ಹೊಸದಿಲ್ಲಿ: 2ಜಿ ಹಗರಣ ಕುರಿತಂತೆ ತನಿಖೆ ನಡೆಸುತ್ತಿರುವ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನ್ನ ವರದಿಯನ್ನು ಡಿಸೆಂಬರ್ನೊಳಗೆ ಪೂರ್ಣಗೊಳಿಸಲು ಬಿರುಸಿನಿಂದ ಕೆಲಸ ಮಾಡುತ್ತಿದೆ. ಸಾಕ್ಷಿದಾರರ ಸಂಖ್ಯೆಯನ್ನು ಕಡಿತಗೊಳಿಸಲು ಅದರ ಮುಖ್ಯಸ್ಥ ಪಿ.ಸಿ. ಚಾಕೋ ಅವರು ಸದಸ್ಯರ ಭೇಟಿ ಮಾಡುತ್ತಿದ್ದಾರೆ. ಮಾಜಿ ಪ್ರಧಾನಿ ಎ.ಬಿ. ವಾಜಪೇಯಿ ಅವರನ್ನು ಓರ್ವ ಸಾಕ್ಷಿಯನ್ನಾಗಿ ಕರೆಸಬೇಕೆಂಬ ಸಲಹೆಗಳಿದ್ದ ಹೊರತಾಗಿಯೂ ಅವರನ್ನು ಕರೆಸಲು ಚಾಕೋ ನಿರಾಕರಿಸಿದ್ದಾರೆ.ವಾಜಪೇಯಿ ಮತ್ತು ಮಾಜಿ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ ಅವರನ್ನು ಸಾಕ್ಷಿದಾರರನ್ನಾಗಿ ಕರೆಸುವ ಸಾಧ್ಯತೆಯನ್ನು ಅವರ ಅನಾರೋಗ್ಯದ ಕಾರಣಕ್ಕಾಗಿ ತಾನು ತಳ್ಳಿ ಹಾಕಿದ್ದೇನೆ. ಅವರನ್ನು ಕರೆಸುವ ಪ್ರಶ್ನೆಯೇ ಇಲ್ಲವೆಂದು ಚಾಕೋ ತಿಳಿಸಿದರು.ಜೆಪಿಸಿ ಕಾರ್ಯಾಲಯ ಸಿದ್ಧಪಡಿಸಿದ ಸಾಕ್ಷಿದಾರರ ಪಟ್ಟಿಯಲ್ಲಿ ವಾಜಪೇಯಿ ಮತ್ತು ಫೆರ್ನಾಂಡಿಸ್ ಅವರ ಹೆಸರಿತ್ತು. ಎನ್ಡಿಎ ಆಡಳಿತದ ಅವಧಿಯಲ್ಲಿ ಜಗಮೋಹನ್ ರಾಜೀನಾಮೆ ನೀಡಿದ ಬಳಿಕ ವಾಜಪೇಯಿ ಅವರು ಟೆಲಿಕಾಂ ಖಾತೆಯನ್ನು ನಿರ್ವಹಿಸಿದ್ದರಿಂದ ಅವರ ಹೆಸರನ್ನು ಮತ್ತು ಎನ್ಡಿಎ ಅವಧಿಯಲ್ಲಿ ಟೆಲಿಕಾಂ ಕುರಿತ ಸಚಿವರ ಸಮಿತಿಯ ನೇತೃತ್ವವನ್ನು ಫೆರ್ನಾಂಡಿಸ್ ವಹಿಸಿದ್ದರಿಂದ ಅವರ ಹೆಸರನ್ನು ಸಾಕ್ಷಿದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿತ್ತು ಎಂದು ಚಾಕೋ ಹೇಳಿದರು.ವಾಜಪೇಯಿ ಅವರ ಹೆಸರನ್ನು ಸೇರ್ಪಡೆಗೊಳಿಸಿದ್ದಕ್ಕಾಗಿ ಬಿಜೆಪಿಯ ಯಶವಂತ್ ಸಿನ್ಹ ಸಭೆಯೊಂದರಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.ಸಾಕಷ್ಟು ಪುರಾವೆಗಳು, ದಾಖಲೆಗಳು ಲಭಿಸುವವರೆಗೂ ಮಾಜಿ ಮತ್ತು ಹಾಲಿ ಸಚಿವರನ್ನು ಕರೆಸುವ ಅಗತ್ಯ ಇಲ್ಲವೆನ್ನುವುದು ಸಮಿತಿಯ ಸಾಮಾನ್ಯ ಅಭಿಪ್ರಾಯವಾಗಿದೆ ಎಂದು ಮೂಲಗಳು ತಿಳಿಸಿವೆ.ಅಪ್ರಸ್ತುತವೆನಿಸಿದ ಸಾಕ್ಷಿದಾರರ ಹೆಸರುಗಳನ್ನು ತೆಗೆದುಹಾಕುವ ಕುರಿತಂತೆ ಅಭಿಪ್ರಾಯ ತಿಳಿಯಲು ತಾನು ಸದಸ್ಯರನ್ನು ವೈಯಕ್ತಿಕವಾಗಿ ಭೇಟಿ ಮಾಡಲು ಆರಂಭಿಸಿರುವುದಾಗಿ ಚಾಕೋ ತಿಳಿಸಿದರು.