ಹೆಬ್ರಿ: ಹೆಬ್ರಿ ಬಳಿಯ ಸೋಮೇಶ್ವರದ ಹೋಟೆಲ್ನ ಗೋದಾಮಿನಲ್ಲಿ ರವಿವಾರ ಗಂಭೀರವಾಗಿ ಗಾಯಗೊಂಡ ಚಿರತೆಯೊಂದು ಪ್ರತ್ಯಕ್ಷವಾಗಿದೆ.ಇತ್ತೀಚೆಗೆ ಉಡುಪಿಯ ಹಿರಿಯಡ್ಕ ಬಳಿ ಚಿರತೆಯೊಂದು ಕಾಡು ಹಂದಿಗಿಟ್ಟ ಉರುಳಿಗೆ ಸಿಕ್ಕಿಹಾಕಿಕೊಂಡಿತ್ತು. ಅರಣ್ಯ ಇಲಾಖೆಯವರು ಉರುಳಿಗೆ ಸಿಕ್ಕ ಚಿರತೆಯನ್ನು ಬಿಡಿಸಿ ಅದನ್ನು ಸೋಮೇಶ್ವರದ ಅಭಯಾರಣ್ಯಕ್ಕೆ ಬಿಟ್ಟು ಹೋಗಿದ್ದರು. ಆದರೆ ಇಲಾಖೆಯವರು ಗಂಭೀರ ಗಾಯಗೊಂಡ ಚಿರತೆಗೆ ಯಾವುದೇ ಚಿಕಿತ್ಸೆ ನೀಡದೆ ಇದ್ದುದರಿಂದ ಆದೇ ಚಿರತೆ ಗಾಯದ ನೋವು ತಾಳಲಾರದೆ ಸುರಕ್ಷಿತ ಸ್ಥಳ ಹುಡುಕಿಕೊಂಡು ಸೋಮೇಶ್ವರದ ಪೇಟೆಯಲ್ಲಿರುವ ನಂದಿನಿ ಹೋಟೆಲ್ನ ಗೋದಾಮಿನಲ್ಲಿ ಮಲಗಿತ್ತು. ರವಿವಾರ ಹೋಟೆಲ್ನ ಸಿಂಬಂದಿಗಳಿಗೆ ಗೋದಾಮಿನಲ್ಲಿ ಚಿರತೆ ಇರುವುದು ಗಮನಕ್ಕೆ ಬಂತು.ಗಂಭೀರ ಗಾಯಗೊಂಡ ಚಿರತೆಗೆ ಅರಣ್ಯ ಇಲಾಖೆ ಸರಿಯಾದ ಚಿಕಿತ್ಸೆ ನೀಡಿದ ಅನಂತರ ಕಾಡಿಗೆ ಬಿಡಬೇಕಿತ್ತು. ಆದರೆ, ಇಲಾಖೆಯವರ ನಿರ್ಲಕ್ಷದಿಂದ ಚಿರತೆ ಸಾವು ಬದುಕಿನ ನಡುವೆ ಹೋರಾಟ ನಡೆಸುವಂತಾಗಿದೆ ಎಂದು ಪ್ರಾಣಿ ಪ್ರಿಯರು ಆರೋಪಿಸಿದ್ದಾರೆ.ಬೇರೆ ಬೇರೆ ಪ್ರದೇಶದಲ್ಲಿ ಸಿಕ್ಕ ಹುಲಿ, ಚಿರತೆ, ಕಾಳಿಂಗ ಸರ್ಪ ಹಾಗೂ ಮಂಗಳನ್ನು ಹಿಡಿದು ಸೋಮೇಶ್ವರ ಆಗುಂಬೆ ಘಾಟಿಯಲ್ಲಿ ಅರಣ್ಯ ಇಲಾಖೆಯವರು ತಂದು ಬಿಡುತ್ತಾರೆ. ಅವುಗಳು ಆಹಾರವನ್ನು ಹುಡುಕಿಕೊಂಡು ನಾಡಿಗೆ ಬರುತ್ತವೆ. ಇದರಿಂದ ಅಭಯಾರಣ್ಯದ ತಪ್ಪಲಲ್ಲಿ ವಾಸಿಸುವ ಜನರು ಈಗ ಭಯಭೀತರಾಗಿದ್ದಾರೆ. ಈ ಬಗ್ಗೆ ಇಲಾಖೆಯವರು ಸೂಕ್ತಕ್ರಮಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.ಗೋದಾಮಿನಲ್ಲಿದ್ದ ಗಾಯಗೊಂಡ ಚಿರತೆಯನ್ನು ಹೆಬ್ರಿ ವಲಯ ವನ್ಯಜೀವಿ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳೀಯರ ಸಹಕಾರದೊಂದಿಗೆ ಕಾಡಿಗೆ ಪುನಃ ಬಿಟ್ಟರು.