Udayavani | Aug 05, 2012
ಚಿತ್ರ ಸಹಕಾರ: ನಿಸರ್ಗ ಕಕ್ಕಿಂಜೆ
* ಕುಸಿದ ವೃಕ್ಷ: 150 ಅಡಿ ಪ್ರಪಾತಕ್ಕೆ ರಿಕ್ಷಾ
* ಸೋಮವಾರ ಸಂಚಾರ ಸರಿಯಾಗುವ ಸಾಧ್ಯತೆ
* ರಸ್ತೆ ಬದಿ ಬಾಕಿಯಾದ ನೂರಾರು ಪ್ರಯಾಣಿಕರು
ಬೆಳ್ತಂಗಡಿ: ಚಾರ್ಮಾಡಿ ಘಾಟಿಯಲ್ಲಿ ರವಿವಾರ ಸುರಿದ ಭಾರೀ ಮಳೆಗೆ ಗುಡ್ಡದ ಜತೆಗೆ ಮರವೊಂದು ರಿಕ್ಷಾದ ಮೇಲೆ ಬಿದ್ದಿದೆ. ಪರಿಣಾಮ ರಿಕ್ಷಾ 150 ಅಡಿ ಪ್ರಪಾತಕ್ಕೆ ಉರುಳಿದೆ. ಸೋಮವಾರದ ವೇಳೆ ಸುಗಮ ಸಂಚಾರ ಸಾಧ್ಯವಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಇದೇ ವೇಳೆ ದಿಕ್ಕೆಟ್ಟ ಪ್ರಯಾಣಿಕರು, ವಾಹನ ಚಾಲಕರ ನಡುವೆ ಹೊಕೈ ಕೂಡಾ ಸಂಭವಿಸಿದೆ. ನೂರಾರು ಮಂದಿ ಸಂತ್ರಸ್ತರಂತೆ ಘಾಟಿಯಲ್ಲಿ ಹಗಲು ರಾತ್ರಿ ಕಳೆಯುತ್ತಿದ್ದಾರೆ.
ಚಾರ್ಮಾಡಿ ಘಾಟಿಯಲ್ಲಿ ರವಿವಾರ ಬೆಳಗ್ಗೆಯೇ ಗುಡ್ಡ ಜರಿತ ಪ್ರಾರಂಭವಾಗಿತ್ತು. ಇದಕ್ಕೂ ಮುನ್ನ ಲಾರಿಯೊಂದು ಅಪಘಾತಕ್ಕೀಡಾಗಿ ರಸ್ತೆ ತಡೆ ಆಗಿತ್ತು. ಇದು ಚಾರ್ಮಾಡಿ ಹಸನಬ್ಬ ಮತ್ತು ತಂಡದವರ ಸಹಕಾರದಲ್ಲಿ ತೆರವಾದ ಬಳಿಕ ಸಂಜೆ ವೇಳೆಗೆ ಗುಡ್ಡ ಜರಿತ ಪ್ರಾರಂಭವಾಗಿದೆ. 9ನೇ ತಿರುವು, 6ನೇ ತಿರುವುದು, 3ನೇ ತಿರುವಿನಲ್ಲಿ 3 ಗಂಟೆಗೆ ಗುಡ್ಡ ಕುಸಿತವಾಗಿದೆ.
ರಿಕ್ಷಾದ ಮೇಲೆ ಮರ ಬಿದ್ದಿರುವುದು.

ರಸ್ತೆಗೆ ಮರ ಹಾಗೂ ಗುಡ್ಡ ಬಿದ್ದು ತಡೆ ಉಂಟಾಗಿತ್ತು. ಸಾಲುಗಟ್ಟಲೆ ವಾಹನಗಳು ನಿಂತಿದ್ದವು. ಇದೇ ವೇಳೆ ರಿಕ್ಷಾವೊಂದರ ಮೇಲೆ ಮರ ಬಿದ್ದಿದೆ. ಚಿಕ್ಕಮಗಳೂರಿನಿಂದ ಮಂಗಳೂರಿಗೆ ತರಕಾರಿ ಸಾಗಿಸಿ ಹಿಂದಿರುಗುತ್ತಿದ್ದ ರಿಕ್ಷಾದ ಮೇಲೆ ಮರ ಬಿದ್ದ ಪರಿಣಾಮ ರಿಕ್ಷಾ 150 ಅಡಿ ಆಳದ ಪ್ರಪಾತಕ್ಕೆ ಉರುಳಿ ಬಿತ್ತು. ರಿಕ್ಷಾದೊಳಗೆ ಚಾಲಕ ಇರಲಿಲ್ಲ. ಆದರೆ ಆತನ ನಗದು, ಮೊಬೈಲ್ ಇತ್ಯಾದಿ ಇತ್ತು ಎಂದು ಪ್ರತ್ಯಕ್ಷದರ್ಶಿ ಉಮೇಶ್ ಗೌಡ ಚಾರ್ಮಾಡಿ ತಿಳಿಸಿದ್ದಾರೆ.
