ಡಾ.ಕೆ.ಪಿ.ಗುರುಸ್ವಾಮಿ | Jun 26, 2012
ವೆಲ್c ಹೇಳಿಕೊಟ್ಟ ಬದಲಾವಣೆ ಪಾಠದ ಮೊದಲ ಅಂಕ-ನಿಮ್ಮ ಪ್ರತಿ ದಿನ, ಹೊಸ ದಿನವಾಗಿರಲಿ.ಅವನು ಹೇಳಿದ್ದಿಷ್ಟೇ. ದಿನ ದಿನವೂ ಹೊಸತಾಗಿ, ಹೊಸಬರಾಗಿ. ಹೊಸ ಆಲೋಚನೆಗಳ ಜೊತೆ ದಿನ ಪ್ರಾರಂಭಿಸಿ. ಹಳೆಯ ಯಶಸ್ಸನ್ನೇ ತಲೆಯಲ್ಲಿಟ್ಟುಕೊಂಡು ಮತ್ತಲ್ಲಿರಬೇಡಿ. ನಿಮ್ಮ ಬಿಸಿನೆಸ್ ಅಭಿವೃದ್ಧಿಗೆ ಏನೇನು ಬದಲಾವಣೆಗಳು ಬೇಕೋ ಅದನ್ನೆಲ್ಲಾ ಮಾಡಿಕೊಳ್ಳುತ್ತಿರಿ. ಹಳೆ ಅಜೆಂಡಾಗಳನ್ನು ಹೊಸದಾಗಿ ರೂಪಿಸುತ್ತಾ, ಅಪ್ಡೇಟ್ ಮಾಡಿಕೊಳ್ಳುತ್ತಾ ಹೋಗಿ.
ಜಾಕ್ ಹೇಳುತ್ತಿದ್ದ ಮಾತುಗಳೇ ಸ್ವಾರಸ್ಯಕರವಾಗಿರುತ್ತಿದ್ದವು: "ನನಗೆ ಅನುಭವಕ್ಕೆ ಬಂದಿರುವ ಒಂದು ಅಂಶವೆಂದರೆ ಇವತ್ತು ಬಿಸಿನೆಸ್ ಫರ್ಮ್ಗಳೆಲ್ಲಾ ತುಂಬ ಜಡವಾಗಿಬಿಟ್ಟಿವೆ. ಅಮೆರಿಕಾದ ಬಿಸಿನೆಸ್ ಕ್ಷೇತ್ರ ಕೇವಲ ಅಧಿಕಾರಶಾಹಿಯಾಗಷ್ಟೇ ಯೋಚಿಸುತ್ತವೆ, ಮ್ಯಾನೇಜೆ¾ಂಟ್ ಮನವೊಲಿಕೆಯಲ್ಲೇ ಮುಗಿದುಹೋಗುತ್ತದೆ. ಆದರೆ ಅದು ಆ ಕಾಲಕ್ಕೆ ಸರಿಯಾಗಿತ್ತು. ಈಗಿನ ಕಾಲಕ್ಕಲ್ಲ. ಜಗತ್ತು ಎಷ್ಟು ಬದಲಾಗಿದೆ, ಅದರ ಬದಲಾವಣೆಯ ವೇಗ ಎಷ್ಟಿದೆ ಎಂದರೆ ನಮ್ಮ ಬಿಸಿನೆಸ್ ವ್ಯವಸ್ಥೆ ಪ್ರತಿಕ್ರಿಯೆ ಕೊಡುವುದಕ್ಕೂ ಮುನ್ನ ಮುಂದೆ ಸಾಗಿಬಿಟ್ಟಿರುತ್ತದೆ'.
ಹೀಗೆ ಹೇಳಿಕೊಂಡ ಜಾಕ್ ತನ್ನ ಬಿಸಿನೆಸ್ ಮಾಡೆಲ್ನಲ್ಲಿ ಒಂದು ಸ್ಟ್ರಾಟಜಿಯನ್ನು ರೂಪಿಸಿದ. ಅವನ ಪ್ರಕಾರ ಒಂದು ಬಿಸಿನೆಸ್ ಅಂದರೆ, ಸ್ಪರ್ಧೆ ಅಂತ ಒಂದೋ ಕಂಪನಿ ಮೊದಲ ಸ್ಥಾನದಲ್ಲಿರಬೇಕು. ಇಲ್ಲವೇ ಎರಡನೇ ಸ್ಥಾನದಲ್ಲಾದರೂ ಇರಲೇಬೇಕು. ಇಲ್ಲವೆಂದರೆ ಆ ಕಂಪನಿ ಇರುವುದಕ್ಕಿಂತ ಮುಚ್ಚುವುದು ಲೇಸು ಅಥವಾ ಕನಿಷ್ಟ ಮಾರಾಟವನ್ನಾದರೂ ಮಾಡಬೇಕು!
