ದಿನೇಶ್ ಹೊಳ್ಳ | Jul 06, 2012
ಹೂವಿನ ಎಸಳುಗಳು ಪದರು ಪದರಗಳಾಗಿ ಇದ್ದರೂ ಹೂವಿನ ತಿರುಳು ಭಾಗವಾಗಿರುವ ಮಕರಂದವಿರುವುದು ಎಸಳುಗಳ ಮಧ್ಯಭಾಗದಲ್ಲಿ. ಎಸಳುಗಳು ಹೂವಿನ ಚೆಲುವಿಗೆ ಇಂಬು ಕೊಡ ಬಹುದು, ಆದರೆ ಮಕರಂದವು ಹೂವಿನ ಬಲ ವನ್ನು ಇಮ್ಮಡಿಗೊಳಿಸುತ್ತದೆ. ಮಂಗಳೂರಿನ ಯುವ ಕಲಾವಿದ ಸೂರಜ್ ವಾಲ್ಕೆಯವರ ಕಲಾಕೃತಿಗಳು ವಿಷಯಾನುಬಂಧದಲ್ಲಿ ಅನೇಕ


ಪದರುಗಳನ್ನೊಳಗೊಂಡಿದ್ದು, ಒಳಹೂರಣವು ಕೃತಿಯ ಘನತೆಯನ್ನು ವೃದ್ಧಿಸುವಂತಿದೆ. ವಾಲ್ಕೆಯವರು ತನ್ನ ಮನದಿಂಗಿತವನ್ನು ತನ್ನದೇ ಆದಂತಹ ವರ್ಣಭಾಷೆಯಲ್ಲಿ ಚಿತ್ರಿಸುತ್ತಾ, ಭಿನ್ನ ರೀತಿಯಲ್ಲಿ ತಿಳಿ-ಕಡು ವರ್ಣಗಳ ಸಮ್ಮಿಲನ ದೊಂದಿಗೆ ಕೃತಿರಚನೆ ಮಾಡುತ್ತಿದ್ದಾರೆ. ಕ್ಯಾನ್ವಾಸ್ ತುಂಬ ತಿಳಿ ಬಣ್ಣಗಳ ತೀಡುವಿಕೆಯಿದ್ದು, ಆಯ್ದ ಕೆಲವೆಡೆ ಕಡುಬಣ್ಣಗಳ ಸಂಗಮವಿದೆ. ಕುಂಚದ ತೀಡುವಿಕೆಯೂ ಬಣ್ಣಗಳ ಲೇಪನವೂ ಒಂದಕ್ಕೊಂದು ಪೂರಕ ಅರ್ಥಗಳನ್ನು ನೀಡುತ್ತಾ ಕೃತಿಯ ಹೊರಾಂಗಣದಿಂದ ಒಳ ಆವೃತ್ತಿಯವರೆಗೆ ಅನಂತ ಅರ್ಥಗಳ ಸಂಚಯವಾಗಿರುತ್ತದೆ. ಪ್ರಕೃತಿಯ ಪ್ರಚಲಿತಗಳು, ಸಮಾಜದ ಅಗೋಚರ ಧೋರಣೆಗಳು, ಸಂಸ್ಕೃತಿಯ ಸದ್ವಿನಿಯೋಗಗಳು ಇವರ ಕೃತಿಗಳಿಗೆ ಇಂಬು ಕೊಡುತ್ತವೆ. ಮಹಾಲಸಾ ಚಿತ್ರಕಲಾ ಶಿಕ್ಷಣ ಸಂಸ್ಥೆಯಲ್ಲಿ ಬ್ಯಾಚುಲರ್ ಆಫ್ ವಿಶುವಲ್ ಆರ್ಟ್ಸ್ ಪದವಿ ಪಡೆದಿರುವ ಇವರು ಇತ್ತೀಚೆಗೆ ಮಂಗಳೂರಿನ ಆರ್ಕಿಡ್ ಕಲಾ ಗ್ಯಾಲರಿಯಲ್ಲಿ ಮೈಂಡ್ಸ್ಕೇಪ್ಸ್ ಎಂಬ ತನ್ನ ಚಿತ್ರ ಕಲಾ ಪ್ರದರ್ಶನವನ್ನು ಮಾಡಿರುವರು. ಅಮೂರ್ತದ ಮಜಲುಗಳಲ್ಲಿ ವಸ್ತು ವಿಷಯಗಳ ಒರತೆಯೊಂದಿಗೆ ವರ್ಣ ಚಾಕಚಕ್ಯತೆಯನ್ನು ಪ್ರಜ್ವಲಿಸಿದ ಈ ಕಲಾ ಪ್ರದರ್ಶನದಲ್ಲಿದ್ದ ಕಲಾಕೃತಿಗಳು ಸೂರಜ್ಅವರ ಚಿತ್ತದ ಹುತ್ತದಿಂದ ಬೆಳೆದು ಕ್ವಾನ್ವಾಸುಗಳಲ್ಲಿ ಸಂಪನ್ನ ಗೊಂಡಿವೆ. ವರ್ಣ ಸಿಂಚನ ಹಾಗೂ ತಾಂತ್ರಿಕ ಶೈಲಿಯಲ್ಲಿ ಇವರದೇ ಆದಂತಹ ಪ್ರಕಾರವನ್ನು ಬಳಸಿಕೊಂಡಿದ್ದುದರಿಂದ ಪ್ರತಿಯೊಂದು ಕಲಾಕೃತಿಯೂ ಭಿನ್ನತೆಯನ್ನು ಮೈಗೂಡಿಸಿಕೊಂಡಿವೆ. ಕಲಾಕೃತಿಯ ವಿಚಾರಗಳ ಹರವು ಎಳೆ ಎಳೆಗಳಾಗಿ ವ್ಯಾಪಿಸುತ್ತಾ ವೀಕ್ಷಕರೊಂದಿಗೆ ಸಂವಾದಿಸುತ್ತವೆ. ಕೆಲವು ಕಲಾಕೃತಿಗಳಲ್ಲಿ ವಸ್ತು, ಪ್ರತಿಮೆ, ಮೈವಳಿಕೆ ಸಾಂಕೇತಿಕವಾಗಿದ್ದರೆ ಇನ್ನು ಕೆಲವು ಕಲಾಕೃತಿಗಳಲ್ಲಿ ಸಹಜ ಸೆಲೆಯಲ್ಲಿ ಸಾಕಾರಗೊಂಡಂತಿವೆ. ಅನುಭವದ ಪರಿಕಲ್ಪನೆಗಳ ಆಧಾರದಲ್ಲಿ ವರ್ಣಗಳನ್ನು ಪ್ರಯೋಗಿಸಿದಾಗ ಅಲ್ಲಿ ಒಡಮೂಡುವ ಅಮೂರ್ತ ಸಂಹವನಗಳು ಯಾವುದೋ ತಣ್ತೀ ಹಾಗೂ ಸಿದ್ಧಾಂತಗಳನ್ನು ಪ್ರತಿನಿಧಿಸಿದರೆ ಕಲಾವಿದನ ಹೊಣೆ ಗಾರಿಕೆಯು ಸಾರ್ಥಕ. ಆಗ ಉತ್ತಮ ಕಲಾಕೃತಿಗಳ ಅಭಿವ್ಯಕ್ತಿಗೆ ಪ್ರದರ್ಶನವಾಗಬಹುದು ಎಂಬುದಕ್ಕೆ ಸೂರಜ್ ವಾಲ್ಕೆ ಅವರ ಈ ಮೈಂಡ್ಸ್ಕೇಪ್ಸ್ ನಿದರ್ಶನ.
ಮಹಾಲಸಾ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ ಎನ್. ಎಸ್. ಪತ್ತಾರ್ ಅವರ ಮಾರ್ಗದರ್ಶನ, ಕಲಾವಿದ ಕಂದನ್ ಅವರ ಬೆಂಬಲ, ವಿಲಿಯಮ್ ಪಾಯಸ್ ಅವರ ಸಹಕಾರ ಎಲ್ಲವೂ ಸಂಗಮವಾಗಿದ್ದುದರಿಂದ ಈ ಮೈಂಡ್ಸ್ಕೇಪ್ಸ್ ಪ್ರದರ್ಶನ ಯಶಸ್ವಿಯಾಯಿತು.
ಹೈದರಾಬಾದ್ನ ದಕ್ಷಿಣ ಪ್ರಾಂತೀಯ ಚಿತ್ರಕಲಾ ಪ್ರದರ್ಶನ, ಕೋಲ್ಕತಾದಲ್ಲಿ ಜರಗಿದ ರಾಷ್ಟ್ರೀಯ ಲಲಿತಕಲಾ ಅಕಾಡೆಮಿ ಪ್ರಾಯೋಜಿತ ಪ್ರದರ್ಶನ, ಕೊಚ್ಚಿನ್ನ ದರ್ಬಾರ್ ಆರ್ಟ್ ಗ್ಯಾಲರಿ, ಬೆಂಗಳೂರಿನ ಚಿತ್ರಸಂತೆ, ಮಂಗಳೂರಿನ ಕಲಾಮೇಳ ಹೀಗೆ 15 ಸಮೂಹ ಚಿತ್ರಕಲಾ ಪ್ರದರ್ಶನಗಳಲ್ಲಿ ಇವರು ಭಾಗವಹಿಸಿದ್ದಾರೆ. ಮೂಡಬಿದಿರೆಯ "ವರ್ಣ ವಿರಾಸತ್', "ಚಿತ್ರಸಿರಿ', ವಿಶ್ವತುಳು ಸಮ್ಮೇಳನದ "ವರ್ಣ ಮುಡಿ', ತುಮಕೂರು, ಚೆನ್ನಪಟ್ಟಣ, ಚಿತ್ರದುರ್ಗದಲ್ಲಿ ಜರಗಿದ ದೃಶ್ಯಕಲಾ ಶಿಬಿರ, ಕಿನ್ನಾಳ ಕಲಾ ಶಿಬಿರ, ರಾಣಿ ಅಬ್ಬಕ್ಕ ಕಲಾಶಿಬಿರ ಮುಂತಾದ ಚಿತ್ರ ಕಲಾ ಶಿಬಿರಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭಾ ಸಾಮರ್ಥ್ಯ ಮೆರೆದಿದ್ದಾರೆ. ಉಜ್ಜೆ„ನಿಯ ಮಾನವ ಸಂಕೇತ ಅಕಾಡೆಮಿ ಆಯೋಜಿಸಿದ ವರ್ಣಿಕಾ 7ನೇ ರಾಷ್ಟ್ರೀಯ ವಿದ್ಯಾರ್ಥಿ ಕಲಾ ಪ್ರದರ್ಶನ, ದಿಲ್ಲಿಯಲ್ಲಿ ನಡೆದ 52ನೇ ರಾಷ್ಟ್ರೀಯ ಲಲಿತಾ ಅಕಾಡೆಮಿಯ ಪ್ರದರ್ಶನ, 12ನೇ ದ. ಪ್ರಾಂತೀಯ ಕ್ಯಾಮ್ಲಿನ್ ಆಯೋಜಿತ ಕಲಾ ಪ್ರದರ್ಶನಕ್ಕೆ ಇವರು ಆಯ್ಕೆಯಾಗಿದ್ದಾರೆ.