ರಾತ್ರಿ 7 ಗಂಟೆಯಾದರೂ ರಸ್ತೆ ತಡೆ ಸರಿಯಾಗದ ಕಾರಣ ಅನೇಕ ಬಸ್ಗಳು ಮರಳಿ ಉಜಿರೆ ಕಡೆಗೆ ಬಂದು ಬೇರೆ ದಾರಿಯಲ್ಲಿ ದಾವಣಗೆರೆ, ಚಿಕ್ಕಮಗಳೂರು, ಹಾಸನಕ್ಕೆ ಹೋದವು. ಆದರೆ ರಾತ್ರಿ ವೇಳೆ ಶಿರಾಡಿಯಲ್ಲಿಯೂ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ. ಸೋಮವಾರ ಜೆಸಿಬಿ ಅಥವಾ ಹಿಟಾಚಿ ತಂದು ಗುಡ್ಡ ಜರಿತ ಸರಿಪಡಿಸಿದ ಬಳಿಕವೇ ಸಂಚಾರ ಸುಗಮವಾಗಲು ಸಾಧ್ಯ.

ಪ್ರಯಾಣಿಕರು, ಚಾಲಕರ ಹೊ ಕೈ
ರಸ್ತೆ ತಡೆ ಉಂಟಾದಾಗ ಪ್ರಯಾಣಿಕರು, ವಾಹನ ಚಾಲಕರ ನಡುವೆ ಹೊ ಕೈ ಸಂಭವಿಸಿದೆ. ಕೆಲವೊಂದು ವಾಹನಗಳು ತ್ರಾಸದಾಯಕವಾಗಿ ಸಂಚರಿಸಿದಾಗ ಇತರ ವಾಹನ ಚಾಲಕರು ತಗಾದೆ ತೆಗೆದರು. ಪ್ರಯಾಣಿಕರು ಇನ್ನೊಂದು ಬದಿಯಲ್ಲಿ ಇದ್ದ ವಾಹನದಲ್ಲಿ ಏರಿ ಪ್ರಯಾಣ ಮುಂದುವರಿಸುವ ಯತ್ನ ಮಾಡಿದರು. ಈ ಸಂದರ್ಭ ಹೊ ಕೈ ನಡೆದಿದೆ.
ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಭಾಸ್ಕರ ರೈ ಮತ್ತು ಸಿಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಚಾರ್ಮಾಡಿ ಘಾಟಿ ಈಗ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಗೆ ಬರುತ್ತದೆ. ಮೊದಲು ರಾಜ್ಯ ಹೆದ್ದಾರಿ ಇದ್ದಾಗ ಲೋಕೋಪಯೋಗಿ ಇಲಾಖೆ ಇಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುತ್ತಿತ್ತು. ಈಗ ಹಸ್ತಾಂತರ ಆದ್ದರಿಂದ ತತ್ಕ್ಷಣದ ನೆರವಿಗೆ ಯಾರೂ ಧಾವಿಸುತ್ತಿಲ್ಲ.
· ನಾವು ನೋಡ ನೋಡುತ್ತಿದ್ದಂತೆಯೇ ಭಾರೀ ಗಾತ್ರದ ಮರ ರಿಕ್ಷಾದ ಮೇಲೆ ಉರುಳಿ ಬಿತ್ತು. ಭೂ ಕುಸಿತ ಉಂಟಾಗಿ ಬಂಡೆ ಕಲ್ಲು ಕೂಡಾ ರಸ್ತೆಗೆ ಬಿದ್ದು ಘಾಟಿ ರಸ್ತೆ ಬ್ಲಾಕ್ ಆಗಿದೆ. ಚಿಕ್ಕಮಗಳೂರು ಕಡೆಗೆ ಹೋಗುವವರಿಗೆ ತೀರಾ ಅನನುಕೂಲವಾಗಿದೆ. ಈ ರಸ್ತೆಯ ಸಮರ್ಪಕ ನಿರ್ವಹಣೆಗೆ ತತ್ಕ್ಷಣ ಕ್ರಮ ಕೈಗೊಳ್ಳಬೇಕು.
- ಉಮೇಶ್ ಗೌಡ, ಚಾರ್ಮಾಡಿ. ಗ್ರಾ. ಪಂ. ಸದಸ್ಯ
· ಘಾಟಿ ರಸ್ತೆಯಲ್ಲಿ ಮಳೆಗಾಲದಲ್ಲಿ ಆಗಾಗ ರಸ್ತೆ ಸಂಚಾರದಲ್ಲಿ ಸಮಸ್ಯೆ ಉಂಟಾಗುವ ಕಾರಣ ಇಲ್ಲಿಗೆ ಪ್ರತ್ಯೇಕ ಪರಿಹಾರ ಘಟಕ ರೂಪಿಸಬೇಕು.
- ಚಾರ್ಮಾಡಿ ಹಸನಬ್ಬ
· ತಾಸುಗಟ್ಟಲೆ, ದಿನಗಟ್ಟಲೆ ಸಾರ್ವಜನಿಕರು ರಸ್ತೆಯಲ್ಲಿಯೇ ಬಾಕಿ ಆಗುವಂತಹ ಅವ್ಯವಸ್ಥೆ ಇರುವುದು ನಿಜಕ್ಕೂ ಆಡಳಿತದ ದುರಂತವೇ ಸರಿ
- ಕಂಗೆಟ್ಟ ಪ್ರಯಾಣಿಕ