Udayavani | Aug 05, 2012
ಬೆಳ್ತಂಗಡಿ: ಎಂಡೋ ಹೋರಾಟ ತೀವ್ರಗೊಂಡಿದೆ. ಬುಧವಾರದ ವೇಳೆಗೆ ಮುಖ್ಯಮಂತ್ರಿಗೆ 22 ಸಾವಿರ ಅಂಚೆ ಕಾರ್ಡ್ಗಳು ಮನವಿಯೋಲೆಯಾಗಿ ತಲುಪಲಿವೆ. ಇಷ್ಟು ಪತ್ರಗಳನ್ನು ಅಂಚೆ ಇಲಾಖೆಯಿಂದ ಈ ಉದ್ದೇಶಕ್ಕಾಗಿ ಪಡೆಯಲಾಗಿದೆ. ಈಗಾಗಲೇ 8,500 ಕಾರ್ಡ್ಗಳನ್ನು ಅಂಚೆ ಡಬ್ಬಿಗೆ ಹಾಕಲಾಗಿದೆ.
ಈ ನಡುವೆ ರವಿವಾರ ಎಂಡೋ ಹೋರಾಟದ ಕುರಿತು ಕೊಕ್ಕಡದಲ್ಲಿ ಸಭೆ ನಡೆಯಿತು. ಇದರಲ್ಲಿ ಎಂಡೋ ಹೋರಾಟ ತೀವ್ರಗೊಳಿಸುವ ನಿರ್ಣಯ ಕೈಗೊಳ್ಳಲಾಯಿತು. ಈಗಾಗಲೇ ಪ್ರಾರಂಭಿಸಿರುವ ಕಾರ್ಡ್ ಚಳವಳಿಯನ್ನು ಬುಧವಾರದ ವರೆಗೆ ಮುಂದುವರಿಸುವುದು, ಮುಖ್ಯಮಂತ್ರಿ ಬಳಿಗೆ ನಿಯೋಗ ಒಯ್ಯುವುದು, ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡುವುದು, ನಿಡ್ಲೆಯಿಂದ ಪ್ರಾರಂಭಿಸಿ ಕಡಬದ ಆಲಂಕಾರಿನ ವರೆಗೆ ವಿನೂತನ ರೀತಿಯಲ್ಲಿ ಪ್ರತಿಭಟನೆ, ಹೋರಾಟ ನಡೆಸುವುದು ಮೊದಲಾದ ನಿರ್ಣಯ ಕೈಗೊಳ್ಳಲಾಯಿತು.
ಎಂಡೋ ವಿರೋಧಿ ಹೋರಾಟಗಾರ ಶ್ರೀಧರ ಗೌಡ, ಎಪಿಎಂಸಿ ಅಧ್ಯಕ್ಷ ಕುಶಾಲಪ್ಪ ಗೌಡ, ಜಾರಪ್ಪ, ಪಾಲನಾ ಕೇಂದ್ರದ ಸಂಯೋಜಕ ಅವಿನಾಶ್ ಮೊದಲಾದವರು ಉಪಸ್ಥಿತರಿದ್ದರು.