Udayavani | Jul 15, 2012
ವಿವಿಧ ಪಕ್ಷಗಳ ನಾಯಕರು, ಅಭಿಮಾನಿಗಳ ಭೇಟಿ
ಕುಂದಾಪುರ: ಸಚಿವ ಪದವಿ ನೀಡುವುದಾಗಿ ತಿಳಿಸಿ ಬೆಂಗಳೂರಿಗೆ ಕರೆಯಿಸಿ ಕೊನೆ ಕ್ಷಣದಲ್ಲಿ ಅವಮಾನ ಮಾಡಿರುವ ಬಗ್ಗೆ ಮನನೊಂದಿರುವ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿರುವ ಹಿನ್ನೆಲೆಯಲ್ಲಿ ಅವರ ಮನವೊಲಿಸುವ ಪ್ರಯತ್ನ ರವಿವಾರ ಮುಂದುವರಿದ್ದು, ಅವರ ನಿವಾಸಕ್ಕೆ ಭಾರತೀಯ ಜನತಾ ಪಕ್ಷದ ನಾಯಕರು ಸೇರಿದಂತೆ ವಿವಿಧ ಪಕ್ಷಗಳ ಗಣ್ಯರು, ಅಭಿಮಾನಿಗಳು ಭೇಟಿ ನೀಡಿದರು.
ಬಿಜೆಪಿ ನಾಯಕರ ಭೇಟಿ
ಬಿಜೆಪಿ ಜಿಲ್ಲಾಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಶಾಸಕ ರಘುಪತಿ ಭಟ್, ಮಾಜಿ ಶಾಸಕ ಸುನೀಲ್ ಕುಮಾರ್, ಜಿ.ಪಂ. ಮಾಜಿ ಸದಸ್ಯ ಶಂಕರ ಪೂಜಾರಿ, ಯಶಪಾಲ್ ಸುವರ್ಣ, ಕಿರಣ್ ಕುಮಾರ್, ಬೈಕಾಡಿ ಸುಪ್ರಸಾದ್ ಶೆಟ್ಟಿ, ಶಿವರಾಮ ಉಡುಪ ಭೇಟಿಯಾಗಿ ರಾಜೀನಾಮೆ ನಿರ್ಧಾವನ್ನು ಪುನರ್ವಿಮರ್ಶೆ ಮಾಡುವಂತೆ ಮನವೊಲಿಸಿದರು. ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಬಲರಾಜ್ ರೈ, ಜಯಕರ್ನಾಟಕ ಸಂಘಟನೆಯ ಮುಖ್ಯಸ್ಥರು ಭೇಟಿಯಾದರು.
ಭಾನುಪ್ರಕಾಶ್ ಭೇಟಿ
ಬಿಜೆಪಿ ರಾಜ್ಯ ಉಪಾಧ್ಯಕ್ಷ ಭಾನುಪ್ರಕಾಶ್ ಸಂಜೆ ಹಾಲಾಡಿಗೆ ಭೇಟಿ ನೀಡಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಮನೆಗೆ ತೆರಳಿ ಭೇಟಿಯಾಗಿ ರಾಜೀನಾಮೆ ನಿರ್ಧಾರವನ್ನು ಬದಲಿಸುವಂತೆ ಮನವೊಲಿಸಿದರು.ಆದರೆ ರಾಜೀನಾಮೆ ನಿಧಾರದ ಬಗ್ಗೆ ಆಚಲವಾಗಿರುವ ಹಾಲಾಡಿಯವರು ಸೋಮವಾರ ಬೆಳಗ್ಗೆ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಮೂಲಗಳಿಮದ ತಿಳಿದು ಬಂದಿದೆ.
