ಸೀಮಾ | Jul 11, 2012
ದಟ್ಟ ಕಾಡು. ಅಲ್ಲೊಂದು ಮೊಲ ಹಾಗೂ ಹಾವು. ಇಬ್ಬರೂ ಅನಾಥರು. ಸುಮ್ಮನೆ ಅಂಡಲೆಯುತ್ತ, ಬಾಯಿಗೆ ಸಿಕ್ಕಿದ್ದನ್ನು ತಿಂದುಕೊಂಡಿದ್ದವು. ಮಾಡಲು ಕೆಲಸವೇನೂ ಇರಲಿಲ್ಲ.
ಕಾಕತಾಳೀಯ ಎಂಬಂತೆ ಇಬ್ಬರೂ ಹುಟ್ಟಿನಿಂದಲೇ ಕುರುಡರು. ಒಂದು ದಿನ ಮೊಲ ಕಾಡಿನಲ್ಲಿ ಓಡಾಡುತ್ತಿದ್ದಾಗ ಹಾವಿಗೆ ಎಡವಿ ಬಿದ್ದುಬಿಟ್ಟಿತು. ಸಹಜವಾಗಿಯೇ ಹಾವಿ ಗೊಂದು ಸಣ್ಣ ಶಾಕ್.
"ಐಯಾಮ್ ಸಾರಿ. ನೀನಿರುವುದು ತಿಳಿಯಲೇ ಇಲ್ಲ. ನನಗೆ ಹುಟ್ಟಿನಿಂದಲೇ ಕಣ್ಣು ಕಾಣಿಸೋದಿಲ್ಲ. ನಾನೆಲ್ಲಿಗೆ ಹೋಗುತ್ತಿದ್ದೇನೆಂಬುದೂ ಗೊತ್ತಿಲ್ಲ. ನಾನು ಅನಾಥನೂ ಆಗಿರೋದ್ರಿಂದ ನಾನು ಯಾರು-ಏನು ಎಂಬುದೂ ನನಗೆ ತಿಳಿದಿಲ್ಲ' ಮೊಲ ಹೇಳಿತು."ಇಟ್ಸ್ ಓಕೆ. ಪರವಾಗಿಲ್ಲ. ನಿಜ ಹೇಳಬೇಕು ಅಂದ್ರೆ ನಾನೂ ನಿನ್ನಂತೆಯೇ. ನನಗೂ ಕಣ್ಣು ಕಾಣೋದಿಲ್ಲ. ನಾನೂ ಅನಾಥ. ನಾನೇನು ಎಂಬುದು ನನಗೂ ಗೊತ್ತಿಲ್ಲ' ಹಾವು ಹೇಳಿತು.ಸ್ವಲ್ಪ ಹೊತ್ತು ಇಬ್ಬರ ನಡುವೆ ಲೋಕಾಭಿರಾಮ ಮಾತುಕತೆ. ನಂತರ ಹಾವಿಗೊಂದು ಉಪಾಯ ಹೊಳೆಯಿತು."ಒಂದು ಕೆಲಸ ಮಾಡ್ತೇನೆ. ನಿನ್ನ ಮೈ ಸವರಿ ನೋಡಿ ನೀನೇನು ಎಂದು ತಿಳಿಯುತ್ತದೆಯೋ ನೋಡ್ತೇನೆ.' ನಂತರ ಮೊಲದ ಮೈದಡವಿ ಹೇಳಿತು. "ನಿನ್ನ ಮೈತುಂಬಾ ಮೃದುವಾದ ತುಪ್ಪಳವಿದೆ. ಉದ್ದ ಕಿವಿಗಳಿವೆ. ಮೂಗು ಮೊಂಡಾಗಿದೆ. ಮೆತ್ತಗಿನ ಗಿಡ್ಡ ಬಾಲವಿದೆ. ನನ್ನ ಪ್ರಕಾರ ನೀನು ಮೊಲ. ಹೌದು.. ನೀನು ಮೊಲವೇ.'ಮೊಲಕ್ಕೆ ಖುಷಿಯಾಯಿತು. "ಥ್ಯಾಂಕ್ಯೂ ವೆರಿ ಮಚ್. ನನಗೆ ನಂಬೋದಕ್ಕೇ ಆಗ್ತಿಲ್ಲ. ಇವತ್ತು ನನ್ನಬದುಕು ಸಾರ್ಥಕವಾಯಿತು. ನಿನ್ನ ಉಪಕಾರ ಯಾವತ್ತೂ ಮರೆಯಲಾರೆ.' ಕುಣಿದು ಕುಪ್ಪಳಿಸಿ ಬಿಟ್ಟಿತು."ಬಹುಶಃ ನೀನು ಮಾಡಿದಂತೆ ನಾನೂ ನಿನ್ನ ಮೈದಡವಿ ನೀನ್ಯಾರು ಎಂಬುದನ್ನು ಹೇಳಬಹುದೇನೋ. ಟ್ರೈ ಮಾಡುವೆ.'
ಹಾವು ಒಪ್ಪಿತು. ಮೊಲ ಹಾವಿನ ಮೈಯನ್ನೆಲ್ಲ ಸವರುತ್ತ ಹೇಳಿತು. "ನೀನು ಬಹಳ ಮೃದು. ಮೈಯೆಲ್ಲ ಬೆಣ್ಣೆಯಂತಿದೆ. ಎಣ್ಣೆ ಹಚ್ಚಿಕೊಂಡಂತೆ ಜಾರುತ್ತಿದೆ. ನಿನಗೆ ಹರಿತ ನಾಲಗೆಯಿದೆ. ಮೈಯಲ್ಲಿ ಮೂಳೆಯೇ ಇಲ್ಲ. ನನ್ನ ಪ್ರಕಾರ, ಒಂದೋ ನೀನು ಟೀಮ್ ಲೀಡರ್ ಆಗಿರಬೇಕು, ಇಲ್ಲಾ ಯಾವುದಾದರೂ ದೊಡ್ಡ ಕಂಪನಿಯಲ್ಲಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ಅಥವಾ ಆಡಳಿತ ಮಂಡಳಿಯಲ್ಲಿರುವ ಹಿರಿಯ ಅಧಿಕಾರಿಯಾಗಿರಬೇಕು.'