ಸಿದ್ದಾಪುರ:ಅಮಾಸೆಬೈಲು ಗ್ರಾ.ಪಂ. ವ್ಯಾಪ್ತಿಯ ಮಚ್ಚಟ್ಟು ಗ್ರಾಮದ ಮಠದ ಜಡ್ಡು ಬಳಿ ಅನೇಕ ವರ್ಷಗಳಿಂದ ಕಲ್ಲು ಕೋರೆ ನಡೆಸುವುದರ ಮೂಲಕ ಸುತ್ತಮುತ್ತಲಿನ ಸರಕಾರಿ ಭೂಮಿಯನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಿಸಿಕೊಂಡಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಡಾ|ಎಂ.ಎ.ರೇಜು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲಾಧಿಕಾರಿ ಅವರಿಗೆ ವಾಸ್ತವ ಅಂಶ ಬೆಳಕಿಗೆ ಬಂದ ಹಿನ್ನಲೆಯಲ್ಲಿ ಕರ್ನಾಟಕ ಭೂ ಕಂದಾಯ ಅಧಿನಿಯಮದ ಪ್ರಕಾರ ಪ್ರಕರಣ ದಾಖಲಿಸಿ ಅತಿಕ್ರಮ ಭೂಮಿಯನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಆದೇಶಿಸಿದರು.ತೊಂಭಟ್ಟು ನಿವಾಸಿ ಚಂದ್ರಶೇಖರ ಶೆಟ್ಟಿ ಮತ್ತು ಸ್ಥಳೀಯ ಗಣೇಶ ಶೆಟ್ಟಿ ಅವರು ತಲಾ ಹತ್ತು ಹಾಗೂ ನಾಲ್ಕು ಎಕರೆ ಸರಕಾರಿ ಸ್ಥಳವನ್ನು ಅತಿಕ್ರಮಿಸಿ ಅಕ್ರಮವಾಗಿ ಜೆಸಿಬಿ ಯಂತ್ರಗಳ ಮೂಲಕ ಮಣ್ಣಿನ ಧರೆ ನಿರ್ಮಿಸಿಕೊಂಡು ಸಾರ್ವಜನಿಕ ರಸ್ತೆ ಹಾಗೂ ಜನ ಹಾಗೂ ಜಾನುವಾರುಗಳಿಗೆ ತೊಂದರೆ ನೀಡುತ್ತಿದ್ದಾರೆ ಎನ್ನುವ ದೂರು ಬಂದ ಹಿನ್ನಲೆ ಜಿಲ್ಲಾಧಿಕಾರಿಗಳು ಸ್ಥಳಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ಅತಿಕ್ರಮಣ ತೆರವುಗೊಳಿಸಿ ಪ್ರಕರಣ ದಾಖಲಿಸಲಾಗುವುದು ಎಂದರು.ಉಳ್ಳೂರು-74 ಅತಿಕ್ರಮಣ ಜಾಗಕ್ಕೆ ಡಿ.ಸಿ. ಭೇಟಿ: ಉಳ್ಳೂರು -74 ಗ್ರಾಮದ ಮಾಲಾಡಿಯ ನಿವಾಸಿ ರಮೇಶ ಕೊಡ್ಗಿ ಸರಕಾರಿ ಭೂಮಿಗಳನ್ನು ಅತಿಕ್ರಮಿಸಿಕೊಂಡು ನೂರಾರು ಬೆಲೆ ಬಾಳುವ ಮರಗಳನ್ನು ಜೆಸಿಬಿ ಯಂತ್ರಗಳ ಮೂಲಕ ಮುಚ್ಚಿದ್ದರು ಎನ್ನುವ ಆರೋಪ ಕಂಡು ಬಂದ ಹಿನ್ನಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಅತಿಕ್ರಮಿಸಿಕೊಂಡ ಜಾಗವನ್ನು ಗುರುತಿಸಿ ಕರ್ನಾಟಕ ಭೂ ಕಂದಾಯ ಅಧಿನಿಯಮದ ಪ್ರಕಾರ ಪ್ರಕರಣ ದಾಖಲಿಸಲು ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಹಿಟಾಚಿಯನ್ನು ವಶಪಡಿಸಿಕೊಂಡರು.ಈ ಸಂದರ್ಭದಲ್ಲಿ ಸಹಾಯಕ ಕಮಿಷನರ್ ಸದಾಶಿವ ಪ್ರಭು , ಕಂದಾಯ ನಿರೀಕ್ಷಕರಾದ ಶಂಕರ ಶೆಟ್ಟಿ, ಆನಂದ ದಾಮ್ಲೆ, ಗ್ರಾಮ ಲೆಕ್ಕಿಗ ಚಂದ್ರಶೇಖರ ಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.