ಹಾಲಾಡಿ - ಸಭಾಪತಿ ಭೇಟಿ: ಸಕಾರಾತ್ಮಕ ಸ್ಪಂದನ

ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಮನೆಗೆ ರವಿವಾರ ಮಾಜಿ ಶಾಸಕ, ಜೆಡಿಎಸ್ ಮುಖಂಡ ಯು.ಆರ್. ಸಭಾಪತಿ ಅವರು ಮಾಜಿ ಮುಖ್ಯಮಂತ್ರಿ, ರಾಜ್ಯ ಜೆಡಿಎಸ್ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರ ಸೂಚನೆಯಂತೆ ಭೇಟಿ ನೀಡಿ ಚರ್ಚಿಸಿದರು.
ಶೆಟ್ಟಿಯವರು ಶಾಸಕ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ಹಿಂದೆ ಪಡೆಯುವ ಪ್ರಶ್ನೆಯೇ ಇಲ್ಲವೆಂದು ತಿಳಿಸಿದರು. ಅವರಿಗೆ ಬಿಜೆಪಿಯವರು ನಡೆದುಕೊಂಡ ಕ್ರಮದ ಬಗ್ಗೆ ಅತೀ ಬೇಸರವಿದೆ. ಎಚ್.ಡಿ. ಕುಮಾರಸ್ವಾಮಿಯವರ ಆಹ್ವಾನಕ್ಕೆ ಸಕಾರಾತ್ಮಕ ಸ್ಪಂದನ ನೀಡಿದರು. ಯಾವುದೇ ತುರ್ತು ನಿರ್ಧಾರಕ್ಕೆ ಬರುವುದಿಲ್ಲ. ಕಾರ್ಯಕರ್ತರು, ಮತದಾರರ ಅಭಿಪ್ರಾಯ ಪಡೆದು ಮುಂದಿನ ಹೆಜ್ಜೆ ಇಡುವುದಾಗಿ ತಿಳಿಸಿದ್ದಾರೆ ಎಂದು ಸಭಾಪತಿ ಹೇಳಿದ್ದಾರೆ.
ತನ್ನ ಮತ್ತು ಹಾಲಾಡಿಯವರ ಸ್ನೇಹ ಕಳೆದ 25 ವರ್ಷಗಳಿಂದ ಬೆಳೆದು ಬಂದಿದೆ. ಜಿಲ್ಲೆಯಲ್ಲಿ ಹಾಲಾಡಿಯವರೊಂದಿಗೆ ಸೇರಿ ಜೆಡಿಎಸ್ ಬಲವರ್ಧನೆ ಮಾಡಲು ದೊಡ್ಡ ಕೊಡುಗೆಯಾಗುತ್ತದೆಂದು ಸಭಾಪತಿ ವಿನಂತಿಸಿದರು. ಸುಧಾಕರ ಕೋಟ್ಯಾನ್, ಜೆಡಿಎಸ್ ನೇಕಾರರ ಘಟಕಾಧ್ಯಕ್ಷ ದಿವಾಕರ ಸಾಲಿಯಾನ್ ಜಿಲ್ಲಾ ಜೆಡಿಎಸ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ಶಾಲಿನಿ ಶೆಟ್ಟಿ ಕೆಂಚನೂರು, ಚಿಟ್ಟೆ ರಾಜಗೋಪಾಲ ಹೆಗ್ಡೆ, ಭೋಜರಾಜ ಶೆಟ್ಟಿ, ಜಯಕುಮಾರ್ ಪರ್ಕಳ, ಯೂಸುಫ್ ಬ್ಯಾರಿ, ವೇದಾವತಿ ಹೆಗ್ಡೆ ಮೊದಲಾದವರು ಹಾಜರಿದ್ದರು.
ಪೂಜಾರಿಗೆ ಸಚಿವ ಸ್ಥಾನ: ಹರ್ಷ
ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸಚಿವ ಸ್ಥಾನ ಲಭಿಸಿರುವ ಬಗ್ಗೆ ಸಭಾಪತಿ ಹರ್ಷ ವ್ಯಕ್ತಪಡಿಸಿದ್ದಾರೆ. ಅಭಿವೃದ್ಧಿ ಕಾರ್ಯಗಳಿಗೆ ಮಾತ್ರ ತನ್ನ ಬೆಂಬಲವಿರುವುದೆಂದು ತಿಳಿಸಿದ್ದಾರೆ.