Udayavani | Jul 27, 2012
"ಗೆಲ್ಲಬೇಕು ಅಂತಾನೇ ಹೊರಟಿದ್ದೇವೆ. ಗೆದ್ದೇ ಗೆಲ್ತಿವಿ ಅನ್ನೋ ನಂಬಿಕೆ ನಮಗಿದೆ...' ಹೀಗೆನ್ನುತ್ತಲೇ ಹಾಗೊಂದು ಸ್ಮೈಲ್ ಕೊಟ್ಟರು ನಿರ್ದೇಶಕ ಕಮ್ ಕ್ಯಾಮರಾಮೆನ್ ಜೆ.ಜೆ.ಕೃಷ್ಣ. ತುಂಬಾ ದಿನಗಳ ಬಳಿಕ ನಿರ್ಮಾಣದ ಜತೆ ನಿರ್ದೇಶನಕ್ಕೂ ಇಳಿದಿರುವ ಜೆ.ಜೆ.ಕೃಷ್ಣ, ಈ ಬಾರಿ ಅವರು ಪಕ್ಕಾ ಆಯಕ್ಷನ್ ಸಬೆjಕ್ಟ್ ನೊಂದಿಗೆ ರೆಡಿಯಾಗಿ ಬಂದಿದ್ದಾರೆ. ಅಂದಹಾಗೆ, ಆ ಚಿತ್ರದ ಹೆಸರು "ಗಜೇಂದ್ರ'. ಇತ್ತೀಚೆಗೆ ಮುಹೂರ್ತ ನೆರವೇರಿತು. ಮೂರು ದಶಕಗಳ ಹಿಂದೆ ಇದೇ ಹೆಸರಿನ ಚಿತ್ರದಲ್ಲಿ ರೆಬೆಲ್ಸ್ಟಾರ್ ಅಂಬರೀಷ್ ನಟಿಸಿದ್ದರು. ಸೋಮಶೇಖರ್ ನಿರ್ದೇಶಿಸಿದ್ದರು. ಆ ಚಿತ್ರ ಸೂಪರ್ ಡೂಪರ್ ಹಿಟ್ ಆಗಿತ್ತು. ಅದೇ ಹೆಸರಲ್ಲಿ ಮಾಡುತ್ತಿರುವ ಈ ಚಿತ್ರವೂ ಗೆಲ್ಲುತ್ತೆ ಎಂಬ ವಿಶ್ವಾಸ ನನ್ನದು ಎನ್ನುವ ಜೆ.ಜೆ.ಕೃಷ್ಣ, ಇಬ್ಬರು ಗೆಳೆಯರ ಜತೆ ಸೇರಿ ನಿರ್ಮಾಣ ಮಾಡುತ್ತಿರುವುದಾಗಿ ಹೇಳಿಕೊಂಡರು.



ಕಥೆ ಏನು? ಇದೊಂದು ಆಕ್ಷನ್, ಸೆಂಟಿಮೆಂಟ್ ಮತ್ತು ಒಂದಷ್ಟು ಪ್ರೀತಿ ಇರುವ ಚಿತ್ರ. ಸ್ಲಂನಲ್ಲಿ ವಾಸಿಸುವ ಹೀರೋ, ಅಲ್ಲಿನವರಿಗೆ ಅಚ್ಚುಮೆಚ್ಚು. ಏನೂ ಗೊತ್ತಿಲ್ಲದ ಅವನು ಜನರ ಪ್ರೀತಿಯಿಂದ ಎಂಎಲ್ಎ ಆಗ್ತಾನೆ. ಆಮೇಲೆ ಏನೇನಾಗುತ್ತೆ ಅನ್ನೋದೇ ಚಿತ್ರದ ಒನ್ಲೈನ್' ಎಂದಷ್ಟೇ ಹೇಳಿ ಕಥೆಯ ಗುಟ್ಟು ಬಿಟ್ಟುಕೊಡಲಿಲ್ಲ ಕೃಷ್ಣ. ಬಹುತೇಕ ಬೆಂಗಳೂರಲ್ಲಿ ಚಿತ್ರೀಕರಣ. ಉಳಿದಂತೆ ಪಟ್ಟದಕಲ್ಲು, ಐಹೊಳೆಯಲ್ಲಿ ಹಾಡುಗಳ ಚಿತ್ರೀಕರಣ. ನಾಯಕ ವಿನೋದ್ಪ್ರಭಾಕರ್. ಅವರಿಗೆ ಡೈಸಿಷಾ ಮತ್ತು ಸ್ಫೂರ್ತಿ ನಾಯಕಿ ಯರು. ಶೋಭರಾಜ್, ಶರತ್ಲೋಹಿತಾಶ್ವ, ಸತ್ಯಪ್ರಕಾಶ್, ಗುರುರಾಜ್ ಹೊಸಕೋಟೆ ಇತರರಿದ್ದಾರೆ ಅಂತ ವಿವರ ಕೊಟ್ಟರು ಅವರು."