Udayavani | Jun 20, 2012
- ರಂಜಿತಾ ರಾಸಲೀಲೆ, ಆರತಿ ರಾವ್ ಅತ್ಯಾಚಾರ ಆರೋಪ ಪ್ರಕರಣ
- ಸಿಐಡಿ ಪೊಲೀಸರ ಮನವಿಗೆ ರಾಮನಗರ ಕೋರ್ಟ್ ಸಮ್ಮತಿ
ರಾಮನಗರ: ನಟಿ ರಂಜಿತಾ ಜೊತೆಗಿನ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧ್ವನಿ ಮತ್ತು ರಕ್ತ ಪರೀಕ್ಷೆಗೆ ಸಿಐಡಿ ಪೊಲೀಸರೊಂದಿಗೆ ಸಹಕರಿಸುವಂತೆ ಸ್ಥಳೀಯ ಪ್ರಧಾನ ಸಿವಿಲ್ ನ್ಯಾಯಾಲಯ ಬಿಡದಿ ಧ್ಯಾನಪೀಠಂನ ನಿತ್ಯಾನಂದ ಸ್ವಾಮಿಗೆ ಬುಧವಾರ ತಾಕೀತು ಮಾಡಿದೆ.
ರಂಜಿತಾ ಜೊತೆ ರಾಸಲೀಲೆ ನಡೆಸಿದ ಪ್ರಕರಣ ಬಹಿರಂಗವಾದ ನಂತರ ನಿತ್ಯಾನಂದನ ವಿರುದ್ಧ ಅತ್ಯಾಚಾರ ಮತ್ತಿತರ ಪ್ರಕರಣಗಳಿಗೆ ಸಂಬಂಧಿಸಿದಂತೆ 2010ರಲ್ಲಿ ಸ್ಥಳೀಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು.
ಇದೇ ವೇಳೆ ನಿತ್ಯಾನ ಶಿಷ್ಯೆ ಆರತಿ ರಾವ್, ಆತನ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ್ದರು. ಈ ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ನಿತ್ಯಾನಂದನ ಧ್ವನಿ ಮತ್ತು ರಕ್ತ ಪರೀಕ್ಷೆಗೆ ಅನುಮತಿ ನೀಡಬೇಕು ಎಂದು ನ್ಯಾಯಾಲಯವನ್ನು ಕೋರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಸಿವಿಲ್ ನ್ಯಾಯಾಧೀಶೆ ವಿ.ಪುಷ್ಪಾವತಿ ಪೊಲೀಸರ ಮನವಿಗೆ ಸಮ್ಮತಿಸಿದ್ದು, ಸಿಐಡಿ ಪೊಲೀಸರೊಂದಿಗೆ ಧ್ವನಿ ಮತ್ತು ರಕ್ತ ಪರೀಕ್ಷೆಗೆ ನಿತ್ಯಾನಂದ ಸ್ವಾಮಿ ಸಹಕರಿಸಬೇಕು ಎಂದು ತಾಕೀತು ಮಾಡಿದರು. ಅಲ್ಲದೆ, ಸಿಐಡಿ ಪೊಲೀಸರ ಮನವಿಯನ್ನು ಪರಿಗಣಿಸಬಾರದು ಎಂಬ ನಿತ್ಯಾ ಪರ ವಕೀಲ ಮುದ್ದುಮಲ್ಲಯ್ಯ ಅರ್ಜಿಯನ್ನು ವಜಾಗೊಳಿಸಿದರು.
ಪ್ರಕರಣವೇನು?: 2010ರಲ್ಲಿ ನಿತ್ಯಾನಂದ ಸ್ವಾಮಿಯ ಕಾರು ಚಾಲಕ ಲೆನಿನ್ ಕುರುಪ್ಪನ್, ನಿತ್ಯಾನಂದ ಸ್ವಾಮಿ ಮತ್ತು ಚಿತ್ರನಟಿ ರಂಜಿತಾ ಅವರ ರಾಸಲೀಲೆ ಇರುವ ಸಿಡಿಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದ. ಇದರಿಂದಾಗಿ ನಿತ್ಯಾನಂದನ ವಿರುದ್ದ ರಾಜ್ಯದೆಲ್ಲೆಡೆ ಅಕ್ರೋಶದ ಅಲೆ ಎದ್ದಿತ್ತು. ಇದೇ ಸಂದರ್ಭದಲ್ಲಿ ನಿತ್ಯಾನಂದನ ಶಿಷ್ಯೆ ಆರತಿರಾವ್ ಅವರು ನಿತ್ಯನ ವಿರುದ್ಧ ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದರು. ಲೆನಿನ್ ಮತ್ತು ಆರತಿ ರಾವ್ ಪ್ರಕರಣಗಳ ದೂರಿಗೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಿತ್ಯಾನಂದನ ವಿಚಾರಣೆ ನಡೆಸಿದ್ದರು. ಇದೇ ಸಂದರ್ಭದಲ್ಲಿ ಸುಮಾರು 50 ದಿನಗಳಿಗೂ ಹೆಚ್ಚು ಕಾಲ ನಿತ್ಯಾನಂದ ಕಾರಾಗೃಹ ವಾಸ ಅನುಭವಿಸಿದ್ದ.
ಲೆನಿನ್ ನೀಡಿದ್ದ ಸಿಡಿಯಲ್ಲಿ ಕೆಲವು ಧ್ವನಿ ಮತ್ತು ದೃಶ್ಯಗಳಿದ್ದು ಅದನ್ನು ಉನ್ನತ ಪರೀಕ್ಷೆಗೆಂದು ಸಿಐಡಿ ಪೊಲೀಸರು ವಿದೇಶಕ್ಕೆ ಕಳುಹಿಸಿದ್ದರು. ಅಲ್ಲದೆ, ಆರತಿ ರಾವ್ ನೀಡಿದ ದೂರಿಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಿ ಮಾಹಿತಿ ಕಲೆ ಹಾಕಿದ್ದರು. ಮೇಲಿನ ಎರಡೂ ಪ್ರಕರಣಗಳ ಉನ್ನತ ತನಿಖೆಗೆ ನಿತ್ಯಾನಂದ ಸ್ವಾಮಿಯ ಧ್ವನಿ ಮತ್ತು ರಕ್ತ ಪರೀಕ್ಷೆ ಅಗತ್ಯವಾಗಿದ್ದು, ಇದಕ್ಕೆ ನಿತ್ಯಾನಂದ ಸಹಕರಿಸುವಂತೆ ನ್ಯಾಯಾಲಯ ಆದೇಶಿಸಬೇಕು ಎಂದು ಸಿಐಡಿ ಪೊಲೀಸರು ನ್ಯಾಯಾಲಯದ ಮೊರೆ ಹೋಗಿದ್ದರು. ಸಿಐಡಿ ಪೊಲೀಸರ ಮನವಿಯನ್ನು ಪರಸ್ಕರಿಸಿದ ನ್ಯಾಯಾಧೀಶರು, ನಿತ್ಯಾನಂದ ತಮ್ಮ ಧ್ವನಿ ಮತ್ತು ರಕ್ತ ಪರೀಕ್ಷೆಗೆ ಸಿಐಡಿ ಪೊಲೀಸರಿಗೆ ಸಹಕಾರ ನೀಡಬೇಕೆಂದು ಆದೇಶ ನೀಡಿದ್ದಾರೆ.