ಪಲ್ಲೆಕೆಲೆ : ಭಾರತ ತನ್ನ ಬ್ಯಾಟಿಂಗ್ ಬಲದಿಂದ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯನ್ನು 4-1 ಅಂತರದಿಂದ ಭರ್ಜರಿಯಾಗಿ ವಶಪಡಿಸಿಕೊಂಡಿರಬಹುದು. ಆದರೆ ಈ ಬ್ಯಾಟಿಂಗ್ ಸಾಧನೆಯಲ್ಲಿ ಓರ್ವ ಆಟಗಾರನ ಕೊಡುಗೆ ದೊಡ್ಡ ಸೊನ್ನೆ ಎಂಬುದನ್ನು ಮರೆಯುವಂತಿಲ್ಲ. ಎಲ್ಲರ ಬ್ಯಾಟಿಂಗ್ ಮೆರೆದಾಟದ ನಡುವೆ ಶೋಚನೀಯ ವೈಫಲ್ಯ ಅನುಭವಿಸಿದ ಆಟಗಾರನೇ ರೋಹಿತ್ ಶರ್ಮ.5 ಇನ್ನಿಂಗ್ಸ್ಗಳಲ್ಲಿ ರೋಹಿತ್ ಶರ್ಮ ಅವರ ಗಳಿಕೆ ಬರೀ 13 ರನ್! 5 ಪಂದ್ಯಗಳ ದ್ವಿಪಕ್ಷೀಯ ಸರಣಿಯಲ್ಲಿ ಇದು ಭಾರತದ ಪ್ರಧಾನ ಬ್ಯಾಟ್ಸ್ಮನ್ ಓರ್ವನ ಅತ್ಯಂತ ಕಳಪೆ ನಿರ್ವಹಣೆ. 'ಸ್ಥಿರ ನಿರ್ವಹಣೆಯನ್ನು ಮಾನದಂಡವಾಗಿರಿಸಿ ಸರಣಿಶ್ರೇಷ್ಠ ಪ್ರಶಸ್ತಿಯನ್ನು ನೀಡುವುದಿದ್ದರೆ ಇದು ಖಂಡಿತವಾಗಿಯೂ ರೋಹಿತ್ಗೆ ಸಲ್ಲುತ್ತಿತ್ತು' ಎಂಬ ಟ್ವೀಟ್ ಎಲ್ಲವನ್ನೂ ಹೇಳುತ್ತದೆ.ರೋಹಿತ್ ಶರ್ಮ ಅವರ ಗಳಿಕೆ ಹೀಗೆ ಸಾಗುತ್ತದೆ: 5, 0, 0, 4, 4. ಅವರು ಔಟಾದ ರೀತಿ ಹೀಗಿದೆ: ಬೌಲ್ಡ್, ಬೌಲ್ಡ್, ಎಲ್ಬಿಡಬ್ಲ್ಯು, ಎಲ್ಬಿಡಬ್ಲ್ಯು ಮತ್ತು ಬೌಲ್ಡ್.'ರೋಹಿತ್ ಶರ್ಮ ಅವರ ಕಾಲು ಮತ್ತು ಸ್ಟಂಪ್ ಮಧ್ಯೆ ಏನೂ ವ್ಯತ್ಯಾಸವಿರಲಿಲ್ಲ. ಚೆಂಡು ಬಡಿಯದ ಹೊರತೂ ಎರಡೂ ಕದಲುತ್ತಿರಲಿಲ್ಲ' ಎಂಬುದು ಮತ್ತೂಂದು ಟ್ವೀಟ್!ಇಂಥ ಓರ್ವ ಆಟಗಾರನನ್ನು ಕದಲಿಸದೆ ಸರಣಿಯ ಐದೂ ಇನ್ನಿಂಗ್ಸ್ಗಳಲ್ಲಿ ಆಡಿಸಿದವರಿಗೆ ಯಾವುದೇ ಪ್ರಶಸ್ತಿ ನೀಡದಿರುವುದು ಮಾತ್ರ ವಿಪರ್ಯಾಸ!