ಕಾರ್ ಲೋನ್, ಮನೆ ಲೋನ್, ಮನೆ ರಿಪೇರಿಗೂ ಲೋನ್.... ಬ್ಯಾಂಕಿಗೆ ಕಾಲಿಟ್ಟರೆ ಸ್ವಾಗತಿಸುವುದು ಜಾಹೀರಾತುಗಳು. ನೆಂಟರಿಷ್ಟರ ಮನೆಗೆ ಹೋದರೆ ಎದುರಾಗುವುದು ಲೋನ್ ಮಾತುಕತೆಗಳು. ಸಾಲ ಎನ್ನುವ ನೀರ ಮೇಲಿನ ಗುಳ್ಳೆ ನಿಜವೋ ಸುಳ್ಳೋ-ಗೊತ್ತಿಲ್ಲ. ಲೋನು ಕೊಡುವುದನ್ನು ಬ್ಯಾಂಕ್ ಕಡಿಮೆ ಮಾಡುತ್ತಿವೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಹೀಗೊಂದು ರಿಯಾಲಿಟಿ ಚೆಕ್.
ಬ್ಯಾಂಕ್ಗಳಲ್ಲಿ ಸಾಲ ಕೊಡಬೇಕಾದರೆ ಅದ್ಯತಾವಲಯಕ್ಕೆ ಬಹಳ ಪ್ರಾಮುಖ್ಯತೆ ಕೊಡುತ್ತದೆ. ಆದ್ಯತಾವಲಯ ಎಂದರೆ - ಗ್ರಾಮೀಣ ಸಾಲಗಳು, ಕುಶಲ ಕರ್ಮಿಗಳು, ಸಣ್ಣಪುಟ್ಟ ಉದ್ಯಮ, ಸ್ವಂತ ಉದ್ಯಮ, ಶಿಕ್ಷಣ ಸಾಲ ಹೀಗೆ ನಮಗೆ, ನಿಮಗೆ ಜೀವನಕ್ಕೆ ಅಗತ್ಯವಿರುವ ಸಾಲ.
ಬ್ಯಾಂಕಿನ ಇಡೀ ಠೇವಣಿಯಲ್ಲಿ ಶೇ.70ರಷ್ಟು ಬ್ಯಾಂಕಿನ ಕೈಯಲ್ಲೇ ಇರುತ್ತದೆ. ಇದರಲ್ಲಿ ಶೇ.40ರಷ್ಟು ಆದ್ಯತಾವಲಯಕ್ಕೆ ಕೊಡಬೇಕು. ಇದು ಆರ್ಬಿಐ ಮಾಡಿರುವ ಕಾನೂನು. ಒಂದು ಪಕ್ಷ ತಪ್ಪಿದರೆ ಕ್ರಮ ತೆಗೆದು ಕೊಳ್ಳಬಹುದು. ಶೇ.25ರಷ್ಟು ಶಾಸನಾರ್ಹ ಠೇವಣಿಗಳು, ಉಳಿದ ಶೇ.5ರಷ್ಟು ಹಣವನ್ನು ನಗದಾಗಿ ಹಾಗೇ ಇಟ್ಟು ಕೊಂಡಿರುತ್ತದೆ. ಹೀಗೆ ಬಂದ ಠೇವಣಿಯ ವಿಭಾಗವಾಗುತ್ತದೆ. ಬ್ಯಾಂಕುಗಳ ಮೂಲ ಉದ್ದೇಶ ಆದ್ಯತಾವಲಯದ ರಕ್ಷಣೆ. ಅಂದರೆ ಮಧ್ಯಮವರ್ಗ, ಬಡವರು, ಹಿಂದುಳಿದ ವರ್ಗಗಳ ಹಿತ ಕಾಯುವುದು. ಅವರಿಗೆ ಬೇಕೆಂದಾಗ ಸಾಲ ಕೊಡುವುದು. ಹೀಗಂತ ಹೇಳಿಕೊಂಡೇ ಬ್ಯಾಂಕ್ಗಳು ಅಸ್ವಿತ್ವಕ್ಕೆ ಬರುವುದು. ಆದರೆ ಅದ್ಯಾಕೋ ಬ್ಯಾಂಕ್ಗಳಿಗೆ ಆದ್ಯತೆ ವಲಯ ಎಂದರೆ ಅಸಡ್ಡೆ ಎನಿಸಿದಂತೆ ಕಾಣುತ್ತಿದೆ. ಬಹುಶಃ ಈವರ್ಗಕ್ಕೆ ಸಾಲ ಕೊಡುವ ಉತ್ಸಾಹವನ್ನು ಇಳಿಸಿ ಕೊಂಡಿದೆಯೇ?
