ಹೊಸದಿಲ್ಲಿ : ಭ್ರಷ್ಟಾಚಾರವನ್ನು ವಿರೋಧಿಸಿ ಅಣ್ಣಾ ಹಜಾರೆ ನೇತೃತ್ವದಲ್ಲಿ ದಿಲ್ಲಿಯ ಜಂತರ್ ಮಂತರ್ನಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹದ ಮೂರನೇ ದಿನವಾದ ಶುಕ್ರವಾರ ಯೋಗಗುರು ಬಾಬಾ ರಾಮ್ದೇವ್ ಅವರು ಪಾಲ್ಗೊಂಡು, ಪ್ರತಿಭಟನೆಗೆ ತನ್ನ ಬೆಂಬಲ ಸೂಚಿಸಿದರು.ಅಣ್ಣಾ ತಂಡದ ಈ ಬಾರಿಯ ಪ್ರತಿಭಟನೆಗೆ ಅಷ್ಟೊಂದು ಜನ ಬೆಂಬಲ ವ್ಯಕ್ತವಾಗಿಲ್ಲ. ದೇಶದ ನೂತನ ರಾಷ್ಟ್ರಪತಿ ಪ್ರಣವ್ ಮುಖರ್ಜಿ ವಿರುದ್ಧ ತಂಡ ಮಾಡಿರುವ ಆರೋಪಗಳ ಬಗೆಗೆ ಸಹಮತವಿಲ್ಲವಾಗಿದ್ದರೂ ಬಾಬಾ ರಾಮ್ದೇವ್ ಅವರು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿದರು. 2,000ಕ್ಕೂ ಮಿಕ್ಕಿದ ಸಂಖ್ಯೆಯಲ್ಲಿ ತನ್ನ ಅನುಯಾಯಿಗಳೊಂದಿಗೆ ಉಪವಾಸ ಸತ್ಯಾಗ್ರಹ ನಡೆಯುತ್ತಿರುವ ಜಂತರ್ ಮಂತರ್ಗೆ ಪಾದಯಾತ್ರೆಯ ಮೂಲಕ ಆಗಮಿಸಿದ ಬಾಬಾ ರಾಮ್ದೇವ್ ಅವರು, ಅಣ್ಣಾ ಹಜಾರೆ ಹಾಗೂ ಉಪವಾಸ ನಿರತ ಅಣ್ಣಾ ತಂಡದ ಸದಸ್ಯರಾದ ಅರವಿಂದ ಕೇಜ್ರಿವಾಲ್ ಮತ್ತು ಮನೀಶ್ ಸಿಸೋದಿಯಾ ಅವರ ಜತೆಗೂಡಿ, ಪ್ರತಿಭಟನೆಗೆ ತನ್ನ ಬೆಂಬಲವನ್ನು ಪುನರುಚ್ಚರಿಸಿದರು.ಉಪವಾಸ ಸತ್ಯಾಗ್ರಹದ ಮೂರನೇ ದಿನವಾದ ಶುಕ್ರವಾರ ಬೆಳಗ್ಗೆ ಪ್ರತಿಭಟನೆಯಲ್ಲಿ ತೀರಾ ಕನಿಷ್ಠ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ಅಲ್ಲದೆ ಪ್ರತಿಭಟನೆಯನ್ನು ಚಿತ್ರೀಕರಿಸಲು ಬಂದಿದ್ದ ಮಾಧ್ಯಮ ಮಂದಿಯನ್ನು ಕೆಲವರು ತಡೆಯಲೆತ್ನಿಸಿದಾಗ ತಳ್ಳಾಟ ಸಂಭವಿಸಿತು. ಆದರೆ ಸಂಘಟಕರು, ಮಾಧ್ಯಮದ ಕರ್ತವ್ಯಕ್ಕೆ ತಡೆ ಒಡ್ಡಿದವರಿಗೂ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದವರಿಗೂ ಯಾವುದೇ ಸಂಬಂಧವಿಲ್ಲವಾಗಿದ್ದು, ಅವರು ಹೊರಗಿನ ವ್ಯಕ್ತಿಗಳಾಗಿದ್ದಾರೆ ಎಂದು ಸ್ಪಷ್ಟಪಡಿಸಿದೆ.ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ವಿರುದ್ಧ ಅಣ್ಣಾ ತಂಡ ಮಾಡಿರುವ ಭ್ರಷ್ಟಾಚಾರ ಆರೋಪಗಳ ಬಗೆಗೆ ಬಾಬಾ ರಾಮ್ದೇವ್ ಅವರು ತನ್ನ ಅಸಮ್ಮತಿಯನ್ನು ವ್ಯಕ್ತಪಡಿಸಿದರು. ದೇಶದ ಉನ್ನತ ಸಾಂವಿಧಾನಾತ್ಮಕ ಹುದ್ದೆಯನ್ನು ಅಲಂಕರಿಸಿರುವ ವ್ಯಕ್ತಿಯೋರ್ವರನ್ನು ಟೀಕಿಸುವುದು ಸೂಕ್ತವಲ್ಲ ಎಂದು ಹೇಳಿದರು.ಭ್ರಷ್ಟಾಚಾರ ವಿರುದ್ಧದ ಅಣ್ಣಾ ತಂಡದ ಹೋರಾಟಕ್ಕೆ ತನ್ನ ಬೆಂಬಲವನ್ನು ಮುಂದುವರಿಸುವುದಾಗಿ ಘೋಷಿಸಿದ ರಾಮ್ದೇವ್ ಅವರು, ಆದರೆ ಯಾರ ವಿರುದ್ಧವೂ ಮಾಡಲಾಗುವ ವೈಯಕ್ತಿಕ ದಾಳಿಗೆ ತನ್ನ ಬೆಂಬಲ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದರು.