Udayavani | Jun 20, 2012
ಮೂಡಬಿದಿರೆ : ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಂಗಳವಾರವಷ್ಟೇ ಹೆರಿಗೆಯಾಗಿದ್ದ ಮಹಿಳೆಯನ್ನು ಪತಿಯೇ ಕತ್ತಿಯಿಂದ ಕೊಚ್ಚಿ ಕೊಲೆಗೈದು, ಮಗುವಿಗೂ ಕಡಿದು ಪರಾರಿಯಾಗಿದ್ದಾನೆ.
ತೋಡಾರು ನಾರಾಯಣ ಮತ್ತು ರಾಜೀವಿ ಅವರ ಪುತ್ರಿ ಎಡಪದವಿನ ಜಯಂತಿ ಮೃತಪಟ್ಟವರು. ಬುಧವಾರ ರಾತ್ರಿ ಘಟನೆ ಸಂಭವಿಸಿದೆ. ಆರೋಪಿ ಜಯಂತ ಕತ್ತಿಯನ್ನು ಆಸ್ಪತ್ರೆ ಗೇಟಿನ ಬಳಿ ಎಸೆದು ತಲೆಮರೆಸಿಕೊಂಡಿದ್ದಾನೆ.
ಜಯಂತಿ ಅವರು ಮಂಗಳವಾರ ಗಂಡು ಮಗುವಿಗೆ ಜನ್ಮ ನೀಡಿದ್ದು, ಆಸ್ಪತ್ರೆಯ ಜನರಲ್ ವಾರ್ಡ್ನಲ್ಲಿ ದಾಖಲಿಸಲಾಗಿತ್ತು. ಬುಧವಾರ ರಾತ್ರಿ 10.55ರ ಸುಮಾರಿಗೆ ಇದ್ದಕ್ಕಿದ್ದಂತೆ ನುಗ್ಗಿ ಬಂದ ಪತಿ ಜಯಂತ ಪತ್ನಿಯನ್ನು ಕತ್ತಿಯಿಂದ ಕೊಚ್ಚಿದ್ದಾನೆ. ಕಡಿದ ರಭಸಕ್ಕೆ ಜಯಂತಿ ಅವರ ಸಮೀಪಲ್ಲಿದ್ದ ನರ್ಸ್ ಅವರ ಮೈಗೆ ರಕ್ತ ಚಿಮ್ಮಿದೆ.
ಜಯಂತಿಯ ಜತೆಗೆ ಆಕೆಯ ತಾಯಿ ಮತ್ತು ತಂಗಿ ಇದ್ದರು. ಜನರಲ್ ವಾರ್ಡ್ ಆಗಿರುವುದ ರಿಂದ ಇತರ ಸಾಕಷ್ಟು ಜನರೂ ಇದ್ದು ಆರೋಪಿ ಎಲ್ಲರನ್ನೂ ಕೊಲ್ಲುವುದಾಗಿ ಬೆದರಿಸಿದ್ದಾನೆ.
ಜಯಂತ ವೃತ್ತಿಯಲ್ಲಿ ಮೆಕ್ಯಾನಿಕ್ ಆಗಿದ್ದು, ಜಯಂತಿ ಜತೆಗೆ 5-6 ತಿಂಗಳ ಹಿಂದೆ ವಿವಾಹವಾಗಿತ್ತು. ಅವರೊಳಗೆ ವಿವಾಹ ಪೂರ್ವ ಸಂಬಂಧವಿದ್ದು, ಆಕೆ ಗರ್ಭ ಧರಿಸಿದ ಹಿನ್ನೆಲೆಯಲ್ಲಿ ಬಲವಂತ ವಾಗಿ ಮದುವೆ ಮಾಡಲಾಗಿತ್ತು ಎನ್ನಲಾಗಿದೆ. ಮಗುವಿನ ಕೈಗೆ ತೀವ್ರ ಗಾಯವಾಗಿದ್ದು, ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ.