿ ಅಧ್ಯಕ್ಷ ಬಸವಂತ್ರಾಯ ಮಾಲೀಪಾಟೀಲ, ಅಯ್ಯಣ್ಣ ಹುಂಡೇಕಾರ, ವಿ.ಸಿ. ರಡ್ಡಿ, ತಾಲೂಕು ಕಸಾಪ ನೂತನ ಅಧ್ಯಕ್ಷ ಶ್ರೀನಿವಾಸ ಕರ್ಲಿ ಇದ್ದರು.ಶಿಕ್ಷಕ ಸಾಹೆಬ್ಗೌಡ ಬಿರಾದರ ನಿರೂಪಿಸಿದರು. ಚಂದಪ್ಪ ಗುಂಜನೂರ ಸ್ವಾಗತಿಸಿದರು. ಪ್ರೀಯಾಂಕಾ ಅಶೋಕ ಪ್ರಾರ್ಥಿಸಿದರು. ಗುರಪ್ಪಚಾರ್ಯ ವಿಶ್ವಕರ್ಮ ವಂದಿಸಿದರು.