ಪ್ರಶ್ನೆಗೆ ಉತ್ತರ ಎಂಬಂತೆ ಇಲ್ಲಿದೆ ಅಂಕಿ ಅಂಶ. 2010 ಮಾರ್ಚ್ ಅಂತ್ಯಕ್ಕೆ ರಾಜ್ಯದಲ್ಲಿ ಬ್ಯಾಂಕ್ ಠೇವಣಿಗಳ ಮೊತ್ತ 2,74,752. ಆದರೆ 2012ರ ಮಾರ್ಚ್ಗೆ 4,02,158 ಕೋಟಿಗಳಾಗಿದೆ. ಅಂದರೆ- 65,476 ಕೋಟಿ ರೂ. ಅಧಿಕ ಮೊತ್ತ. ಶೇ.20ರಷ್ಟು ಹೆಚ್ಚುವರಿ ಠೇವಣಿ ರಾಜ್ಯದ ಬ್ಯಾಂಕುಗಳಿಗೆ ಸಾರ್ವಜನಿಕರಿಂದ ಹರಿದು ಬಂದಿದೆ. ಸಾಲ ಮತ್ತು ಠೇವಣಿಗಳ ಅನುಪಾತವನ್ನು ಅವಲೋಕಿಸಿದರೆ, ಶೇ.78ರಷ್ಟು ಸಿ.ಡಿ. ಅನುಪಾತ ಮಾರ್ಚ್-2010ರ ಅಂತ್ಯಕ್ಕೆ ಇತ್ತು. ಈಗ ಅದು ಶೇ.74ಕ್ಕೆ ಕೆಳಗೆ ಇಳಿದಿದೆ. ಈ ಅಂಕಿ ಅಂಶ ಏನು ಹೇಳುತ್ತದೆ?
ಸಾರ್ವಜನಿಕರಿಂದ ಸಂಗ್ರಹಿಸಿದ ಠೇವಣಿಗೆ ಅನುಗುಣವಾಗಿ ಸಾಲಗಳು ವಿತರಣೆಯಾಗುತ್ತಿಲ್ಲ. ಅಂದರೆ ದೇಶದಲ್ಲಿರುವ ಜನಸಾಮಾನ್ಯರ ಆರ್ಥಿಕತೆಯನ್ನು ಸುಸ್ಥಿತಿಯಲ್ಲಿಡ ಬೇಕಾದ ಬ್ಯಾಂಕ್ಗಳು ಈ ವಿಚಾರವಾಗಿ ನಿರುಮ್ಮಳವಾಗಿದೆ. ಹಣ ಕೊಟ್ಟರೆ ನೂರು ಪ್ರಶ್ನೆ. ಏಕೆ, ಹೇಗೆ, ಏತಕ್ಕೆ , ಆದಾಯ ಎಂದೆಲ್ಲಾ ಗುಣಿಸಿ ಬಾಗಿಸಿ ಕೊಟ್ಟರೂ, ವಾಪಸ್ಸು ಪಡೆಯಬೇಕಾದರೆ ಹರ ಸಾಹಸ ಮಾಡಬೇಕು. ಅದರಲ್ಲೂ ರೈತರಾದರೆ ಕೇಳುವ ಹಾಗೇ ಇಲ್ಲ. ಏಕೆ ಬೇಕು ಈ ರಗಳೇ ಅಂತಲಾ?
ಬ್ಯಾಂಕಿಂಗ್ ಕ್ಷೇತ್ರ ಆದ್ಯತಾವಲಯನ್ನು ಅಂದರೆ ಗ್ರಾಮೀಣ ರೈತರು, ಕುಶಲಕರ್ಮಿಗಳು, ಬಡವರ್ಗದವರನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ ಎನ್ನುತ್ತದೆ ಈ ಅಂಕಿ ಅಂಶಗಳು. 3 ವರ್ಷಗಳ ಹಿಂದಿನ ಅಂಕಿ ಅಂಶಗಳನ್ನೇ ನೋಡಿ. ಆಗ ಒಟ್ಟು ಸಾಲಗಳಲ್ಲಿ ಶೇ. 43ರಷ್ಟು ಆದ್ಯತಾ ರಂಗಗಳಿಗೆ ಬಳಕೆಯಾಗಿದೆ. ಈ ಮಾರ್ಚ್ ಅಂತ್ಯದಲ್ಲಿ ನೋಡಿದರೆ ಶೇ. 39ರಷ್ಟಕ್ಕೆ ಅಂದರೆ ಶೇ. 4ರಷ್ಟು ಇಳಿದು ಹೋಗಿದೆ. ಇದರಲ್ಲಿ ಕೃಷಿಗೆ ಶೇ.18ರಷ್ಟು ಕೊಡಬೇಕಾಗಿತ್ತು. ಇದು ಶೇ.16-17 ಆಗಿದೆ. ಅಂದರೆ ಸಾಲ ಅನ್ನೋದು +ಗ್ರಾಮೀಣ ಪ್ರದೇಶಕ್ಕೆ ಮುಟ್ಟುತ್ತಿಲ್ಲ ಎನಿಸುತ್ತಿದೆ.
