ಮಂಗಳೂರು : ಮೂಲಸೌಕರ್ಯಗಳ ಕೊರತೆ ಮತ್ತು ಶುಚಿತ್ವ ಕಾಪಾಡದಿರುವುದನ್ನು ಪ್ರತಿಭಟಿಸಿ ಇಲ್ಲಿನ ವಿ.ವಿ. ಕಾಲೇಜಿನ ವಿದ್ಯಾರ್ಥಿಗಳು ಸೋಮವಾರ ತರಗತಿ ಬಹಿಷ್ಕರಿಸಿದರು ಹಾಗೂ ಬಳಿಕ ಪ್ರಾಂಶುಪಾಲರ ಆಶ್ವಾಸನೆಯ ಹಿನ್ನೆಲೆಯಲ್ಲಿ ಮುಷ್ಕರವನ್ನು ಹಿಂದೆಗೆದುಕೊಂಡರು.ಕಾಲೇಜಿನ ಆವರಣದಲ್ಲಿ ಕೆಸರು ಮತ್ತು ಕೊಳಕು ಇದೆ ಎಂದು ಆರೋಪಿಸಿ ಜೂ. 28ರಂದು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿದ್ದು, ಆಗ ಕಾಲೇಜು ಆಡಳಿತವು ನಾಲ್ಕು ಮಂದಿ ವಿದ್ಯಾರ್ಥಿಗಳಿಗೆ 3,500 ರೂ. ದಂಡ ವಿಧಿಸಿತ್ತು. ದಂಡ ಪಾವತಿಸಲು 3 ದಿನಗಳ ಗಡುವು ನೀಡಿದ್ದು, ದಂಡ ಪಾವತಿ ಮಾಡದ ಹಿನ್ನೆಲೆಯಲ್ಲಿ ಸೋಮವಾರ ವಿದ್ಯಾರ್ಥಿಗಳಿಗೆ ತರಗತಿ ಪ್ರವೇಶಕ್ಕೆ ನಿರಾಕರಿಸಲಾಗಿತ್ತು. ಇದನ್ನು ಪ್ರತಿಭಟಿಸಿ ಎಲ್ಲಾ ವಿದ್ಯಾರ್ಥಿಗಳು ಈ ನಾಲ್ವರು ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿದರು.ಈ ಹಿನ್ನೆಲೆಯಲ್ಲಿ ಪ್ರಾಂಶುಪಾಲರು ನಾಲ್ವರು ವಿದ್ಯಾರ್ಥಿಗಳಿಗೆ ವಿಧಿಸಿದ್ದ 3,000 ರೂ. ದಂಡವನ್ನು ಪರಿಷ್ಕರಿಸಿ ಕೇವಲ 500 ರೂ.ಗಳನ್ನು ಮಾತ್ರ ವಸೂಲು ಮಾಡಿದರು. ಹಾಗಾಗಿ ವಿದ್ಯಾರ್ಥಿಗಳು ತರಗತಿ ಬಹಿಷ್ಕಾರವನ್ನು ಹಿಂದೆೆಗೆದುಕೊಂಡರು ಎಂದು ಎಬಿವಿಪಿ ಮುಖಂಡ ವಿನಯ್ ಹೊರಟ್ಟಿ ತಿಳಿಸಿದ್ದಾರೆ.ಕಾಲೇಜಿನ ಗೇಟ್ ಬಳಿ ನೀರು ನಿಲ್ಲುವುದನ್ನು ತಡೆಯ ಬೇಕು, ಹಿಂಬದಿಯಲ್ಲಿ ಬೆಳೆದಿರುವ ಕಳೆ ಗಿಡಗಳನ್ನು ಕೀಳಬೇಕು, ಮಹಿಳಾ ಶೌಚಾಲಯ ಕೊಠಡಿಗಳ ಬಾಗಿಲುಗಳನ್ನು ಭದ್ರಗೊಳಿಸಬೇಕು, ಸೋರುತ್ತಿರುವ ಕೊಠಡಿಗಳ ದುರಸ್ತಿಗೊಳಿಸ ಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.ತರಗತಿ ಕೋಣೆಯ ಕೊರತೆಯಿಂದಾಗಿ ಸಂಸ್ಕೃತ ತರಗತಿಯನ್ನು ವಿಭಾಗ ಕೊಠಡಿಯಲ್ಲಿಯೇ ನಡೆಸಲಾಗುತ್ತಿದೆ; ಇದರಿಂದಾಗಿ ಸಂಸ್ಕೃತಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಕುಸಿತವಾಗುತ್ತಿದೆ ಎಂದು ವಿದ್ಯಾರ್ಥಿಗಳು ಮನವಿಯಲ್ಲಿ ವಿವರಿಸಿದ್ದಾರೆ.