ಭೋಪಾಲ್: 2014ನೇ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ನೇತೃತ್ವದ ಎನ್ಡಿಎ ಅಧಿಕಾರಕ್ಕೆ ಬಂದರೆ ರೈತರಿಗೆ ಬಡ್ಡಿ ರಹಿತ ಕೃಷಿಸಾಲ ನೀಡುವುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಘೋಷಿಸಿದ್ದಾರೆ.ಇಲ್ಲಿ ಹಮ್ಮಿಕೊಳ್ಳಲಾಗಿದ್ದ 'ಅಟಲ್ ಕಿಸಾನ್ ಮಹಾಪಂಚಾಯತ್' ಉದ್ದೇಶಿಸಿ ಮಾತನಾಡಿದ ಗಡ್ಕರಿ, ಮಧ್ಯಪ್ರದೇಶ ಸರ್ಕಾರ ಈಗಾಗಲೇ ರೈತರಿಗೆ ಬಡ್ಡಿ ರಹಿತ ಸಾಲ ನೀಡಲು ನಿರ್ಧರಿಸಿದೆ. ಮಧ್ಯಪ್ರದೇಶ ಸರ್ಕಾರ ಇಂತಹದ್ದೊಂದು ಐತಿಹಾಸಿಕ ನಿರ್ಣಯ ಕೈಗೊಳ್ಳಬಹುದಾದರೆ ಅದನ್ನು ಕೇಂದ್ರದಲ್ಲಿಯೂ ಜಾರಿಗೆ ತರುವುದು ಕಷ್ಟವಾಗಲಾರದು ಎಂದು ಅವರು ಹೇಳಿದರು.ಇದೇ ವೇಳೆ ಕೃಷಿ ವಲಯದಲ್ಲಿ ಶೇ.18ರಷ್ಟು ಪ್ರಗತಿ ಸಾಧಿಸಿರುವ ಮಧ್ಯಪ್ರದೇಶದ ಶಿವರಾಜ್ಸಿಂಗ್ ಚೌಹಾಣ್ ನೇತೃತ್ವದ ಸರ್ಕಾರದ ಸಾಧನೆಯನ್ನು ಹಾಡಿಹೊಗಳಿದ ಗಡ್ಕರಿ, ಇಡೀ ದೇಶದಲ್ಲಿ ಯಾವುದೇ ರಾಜ್ಯವೂ ಸಾಧಿಸದ ಹೆಮ್ಮೆಯನ್ನು ಇಲ್ಲಿನ ಬಿಜೆಪಿ ಸರ್ಕಾರ ಮಾಡಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.ಅಚ್ಚರಿಯೆಂದರೆ ಕರ್ನಾಟಕ ಸರ್ಕಾರ ಸಹ ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಹಕಾರಿ ಕೃಷಿ ಸಾಲ ನೀಡುತ್ತಿದ್ದರೂ ಗಡ್ಕರಿ ಈ ಕುರಿತು ಯಾವುದೇ ಪ್ರಸ್ತಾಪ ಮಾಡಲಿಲ್ಲ.