ಇತ್ತೀಚೆಗಷ್ಟೇ ಬ್ಯಾಂಕ್ಗಳು 3,057 ಗ್ರಾಮೀಣ ಶಾಖೆಗಳನ್ನು ತೆರೆದಿವೆ. ನಗರ ಮತ್ತು ಪಟ್ಟಣ ಪ್ರದೇಶದಲ್ಲಿ 3,550 ಶಾಖೆಗಳು ಕೆಲಸ ಮಾಡುತ್ತಿವೆ. ಬೃಹತ್ ನಗರಗಳಲ್ಲಿ 1, 700 ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಕಳೆದ ಒಂದು ವರ್ಷದಲ್ಲೇ 625 ಹೊಸ ಬ್ಯಾಂಕ್ ಶಾಖೆಗಳು ತೆರೆದಿದ್ದು, ಅವುಗಳಲ್ಲಿ 210 ಶಾಖೆಗಳು ಮಾತ್ರ ಗ್ರಾಮೀಣ ಭಾಗಗಳಲ್ಲಿವೆ.
ಹಿಂದುಳಿದ ವರ್ಗದವರಿಗೆ ಸಾಲ ನೀಡಿಕೆಯಲ್ಲೂ ರಾಜ್ಯದ ಬ್ಯಾಂಕುಗಳು ಬಹಳ ಹಿಂದೆ ಬಿದ್ದಿವೆ ಎನ್ನುವುದಕ್ಕೆ ಈ ಅಂಕಿ-ಅಂಶಗಳೇ ಸಾರಿ ಹೇಳುತ್ತವೆ.
ಒಟ್ಟು ರಾಜ್ಯದ ಮುಂಗಡಗಳಿಗೆ (ರೂ. 3.10 ಲಕ್ಷ ಕೋಟಿಗಳಲ್ಲಿ) ಹೋಲಿಕೆ ಮಾಡಿದರೆ ಕೇವಲ 8,300 ಕೋಟಿ ಮಾತ್ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ತರಿಸಲಾಗಿದೆ. ಶೇ.5ರಷ್ಟು ಸಾಲಗಳು ಇವರಿಗೆ ದೊರೆತಿವೆ. ಹಿಂದುಳಿದವರು ಮತ್ತು ಅಲ್ಪಸಂಖ್ಯಾತರಿಗೆ 13,700 ಲಕ್ಷ ಕೋಟಿ ನೆರವು ದೊರೆತಿದೆ. ಆದರೆ, ಒಟ್ಟು ಸಾಲಗಳ ಸಿಂಹಪಾಲು ದೊಡ್ಡ ದೊಡ್ಡ ಕುಳಗಳಿಗೆ ದೊರಕಿದೆ. ಹೀಗೇಕೆ ಎಂದರೆ ಬ್ಯಾಂಕುಗಳು ನೀಡುವ ಸಮಜಾಯಿಶಿಯೇ ಬೇರೆ ಇದೆ. ದೊಡ್ಡ ದೊಡ್ಡ ಸಾಲ ಪಡೆಯುವರು ಸಾಲಗಳನ್ನು ಮರುಪಾವತಿ ಮಾಡುತ್ತಾರಲ್ಲದೆ, ಭದ್ರತೆಗೆ ಸೂಕ್ತ ಆಸ್ತಿಗಳನ್ನು ನೀಡುತ್ತಾರೆ ಎಂಬುದು ಬ್ಯಾಂಕರ್ಗಳ ಉತ್ತರ.
ಹಳ್ಳ ಇರುವ ಕಡೆಯೇ ನೀರು ಹರಿಯುವುದು ಎನ್ನುವಂತೆ ಹಣ ಕೂಡ ಶ್ರೀಮಂತರ ಕಡೆ ಹರಿಯುತ್ತಿದೆ.
ಏಕೆ ಹೀಗೆ?
