Udayavani | Jul 15, 2012
ಹುಬ್ಬಳ್ಳಿ: ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಅನಂತರ ಇದೇ ಮೊದಲ ಬಾರಿಗೆ ತವರೂರು ಹುಬ್ಬಳ್ಳಿಗೆ ಆಗಮಿಸಿದ ಜಗದೀಶ ಶೆಟ್ಟರ್ ಅವರಿಗೆ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅದ್ಧೂರಿ ಸ್ವಾಗತ ನೀಡಿದರು.

ಇಲ್ಲಿನ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 11:30ರ ಸುಮಾರಿಗೆ ವಿಶೇಷ ವಿಮಾನದಲ್ಲಿ ಬಂದಿಳಿದ ಜಗದೀಶ ಶೆಟ್ಟರ್ ಹಾಗೂ ಅವರ ಪತ್ನಿಯನ್ನು ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಹರ್ಷೋದ್ಗಾರದ ಮಧ್ಯೆ ಆರತಿ ಬೆಳಗಿ ಬರಮಾಡಿಕೊಂಡರು. ನಂತರ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಅವರ ಮನೆಗೆ ಕರೆದೊಯ್ಯಲಾಯಿತು.

ಮಾರ್ಗ ಮಧ್ಯದಲ್ಲಿನ ಸಿಂಧೂರ ಲಕ್ಷ¾ಣ, ಅಶ್ವಾರೂಢ ಬಸವಣ್ಣ, ಕಿತ್ತೂರ ಚನ್ನಮ್ಮ ಪ್ರತಿಮೆ, ಸದಾಶಿವ ಶೆಟ್ಟರ, ಸಂಗೊಳ್ಳಿ ರಾಯಣ್ಣ, ಡಾ| ಅಂಬೇಡ್ಕರ ಹಾಗೂ ಬಸವಣ್ಣ ಮೂರ್ತಿಗಳಿಗೆ ಶೆಟ್ಟರ ಮಾಲಾರ್ಪಣೆ ಮಾಡಿದರು.

ನಂತರ ತೆರೆದ ವಾಹನದಲ್ಲಿ ಬೈಕ್ ರ್ಯಾಲಿಯಲ್ಲಿ ಮಧುರಾ ಎಸ್ಟೇಟ್ನಲ್ಲಿರುವ ನಿವಾಸಕ್ಕೆ ಕರೆದೊಯ್ಯಲಾಯಿತು. ಬೈಕ್ ರ್ಯಾಲಿಯಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಮಾರ್ಗದ ಉದ್ದಕ್ಕೂ ಶೆಟ್ಟರ ಅವರಿಗೆ ಜಯವಾಗಲಿ ಎಂಬ ಘೋಷಣೆ ಮೊಳಗಿದವು.

ಮುಖ್ಯಮಂತ್ರಿ ಶೆಟ್ಟರ ಜೊತೆ ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ, ಸಂಸದ ಪ್ರಹ್ಲಾದ ಜೋಶಿ, ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ, ಮೋಹನ ಲಿಂಬಿಕಾಯಿ, ವೀರಭದ್ರಪ್ಪ ಹಾಲಹರವಿ, ಸೋಮಣ್ಣ ಬೇವಿನಮರದ, ಶೆಟ್ಟರ ಪುತ್ರ ಪ್ರಶಾಂತ ಮೊದಲಾದವರು ತೆರೆದ ಜೀಪಿನಲ್ಲಿ ಇದ್ದರು.
