ಬೆಂಗಳೂರು : ಭಾರತ-ಪಾಕಿಸ್ತಾನದಂತೆ ವರ್ತಿಸುತ್ತಿರುವ ಕುಲಪತಿ ಹಾಗೂ ಕುಲಸಚಿವರಿಗೆ ಬುದ್ಧಿ ಹೇಳಿ ಬೆಂಗಳೂರು ವಿಶ್ವವಿದ್ಯಾಲಯ ಮರ್ಯಾದೆ ಉಳಿಸಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.ವಿಧಾನಸಭೆಯಲ್ಲಿ ಶುಕ್ರವಾರ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ-ಕುಲಸಚಿವರು ಬೀದಿ ರಂಪಾಟದಲ್ಲಿ ತೊಡಗಿದ್ದಾರೆ. ವಿಶ್ವವಿದ್ಯಾಲಯದ ಘನತೆ ಹಾಳು ಮಾಡುತ್ತಿದ್ದಾರೆ. ಆ ಬಗ್ಗೆ ಗಮನ ನೀಡಿ ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ಅವರಿಗೆ ತಿಳಿಸಿದರು.ವಿಶ್ವವಿದ್ಯಾಲಯ ಕುಲಪತಿ ಎಂದರೆ ಹೇಗಿರಬೇಕು. ಕುವೆಂಪು, ಎಚ್.ನರಸಿಂಹಯ್ಯ ಅವರಂತ ಮೇಧಾವಿಗಳು ಕುಲಪತಿಗಳಾಗಿ ಕೆಲಸ ಮಾಡಿ ವಿಶ್ವವಿದ್ಯಾಲಯದ ಗೌರವ ಹೆಚ್ಚಿಸಿದ್ದಾರೆ. ಆದರೆ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಆ ಸ್ಥಾನದಲ್ಲಿರುವವರು ಬೀದಿ ಜಗಳ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.