Udayavani | Jun 15, 2012
ಬೆಂಗಳೂರು : ರಾಜ್ಯದ ಹತ್ತು ಕಡೆ ಶ್ರೀಗಂಧ ತೋಟ ಬೆಳೆಯುವ 'ಸಿರಿ ಚಂದನವನ' ಯೋಜನೆಗೆ ಇನ್ನೊಂದು ತಿಂಗಳಲ್ಲಿ ಚಾಲನೆ ದೊರೆಯಲಿದೆ ಎಂದು ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, 500 ರಿಂದ 1000 ಎಕರೆ ಪ್ರದೇಶದಲ್ಲಿ ಶ್ರೀಗಂಧ ತೋಟ ಬೆಳೆಸಲಾಗುವುದು ಎಂದು ಹೇಳಿದರು.
ಕೋಲಾರ, ರಾಮನಗರ, ಬೆಂಗಳೂರು, ಮೈಸೂರು, ಶಿವಮೊಗ್ಗ, ಬೆಳಗಾವಿ, ಧಾರವಾಡ, ಚಿಕ್ಕಮಗಳೂರು, ತುಮಕೂರು, ಹಾಸನ, ಬೀದರ್ನಲ್ಲಿ 10 ಸಾವಿರ ಎಕರೆ ಅರಣ್ಯ ಭೂಮಿ ಇದಕ್ಕಾಗಿ ಗುರುತಿಸಲಾಗಿದೆ. ಪ್ರತಿ ಎಕರೆಯಲ್ಲಿ 1 ಸಾವಿರ ಸಸಿಗಳಂತೆ 10 ಲಕ್ಷ ಸಸಿ ನೆಡಲಾಗುವುದು. ಐದು ಕೋಟಿ ರೂ. ವೆಚ್ಚದ ಈ ಯೋಜನೆ ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಅರಣ್ಯ ಇಲಾಖೆಯು ಪ್ರತಿವರ್ಷ ನಡೆಸುವ ವನಮಹೋತ್ಸವ ಕಾರ್ಯಕ್ರಮದಡಿ ಶಾಶ್ವತವಾಗಿ ವರಮಾನ ಬರುವ ಶ್ರೀಗಂಧ ಬೆಳೆಸಲು ತೀರ್ಮಾನಿಸಲಾಗಿದೆ. ಒಂದು ಮರವನ್ನು 20 ರಿಂದ 25 ವರ್ಷಗಳ ಕಾಲ ಸಂರಕ್ಷಣೆ ಮಾಡಿದರೆ 1 ಕೋಟಿ ರೂ. ವರಮಾನ ಬರುತ್ತದೆ ಎಂದು ಹೇಳಿದರು.
ಕ್ರಮ
ಹಾಸನ ಜಿಲ್ಲೆ ಆಲೂರಿನಲ್ಲಿ ಪುಂಡಾನೆಗಳ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಹಸಿರುಪೀಠ ರಚಿಸಿರುವ ತಜ್ಞರ ಸಮಿತಿ ಈ ತಿಂಗಳು ವರದಿ ನೀಡಲಿದ್ದು ನಂತರ ಕ್ರಮ ಕೈಗೊಳ್ಳಲಾಗುವುದು. ಮಧ್ಯಪ್ರದೇಶಕ್ಕೆ 11 ಪಳಗಿದ ಆನೆಗಳ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶ ಪಾಲನೆ ಮಾಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.