ಬ್ಯಾಂಕ್ಗಳಲ್ಲಿ ಬಂದ ಹಣವನ್ನು ಹಾಗೇ ಇಟ್ಟು ಕೊಂಡರೆ ಪ್ರಯೋಜನವಿಲ್ಲ. ಆದರೆ ಸಾಲದ ಡಿಮ್ಯಾಂಡ್ ನೋಡಿಕೊಂಡು ಅದನ್ನು ಪೂರೈಸಬೇಕು. ಆದರೆ ಬಹುತೇಕ ಬ್ಯಾಂಕ್ಗಳು ಮಾಡುವುದೇನೆಂದರೆ ಆದ್ಯತಾವಲಯದ ಸಾಲಗಳನ್ನು ಬೇರೆಡೆಗೆ ತಿರುಗಿಸುತ್ತದೆ. ಅಂದರೆ ಶ್ರೀಮಂತರು, ದೊಡ್ಡ, ದೊಡ್ಡ ಕೈಗಾರಿಕೋದ್ಯಮಿಗಳಿಗೆ ಕರೆದು ಸಾಲ ಕೊಡುತ್ತವೆ. ಇದು ಭ್ರಮೆಯೋ ಏನೋ ತಿಳಿಯದು. ಈ ರೀತಿ ಶ್ರೀಮಂತರು ಸಾಲಗಳನ್ನು ಮರುಪಾವತಿ ಮಾಡುವುದು ಬಹಳ ಕಡಿಮೆ. ಆದರೂ ಸಾಲ ಕೊಡುತ್ತವೆ. ಕೆಲ ಸಲ ರಾಜಕೀಯ ನಾಯಕ ಒತ್ತಡ, ಪ್ರಭಾವ ಕೂಡ ಇರುವುದರಿಂದ ಬ್ಯಾಂಕ್ಗಳು ಇದ್ದ ಬದ್ದ ಹಣವನ್ನು ಆಕಡೆಗೆ ತಿರುಗಿಸಿದಾಗ ಆದ್ಯತಾವಲಯದ ಸಾಲಗಳಿಗೆ ಬರೆ ಬೀಳುತ್ತದೆ. ಇನ್ನೂ ಕೆಲವು ಬ್ಯಾಂಕ್ಗಳು ಪರ ರಾಜ್ಯದ ಕೈಗಾರಿಕೋದ್ಯಮಿಗಳಿಗೆ ಸಾಲ ಕೊಟ್ಟಿರುವ ಉದಾಹರಣೆಗಳೂ ಇವೆ.
ಆದರೆ ಇಲ್ಲಿ ಒಂದು ಸತ್ಯ ತಿಳಿದು ಕೊಳ್ಳಬೇಕು. ಅತಿ ಶ್ರೀಮಂತರು ಸಾಲ ಪಡೆಯುವುದು ಬಹುತೇಕ ತೆರಿಗೆಯಿಂದ ತಪ್ಪಿಸಿಕೊಳ್ಳಲು. ಆದರೆ ಆದ್ಯತಾವಲಯದ ಸಾಲಗಳಲ್ಲಿ ಬಹುತೇಕವು ಜೀವನ ನಿರ್ವಹಣೆಗಾಗಿಯೇ ಇರುತ್ತದೆ. ದುರಂತ ಎಂದರೆ ಬ್ಯಾಂಕ್ಗಳು ಮಣೆ ಹಾಕುವುದು ಶ್ರೀಮಂತರಿಗೆ. ಕೊಟ್ಟ ಸಾಲ ವಾಪಸ್ಸು ಬರುತ್ತದೆ ಎನ್ನುವ ನಂಬಿಕೆಯಿಂದ. ಆದರೆ ಕೋಟಿ, ಕೋಟಿ ಸಾಲಗಳು ವಾಪಸ್ಸು ಹಿಂತಿರುಗದೆ ನಿಂತಿರುವುದು ಇಂಥ ಶ್ರೀಮಂತರಿಂದಲೇ ಎನ್ನುವುದು ಕುಚೋದ್ಯ. ಇಷ್ಟಾದರೂ ರಾಜ್ಯದ ಎಲ್ಲಾ ಬ್ಯಾಂಕುಗಳ ಸರಾಸರಿ ಎನ್.ಪಿ.ಎ.(ಅನುತ್ಪಾದಕ ಆಸ್ತಿಗಳು) ಶೇ.6.24ರಷ್ಟಿದೆಯಂತೆ.
ಇಷ್ಟಾದರೂ 3 ವರ್ಷಗಳ ಹಿಂದೆ ಒಟ್ಟು ಮುಂಗಡಗಳಲ್ಲಿ ಗ್ರಾಮೀಣ ಸಾಲ ಅಂತಲೇ ಶೇ.19.89ರಷ್ಟು ಇತ್ತು. ಈಗ ಶೇ.18ಕ್ಕೆ ಇಳಿದಿದೆ. ಅಂದರೆ, ಸುಮಾರು ಶೇ.2ರಷ್ಟು ಹಿನ್ನಡೆಯಾದಂತೆ ಆಗಿದೆ. ಈ ಹಣ ಎಲ್ಲಿ ಹೋಯಿತು? ಕೃಷಿಗೆ ಪ್ರಾಮುಖ್ಯತೆ ನೀಡಲು ಅನೇಕ ಯೋಜನೆಗಳು ಜಾರಿಗೆ ಬರುತ್ತಿದ್ದರೂ, ಸಾಲ ನೀಡಲು ಬ್ಯಾಂಕ್ಗಳು ಮಾತ್ರ ಮನಸ್ಸು ಮಾಡುತ್ತಿಲ್ಲ ಎನ್ನುವ ಆರೋಪವಿದೆ.
