ಮುಂಬಯಿ : ಮಹಾರಾಷ್ಟ್ರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸಾರಥ್ಯವನ್ನು ಮುಖ್ಯಮಂತ್ರಿ ಪೃಥ್ವೀರಾಜ್ ಚವಾಣ್ ವಹಿಸಲಿದ್ದಾರೆ. ಹೀಗೆಂದು ಕಾಂಗ್ರೆಸ್ ಸ್ಪಷ್ಟ ಸೂಚನೆ ನೀಡಿದೆ. ಚವಾಣ್ ಅವರ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಅನಿಶ್ಚಿತತೆ ಕವಿದಿರುವ ನಡುವೆ ಈ ಬೆಳವಣಿಗೆ ಉಂಟಾಗಿದೆ.ಇತ್ತೀಚೆಗೆ ದಿಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಾಂಗ್ರೆಸ್ ಹೈಕಮಾಂಡ್ ಜತೆ ಸಭೆ ನಡೆದಾಗ 2014ರಲ್ಲಿ ನಡೆಯುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಾಗಿ ಪಕ್ಷದ ರೋಡ್ಮ್ಯಾಪ್ ಚವಾಣ್ ನೀಡಿದ್ದಾರೆ ಎಂದು ಹಿರಿಯ ಎಐಸಿಸಿ ನಾಯಕರೊಬ್ಬರು ತಿಳಿಸಿದ್ದಾರೆ.ಕಳೆದ ಸೋಮವಾರ ದಿಲ್ಲಿಯಲ್ಲಿದ್ದ ಚವಾಣ್, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಪಕ್ಷದ ಯುವ ನಾಯಕ ರಾಹುಲ್ ಗಾಂಧಿ, ಸೋನಿಯಾ ಅವರ ರಾಜಕೀಯ ಸಲಹೆಗಾರ ಅಹ್ಮದ್ ಪಟೇಲ್ ಜತೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದರು. ಈ ಸಭೆಗಳಲ್ಲಿ ಮಹಾರಾಷ್ಟ್ರದ ಪ್ರಸಕ್ತ ರಾಜಕೀಯ ಸನ್ನಿವೇಶದ ಮತ್ತು 2014ರ ಚುನಾವಣೆಯಲ್ಲಿ ಪಕ್ಷ ಅನುಸರಿಸುವ ತಂತ್ರಗಾರಿಕೆಯ ವಿವರವನ್ನು ಪಕ್ಷದ ನಾಯಕರಿಗೆ ಚವಾಣ್ ನೀಡಿದ್ದಾರೆ. ಕ್ಲೀನ್ ಇಮೇಜ್ ಹೊಂದಿರುವ ಚವಾಣ್ ಮಹಾರಾಷ್ಟ್ರದಲ್ಲಿ ಪಕ್ಷದ ಚುನಾವಣೆಯ ಸಾರಥ್ಯವಹಿಸಲು ಹೈಕಮಾಂಡ್ ಬಯಸಿದೆ ಎಂದು ಅವರು ಹೇಳಿದ್ದಾರೆ.ಆದರೆ ಈ ಬಗ್ಗೆ ಪೃಥ್ವೀರಾಜ್ ಚವಾಣ್ ಗಾಢ ಮೌನ ವಹಿಸಿದ್ದಾರೆ. 2014ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸಾರಥ್ಯ ವಹಿಸುತ್ತೀರಾ ಎಂದು ಸುದ್ದಿಗಾರರು ಕೇಳಿದಾಗ ಇದು ಭವಿಷ್ಯದ ಪ್ರಶ್ನೆಯಾಗಿದೆ.ಪಕ್ಷದ ಚುನಾವಣಾ ಸಾರಥ್ಯ ಯಾರು ವಹಿಸುತ್ತಾರೆ ಎಂಬುದು ನಿಮಗೆ ಸೂಕ್ತ ಸಮಯದಲ್ಲಿ ತಿಳಿಯಲಿದೆ ಎಂದು ಹೇಳಿದ್ದಾರೆ.