Udayavani | Aug 05, 2012
ಬೆಂಗಳೂರು: ಅಸಂಖ್ಯಾತ ಕಟ್ಟಡ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕಲ್ಪಿಸಲು ರಾಜ್ಯ ಸರ್ಕಾರ ಮತ್ತು ಕಾನೂನು ಸೇವಾ ಪ್ರಧಿಕಾರ ಒಂದಾಗಿ ಕಾರ್ಯನಿರ್ವಹಿಸಬೇಕು ಎಂದು ಸುಪ್ರಿಂಕೋರ್ಟ್ ನ್ಯಾಯಮೂರ್ತಿ ಅಲ್ತಮಸ್ ಕಬೀರ್ ಸಲಹೆ ನೀಡಿದ್ದಾರೆ.

ನ್ಯಾಷನಲ್ ಗೇಮ್ಸ್ ವಿಲೇಜ್ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 'ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ (ಉದ್ಯೋಗದ ಕ್ರಮೀಕರಣ ಮತ್ತು ಸೇವಾ ಷರತ್ತುಗಳು) ಕಾಯ್ದೆ -1996' ಕುರಿತ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಟ್ಟಡ ಕಾರ್ಮಿಕರು ಉದ್ಯೋಗಕ್ಕಾಗಿ ಜಾರ್ಖಂಡ್, ಬಿಹಾರ ಹಾಗೂ ಪಶ್ಚಿಮ ಬಂಗಾಳದ ಸೇರಿ ವಿವಿಧ ರಾಜ್ಯಗಳಿಂದ ಕರ್ನಾಟಕಕ್ಕೆ ವಲಸೆ ಬರುತ್ತಿದ್ದಾರೆ. ಆದರೆ, ಗುತ್ತಿಗೆದಾರರು ತಮ್ಮ ಕೆಲಸ ಮುಗಿದ ಬಳಿಕ ಕಟ್ಟಡ ಕಾರ್ಮಿಕರನ್ನು ನಡುಬೀದಿಯಲ್ಲಿ ಕೈ ಬಿಡುತ್ತಾರೆ. ಇದರಿಂದ ಕಾರ್ಮಿಕರು ಪುನಃ ನಿರುದ್ಯೋಗಿಗಳಾಗುತ್ತಾರೆ. ಆದ್ದರಿಂದ, ಸರ್ಕಾರ ಹಾಗೂ ಕಾನೂನು ಸೇವಾ ಪ್ರಾಧಿಕಾರ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ವೈದ್ಯಕೀಯ ಮತ್ತು ಶಿಕ್ಷಣದ ಹಕ್ಕು ಕಲ್ಪಿಸಬೇಕು ಎಂದರು.

ಸರ್ಕಾರ ಕಟಿಬದ್ಧ:
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಾತನಾಡಿ, ರಾಜ್ಯ ಸರ್ಕಾರ ಕಟ್ಟಡ ಕಾರ್ಮಿಕ ಅಭಿವೃದ್ಧಿಗಾಗಿ ಸ್ವಾಸ್ಥ್ಯ ಭೀಮಾ ಹಾಗೂ ವೈದ್ಯಕಿಯ ಹಾಗೂ ವಿಮಾ ಯೋಜನೆ ಸೇರಿ 11 ಯೋಜನೆಗಳನ್ನು ಜಾರಿ ಮಾಡಿದೆ. ಅಲ್ಲದೆ, ಕಾರ್ಮಿಕರ ಅಭಿವೃದ್ಧಿಗೆ ಬಜೆಟ್ನಲ್ಲಿ 520 ಕೋಟಿ ರೂ. ಮೀಸಲಿಟ್ಟಿದ್ದು, ಸಂಘಟಿತ ಹಾಗೂ ಅಂಘಟಿತ ಕಾರ್ಮಿಕರ ಅಭಿವೃದ್ಧಿಗೆ ಕಟಿಬದ್ಧವಾಗಿರುವುದಾಗಿ ಭರವಸೆ ನೀಡಿದರು.