ಇತ್ತೀಚೆಗೆ ರಾಜ್ಯ ಬ್ಯಾಂಕುಗಳ ಸಮನ್ವಯ ಸಮಿತಿಯಲ್ಲಿ ಕರ್ನಾಟಕ ರಾಜ್ಯದ ಮುಖ್ಯಕಾರ್ಯದರ್ಶಿ ಗ್ರಾಮೀಣ ಸಮುದಾಯವನ್ನು ಕಡೆಗಣಿಸುವುದು ಇಡೀ ರಾಜ್ಯದ ಅಭಿವೃದ್ಧಿಗೆ ಮಾರಕವಾಗುವುದೆಂಬ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. ಈ ಶಂಕೆ ಆರೋಪಕ್ಕೆ ಮತ್ತಷ್ಟು ಪುಷ್ಠಿ ಕೊಟ್ಟಂತಾಗಿದೆ. ಈ ಅಂಕಿ ಅಂಶಗಳು ಮತ್ತು ಹೇಳಿಕೆಯನ್ನು ಗಮನಿಸಿದರೆ ಬ್ಯಾಂಕ್ಗಳು ಯಾವ ರೀತಿ ಯೋಚನೆ ಮಾಡುತ್ತಿವೆ ಎನ್ನುವುದನ್ನು ಊಹಿಸಬಹುದು.
ಗ್ರಾಮೀಣರ ಬದುಕು ನರಕ. ರಸಗೊಬ್ಬರ, ಬೀಜ, ಕೀಟನಾಶಕಗಳ ಬೆಲೆ ಗಗನಕ್ಕೆ ಏರಿ ನಂಬಿದ ಕೃಷಿ ಕೈ ಹಿಡಿಯುತ್ತಿಲ್ಲ. ಪರಿಸ್ಥಿತಿ ಹೀಗಿರಬೇಕಾದರೆ ಗ್ರಾಮೀಣರನ್ನು ನಿರ್ಲಕ್ಷಿಸುವುದು ತರವಲ್ಲ. ಬ್ಯಾಂಕ್ಗಳ ಗಮನ ಕೇವಲ ನಗರ ಕೇಂದ್ರಿತವಾದರೆ ಗ್ರಾಮೀಣ ಪ್ರದೇಶ, ಜನರು ಏತಕ್ಕೆ ಬೇಕು?
3 ವರ್ಷಗಳ ಹಿಂದೆ ಕೃಷಿಗೆ 43 ಸಾವಿರ ಕೋಟಿ ರೂ.ಗ್ರಾಮೀಣರಿಗಾಗಿ ನೀಡಿದೆ.
ಈ ವರ್ಷದ ಮಾರ್ಚ್ ಅಂತ್ಯದಲ್ಲಿ 54 ಸಾವಿರ ಕೋಟಿ ರೂ.ಗಳನ್ನು ನೀಡುವಷ್ಟರಲ್ಲಿ ಬ್ಯಾಂಕುಗಳು ತೃಪ್ತಿಪಟ್ಟಿವೆ. ಇಡೀ 3 ವರ್ಷದಲ್ಲಿ ಕೇವಲ 7 ಸಾವಿರ ಕೋಟಿ ರೂ.ಗಳ ಹೆಚ್ಚುವರಿ ಸಾಲ ವಿತರಿಸಿದೆ. ರಾಜ್ಯದ ಬ್ಯಾಂಕ್ಗಳು ಸಾರ್ವಜನಿಕರಿಂದ ಸಂಗ್ರಹಿಸಿರುವ ಠೇವಣಿ ಮೊತ್ತ 66 ಸಾವಿರ ಕೋಟಿ ರೂಗೂ ಹೆಚ್ಚಾಗಿದೆ. ನಿಮ್ಮ ಸೇವೆಯೇ ನಮ್ಮ ಕರ್ತವ್ಯ ಎನ್ನುವ ಬ್ಯಾಂಕ್ಗಳ ಶಾಖೆಗಳ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿದೆ. 2010ರಲ್ಲಿ 6,900 ಶಾಖೆಗಳು ಇದ್ದದು ಇದೀಗ 7, 900 ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಗ್ರಾಮೀಣರಿಗೆ (ಕೃಷಿ ಸಾಲವನ್ನು) ನಮ್ಮ ಬ್ಯಾಂಕ್ಗಳು ಸಾಲ ನೀಡುತ್ತಿರುವ ಶೇಕಡವಾರು ಹೀಗಿದೆ. ಎಸ್.ಬಿ.ಐ. (ಶೇ.10ರಷ್ಟು) ಕಾರ್ಪೊàರೇಷನ್ ಬ್ಯಾಂಕ್ (ಶೇ.12ರಷ್ಟು) ಬ್ಯಾಂಕ್ ಆಫ್ ಮಹಾರಾಷ್ಟ್ರ ( ಶೇ.5ರಷ್ಟು) ಇಂಡಿಯನ್ ಓವರ್ಸೀಸ್ ಬ್ಯಾಂಕ್ (ಶೇ.11ರಷ್ಟು) ಇಂಡಿಯನ್ ಬ್ಯಾಂಕ್ (ಶೇ.9ರಷ್ಟು) ಪಂಜಾಬ್ ನ್ಯಾಷನಲ್ ಬ್ಯಾಂಕ್ (ಶೇ.3ರಷ್ಟು) ಕೃಷಿ ಸಾಲ ನೀಡುತ್ತಿವೆ.
