
ರಾಯಚೂರಿನಿಂದ 25 ಕಿ.ಮೀ. ದೂರದಲ್ಲಿ ಇರುವ ನಾರದಗಡ್ಡೆ ರಾಯಚೂರಿನ ಉತ್ತರದಿಕ್ಕಿನಲ್ಲಿ ಹರಿಯುವ ಕೃಷ್ಣನದಿಯ ದ್ವೀಪವಾಗಿದೆ.
ಇದೊಂದು ಪೌರಾಣಿಕ ಪ್ರಸಿದ್ಧ ಸ್ಥಳ. ನಾರದ ಮಹಾಮನಿ ತಪ್ಪಸ್ಸುಗೈದು ಲಿಂಗ ಸ್ಥಾಪನೆ ಮಾಡಿದ ದ್ವೀಪ. 15ನೇ ಶತಮಾನದಲ್ಲಿ ಬೋಳ ಬಸವೇಶ್ಚರ ಎಂಬ ವಿರಕ್ತ ವೀರಶೈವಯತಿ ಇಲ್ಲಿ ಮಠ ಸ್ಥಾಪನೆ ಮಾಡಿದ್ದಾರೆ. ಇದೊಂದು ನದಿ ಟಿಸಿಲೊಡೆದು ಮತ್ತೆ ಕೂಡುವ ಪ್ರೇಕ್ಷಣೀಯ ಸ್ಥಳ.

ಕುರುವಕಲಾ ದತ್ತಾತ್ರೇಯ ದೇವಸ್ಥಾನ
ಕುರುವಕಲಾ ದೇವಸ್ಥಾನವು ಕೃಷ್ಣಾನದಿಯ ನಡುಗಡ್ಡೆಗಳಲ್ಲಿ ಪ್ರಮುಖ ನಡುಗಡ್ಡೆ. ಇಲ್ಲಿ ಪ್ರಸಿದ್ದ ದತ್ತಾತ್ರೇಯ ಪೀಠ (ದೇವಸ್ಥಾನ)ವಿದೆ. ದೇಶದ ನಾನಾ ಭಾಗದಿಂದ ಇಲ್ಲಿಗೆ ದತ್ತ ಭಕ್ತರು ಬರುತ್ತಾರೆ. ಇದೇ ರೀತಿ ರಾಮಗಡ್ಡೆ ಎಂಬ ದ್ವೀಪವಿದ್ದು ಇಲ್ಲಿ ಚೋಳೇಂದ್ರ ಸ್ವಾಮಿಗಳು ತಪಸ್ಸು ಮಾಡಿದ್ದರಿಂದ ಇದು ವೀರಶೈವರಿಗೆ ಪವಿತ್ರ ಸ್ಥಳವಾಗಿದೆ.
ಗಾಣದಾಳ ಪಂಚಮುಖೀ ದೇವಸ್ಥಾನ

ರಾಯಚೂರಿನಿಂದ 36 ಕಿ.ಮೀ. ದೂರದಲ್ಲಿರುವ ಗಾಣದಾಳ ಪಂಚಮುಖೀ ಪ್ರಾಣದೇವರ ದೇವಸ್ಥಾನ ಶ್ರೀ ರಾಘವೇಂದ್ರ ಸ್ವಾಮಿಗಳು ತಪಸ್ಸು ಮಾಡಿದ ಸ್ಥಳವಾಗಿದ್ದು, ಜೊತೆಗೆ ಪಂಚಮುಖೀ ಪ್ರಾಣದೇವರು ಕಲ್ಲಿನಲ್ಲಿ ಉದ್ಭವಿಸಿದ ಪವಿತ್ರ ಸ್ಥಳವಾಗಿದೆ. ಬೃಹದಾಕಾರದ ಕಲ್ಲು ಬಂಡೆಗಳಿಂದ ಕೂಡಿದ ಸುಂದರ ಏಕಾಂತ ಸ್ಥಳವಾಗಿದೆ. ಆಂಧ್ರದ ಮಂತ್ರಾಲಯಕ್ಕೆ ಬರುವ ಭಕ್ತರು ಇಲ್ಲಿ ಬಂದು ಪಂಚಮುಖೀ ದರ್ಶನ ಪಡೆದುಕೊಳ್ಳುತ್ತಾರೆ.