ಹೋರಿ' ಬಳಿಕ ಒಂದು ವರ್ಷ ಸುಮ್ಮನಿದ್ದ ವಿನೋದ್ಪ್ರಭಾಕರ್ಗೆ "ಗಜೇಂದ್ರ' ಸಿಕ್ಕಿದೆ. ಅವರಿಗಿಲ್ಲಿ ಗೂಡ್ಸ್ ಗಾಡಿ ಓಡಿಸೋ ಡ್ರೈವರ್ ಪಾತ್ರವಂತೆ. ಸ್ಲಂನಲ್ಲಿರುವ ಜಾಗವನ್ನು ಕೆಲ ಕಾಣದ ಕೈಗಳು ಕಿತ್ತುಕೊಳ್ಳಲು ಮುಂದೆ ಬಂದಾಗ, ದುಷ್ಟರ ವಿರುದ್ಧ ಹೋರಾಡಿ ಎಲ್ಲರನ್ನೂ ಸದೆಬಡಿಯುವುದೇ ಹೀರೋನ ಕಾಯಕವಂತೆ. ಆಮೇಲೆ ಏನಾಗುತ್ತೆ ಅನ್ನೋದು ಸಸ್ಪೆನ್ಸ್ . "ಗಜೇಂದ್ರ' ಇದು ಪವರ್ಫುಲ್ ಟೈಟಲ್. ಇದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾ. ಎಲ್ಲೂ ಕಾಂಪ್ರಮೈಸ್ ಆಗದೆ ಚಿತ್ರ ಮಾಡುವುದಾಗಿ ಹೇಳಿಕೊಂಡರು ವಿನೋದ್. ಶೋಭರಾಜ್ಗೆ ಕರೆಪ್ಟೆಡ್ ಪೊಲೀಸ್ ಅಧಿಕಾರಿ ಪಾತ್ರವಂತೆ. ಅವರು ಕಥೆ ಕೇಳಿಲ್ಲವಂತೆ. ಕಾರಣ, ಜೆಜೆಕೆ ಗೆಳೆಯ ಅನ್ನೋದು. ಕಥೆ ಏನಪ್ಪಾ ಅಂದಿದ್ದಕ್ಕೆ, "ಬಾ ಮಾಮ' ನಿನಗ್ಯಾಕೆ ಅಂತ ಕರೆಸಿಕೊಂಡು ಪಾತ್ರ ಕೊಟ್ಟಿದ್ದಾರಂತೆ. "ಸರ್ಕಲ್ ರೌಡಿ'ಯಲ್ಲಿ ವಿನೋದ್ ಕೈಲಿ ಒದೆ ತಿಂದಿದ್ದೆ. ಇಲ್ಲೂ ಇದ್ದೇ ಇರುತ್ತೆ ಬಿಡಿ ಅಂದರು ಶೋಭರಾಜ್.ಗುರುರಾಜ ಹೊಸಕೋಟೆ ಅವರು ಮುಸ್ಲಿಂ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. "ಜೋಗಿ' ಬಳಿಕ ಅವರಿಗೆ 22 ಸಿನಿಮಾದಲ್ಲೂ ಮುಸ್ಲಿಂ ಪಾತ್ರವೇ ಸಿಕ್ಕಿದೆಯಂತೆ. ಅವರು ಇಲ್ಲೊಂದು ಐಟಂ ಸಾಂಗ್ವೊಂದನ್ನು ಬರೆದಿದ್ದಾರಂತೆ. ಇನ್ನು, ಮೂರು ದಶಕಗಳಿಂದಲೂ ಮೇಕಪ್ ಮ್ಯಾನ್ ಆಗಿದ್ದ ಬಸವರಾಜ್, ಈಗ ನಿರ್ಮಾಪಕರು. ಅಂಬರೀಷ್ ಅವರ "ಗಜೇಂದ್ರ'ದಲ್ಲಿ 20 ರೂ.ಗೆ ಕೆಲಸ ಮಾಡಿದ್ದ ಅವರು, ಅದರಲ್ಲೊಂದು ಸಣ್ಣ ಪಾತ್ರ ನಿರ್ವಹಿಸಿದ್ದರು.
ಈಗ ಅದೇ ಹೆಸರಿನ ಚಿತ್ರಕ್ಕೆ ನಿರ್ಮಾಪಕ ರಾಗಿದ್ದಾರೆ. ಇವರೊಂದಿಗೆ ಕುಮಾರ್ಗೌಡ್ರು ಕೈ ಜೋಡಿಸಿದ್ದಾರೆ. ಡೈಸಿಷಾ, ಸ್ವಾತಿಗೂ ಇಲ್ಲಿ ಒಳ್ಳೆಯ ಪಾತ್ರವಿದೆಯಂತೆ. ಚಿತ್ರಕ್ಕೆ ರಾಜೇಶ್ರಾಮನಾಥ್ ಸಂಗೀತವಿದೆ.