ಗ್ರಾಮೀಣ ಗತಿ ಏನು?
ಇದೇ ರೀತಿಯ ಸಾಲ ನೀಡಿಕೆಯ ಪ್ರವೃತ್ತಿ ಪ್ರಸ್ತುತ ವರ್ಷವು ಮುಂದುವರೆದರೆ, ಗ್ರಾಮೀಣರು ಎಲ್ಲಿ ಹೋಗಬೇಕು? ಈಗಿನ ದಿನಗಳಲ್ಲಿ ಸಾಲ ಸೌಲಭ್ಯಗಳಿಲ್ಲದೆ, ಕೃಷಿಯನ್ನು ಮುಂದುವರೆಸುವುದು ರೈತರಿಗೆ ಕಷ್ಟವಾಗುತ್ತಿದೆ. ಅಪೆಕ್ಸ್ ಸಹಕಾರ ಬ್ಯಾಂಕ್ ಕರ್ನಾಟಕ ರಾಜ್ಯದಲ್ಲಿ ತನ್ನ ಜಿಲ್ಲಾ ಸಹಕಾರಿ ಬ್ಯಾಂಕ್ ಮತ್ತು ವ್ಯವಸಾಯ ಸಹಕಾರ ಸಂಘಗಳ ಮೂಲಕ ಶೇ.1ರ ಬಡ್ಡಿಯಲ್ಲಿ ಸಾಲ ನೀಡುವ ಪ್ರಕ್ರಿಯೆ ಮುಂದುವರೆಸಿದೆ. ಈ ವರ್ಷದ ಬಜೆಟ್ನಲ್ಲಿ ರಾಜ್ಯವು ಬಡ್ಡಿರಹಿತ ಬೆಳೆ ಸಾಲ ನೀಡಲು ಮುಂದೆ ಬಂದಿರುವುದು ಒಂದು ಸಮಾಧಾನಕರ. ಆದರೆ ಜಾರಿಯಾವಾಗ ಎನ್ನುವ ಪ್ರಶ್ನೆಯೂ ಇದೆ. ಸಾಲ ನೀಡಿಕೆಯಲ್ಲಿ ಕಂಜೂಸ್ ತೋರಿಸಿದರೆ ಆರ್ಥಿಕತೆಯಲ್ಲಿ ಏರಪೇರಾಗುವುದು ಸಹಜ. ಇದರಿಂದ ನಗರ ವಲಸೆಗೆ ಮತ್ತಷ್ಟು ಪ್ರಚೋದನೆ ಕೊಟ್ಟಂತಾಗುತ್ತದೆ.
ಎಲ್ಲಾ ಬ್ಯಾಂಕುಗಳು ಸೇರಿ ರೈತರಿಗೆ 3,34,900 ಕಿಸಾನ್ ಕಾರ್ಡುಗಳನ್ನು ಇಲ್ಲಿಯವರೆಗೆ ನೀಡಿವೆ. ಈ ಕಿಸಾನ್ ಕ್ರೆಡಿಟ್ ಕಾರ್ಡ್ ರೈತರ ಪಾಲಿಗೆ ಓವರ್ಡ್ರಾಫ್ಟ್ ಮಾದರಿಯಲ್ಲಿ ಅವರಿಗೆ ಬೇಕೆಂದ ಕಡೆ ಆರ್ಥಿಕ ನೆರವು ದೊರೆಯಲೆಂಬುದು ಕೇಂದ್ರ ಮತ್ತು ರಾಜ್ಯಗಳ ಆಶಯ. ಗ್ರಾಮೀಣರನ್ನು ಪ್ರೀತಿಯಿಂದ ಬ್ಯಾಂಕ್ಗಳಿಗೆ ಆಹ್ವಾನಿಸಿ, ಅವರಿಗೆ ಅಗತ್ಯ ನೆರವು ನೀಡಿ, ಸಾಂತ್ವಾನ ಹೇಳಿ, ದುಡಿಮೆಗೆ ಹಚ್ಚುವ ಹೃದಯವಂತ ಗ್ರಾಮೀಣ ಕಳಕಳಿಯಿರುವ ಬ್ಯಾಂಕ್ ವ್ಯವಸ್ಥಾಪಕರುಗಳ ಅವಶ್ಯಕತೆ ಇದೆ. ಈ ಬಗ್ಗೆ ರಿಸರ್ವ್ಬ್ಯಾಂಕ್ ಜರೂರು ಚಿಂತಿಸಬೇಕಿದೆ. ಕೇವಲ ಚಾಣಕ್ಷ ಜಾಣತನ ತೋರಿ, ಕೆಲಸಗಿಟ್ಟಿಸಿ, ನಗರಗಳಲ್ಲಿ ಟಿಕಾಣಿ ಹೂಡಿ ಹಳ್ಳಿಗಳ ಶಾಖೆಗಳಿಗೆ ಹೋಗಿ ರೈತರ ಸೇವೆ ಮಾಡಲು ಬಿಲ್ಕುಲ್ ನಿರಾಕರಿಸುವ ಸಿಬ್ಬಂದಿ ಮತ್ತು ಅಧಿಕಾರಿಗಳ ವಿರುದ್ಧ ಬ್ಯಾಂಕುಗಳ ಆಡಳಿತ ಮಂಡಳಿ ಕಠಿಣವಾಗಿ ವರ್ತಿಸಬೇಕು. ಈ ಒಂದು ನ್ಯೂನ್ಯತೆ ಸರಿಹೋದರೆ ಕೇಂದ್ರ ಸರ್ಕಾರ ಮತ್ತು ರಿಸರ್ವ್ಬ್ಯಾಂಕ್ ಬಹು ನಿರೀಕ್ಷೆಯಿಂದ ಜಾರಿಗೆ ತರಲು ಮುಂದಾಗಿರುವ ಆರ್ಥಿಕ ಸೇರ್ಪಡೆ ಯೋಜನೆ ಸುಸೂತ್ರವಾಗಿ ಫಲ ನೀಡಲು ಸಾಧ್ಯ.
ಇವೆಲ್ಲದರ ಮಧ್ಯೆ ಆರ್ಬಿಐ ಎಲ್ಲರೂ ಖಾತೆ ತರೆಯಬೇಕು ಎಂದು ಖಾತಾ ಅಭಿಯಾನ ಶುರುಮಾಡಿದೆ. ಇದು ಗ್ರಾಮೀಣ ದುರ್ಬಲರಿಗಾಗಿ ಸರಳ ಉಳಿತಾಯ ಖಾತೆ (ನೋ ಫ್ರಿಲ್ ಅಕೌಂಟ್)ಎನ್ನುವ ಧ್ಯೇಯ. ಇದರ ನಡಿಗೆ ಮಾತ್ರ ಆಮೆ ಗಾತ್ರವಾಗಿದೆ. ಕೇಂದ್ರ ವಿತ್ತ ಇಲಾಖೆ ಮತ್ತು ರಿಸರ್ವ್ಬ್ಯಾಂಕ್ ಹೊರತಂದ ಅಂಕಿ-ಅಂಶಗಳ ಪ್ರಕಾರ ಇನ್ನೂ ದೇಶದ ಜನಸಂಖ್ಯೆಯ ಶೇ.90ರಷ್ಟು ಮಂದಿ ಬ್ಯಾಂಕುಗಳಲ್ಲಿ ಖಾತೆಗಳನ್ನು ಹೊಂದಿಲ್ಲ. ಅಷ್ಟೇ ಅಲ್ಲ, ಬ್ಯಾಂಕ್ ವ್ಯವಹಾರ ಎಂದರೇನು ಎಂಬುದೇ ಗೊತ್ತಿಲ್ಲ ಎನ್ನುವ ಸತ್ಯ ಹೇಳಿದೆ.
ಇದು ವಾಸ್ತವ. ಕೇವಲ ಬೆಣ್ಣೆಯ ಮಾತು, ಸೌಲಭ್ಯಗಳ ಪ್ರದರ್ಶನದಿಂದ ಜನರು ಬ್ಯಾಂಕ್ಗಳ ಕಡೆ ಬರುವುದಿಲ್ಲ. ಆದರೆ ಬ್ಯಾಂಕಿನ ಅಗತ್ಯದ ಬಗ್ಗೆ ಅರಿವು ಮೂಡಿಸಬೇಕು. ನಿಮ್ಮ ನೆರವಿಗೆ ನಾವು ಇದ್ದೇವೆ ಎನ್ನುವ ಭಾವ ಅವರಲ್ಲಿ ಮೂಡಿಸಿದಾಗ ಮಾತ್ರ ಬ್ಯಾಂಕ್ಗಳು ಗೆಲುವಿನ ಓಟದಲ್ಲಿರುತ್ತದೆ. ಇದನ್ನು ಬಿಟ್ಟು ಕೊಡಬೇಕಾದ ಸಾಲದ ಪ್ರಮಾಣವನ್ನು ಇಳಿಸಿದರೆ ಗ್ರಾಹಕರ ನಂಬಿಕೆಯಲ್ಲಿ ಒಡಕಾಗುತ್ತದೆ.