ವಿಜಯ್ ಭರಮಸಾಗರ | Jul 20, 2012
ಡಾ.ವಿಷ್ಣುವರ್ಧನ್ ಅವರನ್ನು ನಿರ್ಮಾಪಕ ಕೆ.ಮಂಜು ಕರೆಯುತ್ತಿದ್ದದ್ದು "ಗುರು' ಅಂತ. ಸೋಲೇ ಇರಲಿ, ಗೆಲುವೇ ಇರಲಿ ಅವರಿಗಾಗಿ ವರ್ಷಕ್ಕೊಂದು ಸಿನಿಮಾ ಮಾಡುತ್ತಿದ್ದರು. ಅದರಲ್ಲೇ ಖುಷಿ ಪಡುತ್ತಿದ್ದರು. ವಿಷ್ಣು ಸಿನಿಮಾ ನಿರ್ಮಿಸಿದ್ದಕ್ಕೆ ಜೀವನ ಸಾರ್ಥಕ ಅಂತಾನೂ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಈಗ ವಿಷ್ಣು ಇಲ್ಲ. ಮುಂದಾ...? ನಮ್ಮ "ಗಣಪ' ಇದ್ದಾ ನಲ್ಲಾ!! ಹೌದು, ಮಂಜು ಈಗ ಗಣಪನ ಜಪ ಮಾಡಲು ಹೊರಟಿದ್ದಾರೆ! ಅಂದರೆ, ಗೋಲ್ಡನ್ಸ್ಟಾರ್ ಗಣೇಶ್ ಅವರ ಜೊತೆ ಜೊತೆಯಲಿ...

ಇನ್ನು ಮುಂದೆ ಸೋಲೇ ಬರಲಿ, ಗೆಲುವೇ ಬರಲಿ, ಗಣೇಶ್ ಅವರಿಗೆ ವರ್ಷಕ್ಕೊಂದು ಸಿನಿಮಾ ಮಾಡುವ ಮೂಲಕ ತಮ್ಮ "ಜೀವನ ಸಾರ್ಥಕ' ಮಾಡಿಕೊಳ್ಳಲು ಹೊರಟಿದ್ದಾರೆ ಮಂಜು!
ಈ ಮಾತನ್ನು ಸ್ವತಃ ಮಂಜು ಅವರೇ ಹೇಳಿಕೊಂಡಿದ್ದಾರೆ. ಈಗಾಗಲೇ ಗಣೇಶ್ ಅಭಿನಯದ "ಅರಮನೆ' ಮತ್ತು "ಶೈಲೂ' ಚಿತ್ರಗಳನ್ನು ನಿರ್ಮಿಸಿರುವ ಮಂಜು, "ಮದುವೆ ಮನೆ' ಮತ್ತು "ರೋಮಿಯೋ' ಚಿತ್ರಗಳ ವಿತರಣೆಯನ್ನೂ ಮಾಡಿದ್ದಾರೆ. ಇನ್ನು ಮುಂದೆ ಏನಾದರೂ ಸರಿ, ಗಣೇಶ್ಗೆ ವರ್ಷಕ್ಕೊಂದೊಂದು ಸಿನಿಮಾ ಮಾಡ್ತೀನಿ ಅಂತ ಎಲ್ಲರೆದುರು ಆಣೆ ಮಾಡಿದ್ದಾರೆ. ಇದರೊಂದಿಗೆ ತೆಲುಗು, ತಮಿಳು, ಮಲಯಾಳಂ ಭಾಷೆಯ ಚಿತ್ರಗಳ ನಿರ್ಮಾಣ ಬಗ್ಗೆಯೂ ಹೆಚ್ಚು ಆಸಕ್ತಿ ವಹಿಸಿರುವ ಮಂಜು, ಗಣೇಶ್ ಅವರಿಗೆ ವರ್ಷಕ್ಕೊಂದೇ ಸಿನಿಮಾ ಮಾಡಿದರೂ ಅದು ಎಲ್ಲರಿಗೂ ಇಷ್ಟವಾಗುವಂತಹ ಚಿತ್ರ ಮಾಡುತ್ತೇನೆ ಅನ್ನೋ ಉತ್ಸಾಹದಲ್ಲಿದ್ದಾರೆ ಮಂಜು. ಅಂದುಕೊಂಡಂತೆ ಎಲ್ಲವೂ ನಡೆದರೆ, ಈ ವರ್ಷದ ಅಂತ್ಯದಲ್ಲಿ ಗಣೇಶ್ ಜತೆಯಲ್ಲೊಂದು ಚಿತ್ರ ಸೆಟ್ಟೇರಬಹುದು ಎಂಬ ಸೂಚನೆ ಕೊಡುತ್ತಾರೆ ಅವರು.
ಮಂಜು ಹೋರಾಟ!
ಕೆ.ಮಂಜು ಹೀಗೊಂದು ಹೋರಾಟ ಹಮ್ಮಿಕೊಳ್ಳುವ ಯೋಚನೆಯಲ್ಲಿದ್ದಾರಂತೆ. ಅದು ಸಣ್ಣಪುಟ್ಟ ಹೋರಾಟವೇನಲ್ಲ. ಎಂದಿನಂತೆ ಮಲ್ಟಿಪ್ಲೆಕ್ಸ್ ವಿರುದ್ಧ ಅವರ ಹೋರಾಟ ಮುಂದುವರೆಯಲಿದೆ. ಕಾರಣ, ಮಲ್ಟಿಪ್ಲೆಕ್ಸ್ನಿಂದಾಗಿ ಕನ್ನಡ ಚಿತ್ರರಂಗಕ್ಕೆ ದೊಡ್ಡ ಪೆಟ್ಟು ಬಿದ್ದಿದೆ ಎಂಬುದು ಅವರ ಗಂಭೀರ ಆರೋಪ. "ಮಲ್ಟಿಪ್ಲೆಕ್ಸ್ನಲ್ಲಿ ಪರಭಾಷೆ ಚಿತ್ರಗಳಿಗೇ ಹೆಚ್ಚು ಮಣೆ ಹಾಕಲಾಗುತ್ತಿದೆ. ಇಲ್ಲಿನ ನೆಲ, ಅನ್ನ, ನೀರು ಬೇಕು. ಆದರೆ, ಇಲ್ಲಿನ ಚಿತ್ರಗಳೇಕೆ ಬೇಡ ಸ್ವಾಮಿ' ಈ ಕುರಿತು ಮಲ್ಟಿಪ್ಲೆಕ್ಸ್ ಮಂದಿಯನ್ನೆಲ್ಲಾ ಒಂದೆಡೆ ಸೇರಿಸಿ ಸಭೆ ನಡೆಸುವ ಬಗ್ಗೆ ನಿರ್ಮಾಪಕರ ಸಂಘದ ಸಭೆಯಲ್ಲಿ ತೀರ್ಮಾನಿಸಲಿದ್ದಾರಂತೆ. ಮಲ್ಟಿಪ್ಲೆಕ್ಸ್ನಲ್ಲಿ ಕನ್ನಡ ಚಿತ್ರಗಳಿಗೂ ಸೂಕ್ತ ಸ್ಥಾನ ಕಲ್ಪಿಸಿಕೊಟ್ಟರೆ ಓಕೆ, ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ಕೊಡುತ್ತಾರೆ ಮಂಜು.