ಹೊಸದಿಲ್ಲಿ : ಹಜ್ ವಿವೇಚನಾ ಕೋಟಾಗೆ ಸಂಬಂಧಿಸಿದಂತೆ ಜುಲೈ 23ರಂದು ತಾನು ನೀಡಿದ್ದ ಆದೇಶದಲ್ಲಿನ ಮಾರ್ಗಸೂಚಿಗಳ ಅನುಸರಣೆಗೆ ಒಂದು ವರ್ಷದ ಕಾಲಾವಕಾಶ ನೀಡಬೇಕು ಎಂಬ ಕೇಂದ್ರ ಸರಕಾರದ ಮನವಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.ಸುಪ್ರೀಂಕೋರ್ಟ್ನ ನ್ಯಾಯಾಧೀಶರಾದ ಅಫ್ತಾಬ್ ಆಲಂ ಮತ್ತು ರಂಜನಾ ಪ್ರಕಾಶ್ ದೇಸಾಯಿ ಅವರನ್ನು ಒಳಗೊಂಡ ನ್ಯಾಯಪೀಠ, ಸರಕಾರದ ಪರವಾಗಿ ಅಟಾರ್ನಿ ಜನರಲ್ ಜಿ.ಇ. ವಹನ್ವತಿ ಹಾಗೂ ವಕೀಲ ಹ್ಯಾರಿಸ್ ಬೆರಾನ್ ಅವರು ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಲು ನಿರಾಕರಿಸಿತು.ಹಜ್ ಯಾತ್ರೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ್ದ ಆದೇಶದಂತೆ ಸರಕಾರ ರೂಪಿಸಿದ ನಿಯಮಾವಳಿಗಳ ಬಗೆಗೆ ಖಾಸಗಿ ಪ್ರವಾಸಿ ನಿರ್ವಾಹಕರು ಸಲ್ಲಿಸಿದ ಆಕ್ಷೇಪಗಳ ಕಂತೆಯನ್ನೇ ನ್ಯಾಯಪೀಠದ ಮುಂದಿರಿಸಿದ ವಹನ್ವತಿ ಅವರು, ಆದೇಶದ ಜಾರಿಗೆ ಒಂದು ವರ್ಷದ ಕಾಲಾವಕಾಶ ನೀಡುವಂತೆ ಮನವಿ ಮಾಡಿಕೊಂಡರು.ಜುಲೈ 23ರಂದು ಸುಪ್ರೀಂಕೋರ್ಟ್, ಹಜ್ ವಿವೇಚನಾ ಕೋಟಾದಲ್ಲಿ ಭಾರೀ ಕಡಿತ ಮಾಡಿ ಆದೇಶ ಹೊರಡಿಸಿತ್ತು. 2012ರಲ್ಲಿ ಸರಕಾರದ ವಿವೇಚನಾ ಕೋಟಾದಡಿಯಲ್ಲಿ 5,050 ಸೀಟುಗಳನ್ನು ನಿಗದಿಪಡಿಸಲಾಗಿತ್ತಾದರೂ ಸುಪ್ರೀಂನ ಆದೇಶದಿಂದಾಗಿ 300 ಸೀಟುಗಳಿಗೆ ಸೀಮಿತಗೊಂಡಿದೆ. ರಾಷ್ಟ್ರಪತಿ ಅವರ ವಿವೇಚನಾ ಕೋಟಾದಡಿ 100, ಉಪ ರಾಷ್ಟ್ರಪತಿಗೆ 75, ಪ್ರಧಾನಿಗೆ 75 ಹಾಗೂ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವರ ವಿವೇಚನಾ ಕೋಟಾದಡಿಯಲ್ಲಿ 50 ಯಾತ್ರಿಕರನ್ನು ಹಜ್ಗೆ ಕಳುಹಿಸಲು ಸುಪ್ರೀಂಕೋರ್ಟ್ ನಿರ್ದೇಶ ನೀಡಿತ್ತು. ಅಲ್ಲದೆ ಹಜ್ ಸಮಿತಿಗೆ ಹಾಲಿ ಇರುವ 500 ಸೀಟುಗಳ ಬದಲಾಗಿ 200 ಸೀಟುಗಳನ್ನು ಸುಪ್ರೀಂಕೋರ್ಟ್ ನಿಗದಿಗೊಳಿಸಿತ್ತು.ಪ್ರಕರಣದ ವಿಚಾರಣೆಯ ವೇಳೆ, ಏಕಸ್ವಾಮ್ಯತೆಗೆ ಕಡಿವಾಣ ಹಾಕುವ ಸಲುವಾಗಿ ಖಾಸಗಿ ಪ್ರವಾಸಿ ನಿರ್ವಾಹಕರಿಗಾಗಿ ಮುಂದಿನ ವರ್ಷದಿಂದ ಹೊಸ ನೀತಿಯನ್ನು ಜಾರಿಗೊಳಿಸುವಂತೆ ನ್ಯಾಯಪೀಠ ಆದೇಶ ನೀಡಿತು. ಹಾಲಿ ನಿಯಮಾವಳಿಗಳು ಸಮರ್ಪಕವಾಗಿಲ್ಲವಾಗಿದ್ದು, ಹೊಸ ನಿಯಮಾವಳಿಗಳನ್ನು ರೂಪಿಸಿ, ನ್ಯಾಯಾಲಯಕ್ಕೆ ಸಲ್ಲಿಸುವಂತೆ ಅಟಾರ್ನಿ ಜನರಲ್ ಅವರಿಗೆ ನ್ಯಾಯಾಧೀಶರಾದ ಆಲಂ ಸೂಚನೆ ನೀಡಿದರು.ಹಾಲಿ ನಿಯಮಾವಳಿಗಳ ಪ್ರಕಾರ 2009 ಮತ್ತು 2010ರಲ್ಲಿ ಒಂದು ಕೋಟಿ ರೂಪಾಯಿಗಳಿಗೂ ಮಿಕ್ಕಿದ ವ್ಯವಹಾರ ನಡೆಸಿದ ಪ್ರವಾಸಿ ಸಾರಿಗೆ ಸಂಸ್ಥೆಗೆ ಮಾತ್ರ ಯಾತ್ರಿಕರನ್ನು ಹಜ್ಗೆ ಕೊಂಡೊಯ್ಯಲು ಅವಕಾಶವಿದೆ.