Udayavani | Jun 15, 2012
ಬೆಂಗಳೂರು : 'ನಿತ್ಯಾನಂದ ನನ್ನ ವಿರುದ್ಧ ಒಂದಲ್ಲ , ಒಂದು ಸಾವಿರ ಪ್ರಕರಣ ದಾಖಲಿಸಲಿ. ಚಿಂತೆಯಿಲ್ಲ, ಸಾರ್ವಜನಿಕರ ಒಳಿತಿಗಾಗಿ ನಾನು ಜೈಲಿಗೆ ಹೋಗಲು ಸಿದ್ಧ'.
ಇದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರ ಉವಾಚ.
ನಗರದ ಕಂಠೀರವ ಸ್ಟುಡಿಯೋದಲ್ಲಿ ನಡೆದ ನೂತನ ಚಿತ್ರೀಕರಣ ಫ್ಲೋರ್ ಉದ್ಘಾಟನಾ ಸಮಾರಂಭ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, 'ರಾಜ್ಯದ ಹಿತದೃಷ್ಠಿಯಿಂದ ನಿತ್ಯಾನಂದ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಪ್ರಕರಣ ದಾಖಲಿಸುವುದಾದರೆ, ದಾಖಲಿಸಲಿ. ಸಾರ್ವಜನಿಕರಿಗೆ ಒಳ್ಳೆಯದಾಗುವುದಾದರೆ ಜೈಲಿಗೆ ಹೋಗಲು ಸದಾ ಸಿದ್ಧ. ಇದರಲ್ಲಿ ನನಗೆ ಯಾವುದೇ ಬೇಸರ ಇಲ್ಲ' ಎಂದು ನಿತ್ಯಾನಂದ ಹೇಳಿಕೆಗೆ ಪ್ರತ್ಯುತ್ತರ ನೀಡಿದರು.
ಸರ್ಕಾರ ಮುನ್ನಡೆಸುವಾಗ ರಾಜ್ಯದ ಹಿತಾದೃಷ್ಟಿ ಮುಖ್ಯವಾಗಿರುತ್ತದೆಯೇ ಹೊರತು ಕೆಲವರ ಅಪೇಕ್ಷೆಗೆ ತಕ್ಕಂತೆ ನಡೆದುಕೊಳ್ಳಲು ಸಾಧ್ಯವಿಲ್ಲ. ನಿತ್ಯಾನಂದ ಹೇಳಿಕೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ನಿತ್ಯಾನಂದ ವಿರುದ್ಧ ಕ್ರಮಕೈಗೊಳ್ಳುವ ಮುನ್ನ ಸ್ಪಷ್ಟ ಮಾಹಿತಿ ಕಲೆ ಹಾಕಿದ್ದು, ಆತುರದ ನಿರ್ಧಾರ ಕೈಗೊಂಡಿಲ್ಲ. ಕೂಲಂಕಷವಾಗಿ ಪರಿಶೀಲಿಸಿಯೇ ಕ್ರಮ ಕೈಗೊಳ್ಳಲಾಗಿದೆ ಎಂದರು.
ಬಿಡದಿ ಆಶ್ರಮದಲ್ಲಿ ನಡೆದ ಚಟುವಟಿಕೆಗಳ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಕಾನೂನು ರೀತ್ಯ ಕ್ರಮಕೊಳ್ಳಲಾಗಿದೆ. ಇದರಲ್ಲಿ ಯಾವುದೇ ದುರುದ್ದೇಶ ಇಲ್ಲ. ಕೆಲವು ಮಾಧ್ಯಮಗಳು ಸರ್ಕಾರ ವಿರುದ್ದ ಟೀಕೆ ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.
ನಿತ್ಯಾನಂದ ಮಾತ್ರವಲ್ಲ, ಸಮಾಜದ ಶಾಂತಿಗೆ ಧಕ್ಕೆಯಾಗುವಂತೆ ಯಾರೇ ನಡೆದುಕೊಂಡರೂ, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಬಿಡದಿಯಲ್ಲಿನ ರಂಪಾಟದಿಂದ ಕೆಲವು ಸಂಘಟನೆ ಸದಸ್ಯರನ್ನು ಕೂಡ ಬಂಧಿಸಲಾಗಿದೆ. ನಿತ್ಯಾನಂದ ಘರ್ಷಣೆ ವಿಚಾರದಲ್ಲಿ ಸರ್ಕಾರ ತಾರತಮ್ಯ ಧೋರಣೆ ಮಾಡಿಲ್ಲ ಎಂದು ತಿಳಿಸಿದರು.