Udayavani | Aug 05, 2012
ಬೆಂಗಳೂರು: ರಾಜಕೀಯ ಜಂಜಾಟಗಳ ಮಧ್ಯೆಯೇ ಬಿಜೆಪಿಯ ಮಾಜಿ ಮುಖ್ಯಮಂತ್ರಿಗಳು ತಮ್ಮೆಲ್ಲಾ ರಾಜಕಾರಣವನ್ನು ಬದಿಗಿರಿಸಿ ನಗರದ ಮಲ್ಲೇಶ್ವರದಲ್ಲಿರುವ ರೇಣುಕಾಂಬ ಚಿತ್ರಮಂದಿರದಲ್ಲಿ ಭಾನುವಾರ 'ಭಾಗೀರಥಿ' ಕನ್ನಡ ಚಲನಚಿತ್ರ ವೀಕ್ಷಿಸಿ ಹಗುರಾದರು.
ಈ ವಿಶೇಷ ಸಿನಿಮಾ ಪ್ರದರ್ಶನದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಉಪಮುಖ್ಯಮಂತ್ರಿ ಆರ್.ಅಶೋಕ್, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು. 'ಬರ'ದ ವಿಷಯಾಧಾರಿತ ಚಿತ್ರವಾಗಿರುವ ಭಾಗೀರಥಿ ನಿನಿಮಾವನ್ನು ಹಿರಿಯ ಸಾಹಿತಿ ಬರಗೂರು ರಾಮಚಂದ್ರ ನಿರ್ದೇಶಿಸಿದ್ದು, ಬಿ.ಕೆ.ಶ್ರೀನಿವಾಸ್ ನಿರ್ಮಾಣ ಮಾಡಿದ್ದಾರೆ.
ಈ ಸಿನಿಮಾ ವೀಕ್ಷಣೆಯ ಬಳಿಕ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಅಶೋಕ್ ಹಾಗೂ ಸದಾನಂದಗೌಡ ಅವರು, 'ಜಾನಪದ ಹಿನ್ನೆಲೆಯುಳ್ಳ ಭಾಗರಥಿ ಉತ್ತಮ ಚಲನಚಿತ್ರವಾಗಿದ್ದು, ಪ್ರತಿಯೊಬ್ಬರೂ ನೋಡಬೇಕಿದೆ' ಎಂದು ಮುಕ್ತಕಂಠದಿಂದ ಚಿತ್ರತಂಡವನ್ನು ಶ್ಲಾ ಸಿದರು.
365 ದಿನಗಳು ಸ್ನೇಹಿತರು
ಈಚೆಗೆ ರಾಜಕೀಯ ಅಂಗಳದಲ್ಲಿ ನಿಂತು ಪರಸ್ಪರ ಕತ್ತಿ ಮಸೆಯುತ್ತಿರುವ ಡಿ.ವಿ.ಸದಾನಂದಗೌಡ ಹಾಗೂ ಬಿ.ಎಸ್.ಯಡಿಯೂರಪ್ಪ ಅವರು ಜಂಟಿಯಾಗಿ 'ಸ್ನೇಹಿತರ ದಿನ'ವಾದ ಭಾನುವಾರ ಸಿನಿಮಾ ವೀಕ್ಷಣೆ ಬಂದಿದ್ದು ವಿಶೇಷವಾಗಿತ್ತು.
ಈ ಬಗ್ಗೆ ಪ್ರಶ್ನಿಸಿದ ಸುದ್ದಿಗಾರರಿಗೆ, 'ಸ್ನೇಹಿತರಿಗೆ ಒಂದು ದಿನ ಮೀಸಲು ಇಲ್ಲ. ನಾವಿಬ್ಬರೂ 365 ದಿನಗಳು ಗೆಳೆಯರಾಗಿತ್ತೇವೆ' ಎಂದು ಸದಾನಂದಗೌಡ ಪ್ರತಿಕ್ರಿಯಿಸಿದರು.