ರಾಜ್ಯದಲ್ಲಿ 10 ಲಕ್ಷ ಜನ ಕಟ್ಟಡ ಕಾರ್ಮಿಕರಿದ್ದು, ಅದರ ಪೈಕಿ ಕೇವಲ 2.70 ಲಕ್ಷ ಕಾರ್ಮಿಕರು ನೋಂದಣಿಯಾಗಿದ್ದಾರೆ. ಸರ್ಕಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾಯ್ದೆ ಜಾರಿ ತಂದು, 10 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ಕಟ್ಟಡಗಳಿಗೆ ಶೇ.1ರಷ್ಟು ಸೆಸ್ ವಿಧಿಸಲಾಗುತ್ತಿದೆ. ಈವರೆಗೆ 1,400 ಕೋಟಿ ರೂ. ಸಂಗ್ರಹಿಸಲಾಗಿದ್ದು, ಆ ಹಣವನ್ನು ಕಾರ್ಮಿಕರ ಕಲ್ಯಾಣ ಮಂಡಳಿಗೆ ಮೂಲಕ ಕಾರ್ಮಿಕರ ಅಭಿವೃದ್ಧಿಗೆ ಬಳಸಲಾಗುತ್ತಿದೆ. ಆದ್ದರಿಂದ ಸಂಘಟಿತ ಕಾರ್ಮಿಕರ ವಲಯದಲ್ಲಿ ನೋಂದಣಿಯಾಗುವ ಮೂಲಕ, ಸರ್ಕಾರದ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಕಾರ್ಮಿಕರಿಗೆ ಕರೆ ನೀಡಿದರು.

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿ.ಜೆ. ಸೇನ್ ಮಾತನಾಡಿ, ಕಾರ್ಮಿಕ ಕಲ್ಯಾಣ ಕಾಯ್ದೆಯಡಿ ಹಲವು ಸೌಲಭ್ಯಗಳಿವೆ. ಆದರೆ, ಅಸಂಘಟಿತ ಕಾರ್ಮಿಕರಿಗೆ ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ. ಹೈಕೋರ್ಟ್ ಕಾರ್ಮಿಕರನ್ನು ಸೃಢರಾಗಿಸುವ ನಿಟ್ಟಿನಲ್ಲಿ ಕನಿಷ್ಟ ವೇತನ ನಿಗದಿ ಮಾಡಲು ಆದೇಶಿಸಿದೆ. ಹಾಗೆಯೇ, ಕಾರ್ಮಿಕರ ಮಕ್ಕಳಲ್ಲಿ ಅಪೌಷ್ಠಿಕ ಸಮಸ್ಯೆ ಹೆಚ್ಚಾಗಿರುವುದರಿಂದ, ಅದರ ಪರಿಹಾರಕ್ಕಾಗಿ ನ್ಯಾ.ಎನ್.ಕೆ.ಪಾಟೀಲ್ ನೇತೃತ್ವದಲ್ಲಿ ಸಮಿತಿ ರಚಿಸಿದೆ. ಅಲ್ಲದೆ, ಲೈಂಗಿಕ ಅಲ್ಪಸಂಖ್ಯಾತರೊಬ್ಬರಿಗೆ ಉದ್ಯೋಗ ಕಲ್ಪಿಸಿದೆ ಎಂದ ಅವರು, ಕಾರ್ಮಿಕ ಕಾಯ್ದೆ ಕಾನೂನು ಹಾಗೂ ಅದರ ಸವಲತ್ತುಗಳನ್ನು ಪಡೆದುಕೊಳ್ಳುವ ಕುರಿತು ಸರ್ಕಾರ ಮತ್ತು ಕಾನೂನು ಸೇವಾ ಪ್ರಾಧಿಕಾರ ಕಾರ್ಮಿಕರಲ್ಲಿ ಅರಿವು ಮೂಡಿಸಬೇಕು ಎಂದರು.

ಕಾರ್ಮಕ್ರಮದಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳಾದ ಕೆ.ಶ್ರೀಧರ ರಾವ್, ಡಿ.ವಿ.ಶೈಲೇಂದ್ರಕುಮಾರ್ ಹಾಜರಿದ್ದರು.
-ನೋಂದಣಿ ಪ್ರಕ್ರಿಯೆ ಆನ್ಲೈನ್-
ಕಟ್ಟಡ ಕಾರ್ಮಿಕರ ನೊಂದಣಿ ಪ್ರಕ್ರಿಯೆಯನ್ನು ಆನ್ಲೈನ್ ಮಾಡಲಾಗುತ್ತದೆ ಎಂದು ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ ತಿಳಿಸಿದ್ದಾರೆ.
ಕಾರ್ಮಿಕ ಇಲಾಖೆಯ ಸೌಲಭ್ಯಗಳನ್ನು ಗಣಕೀಕರಣ ಮಾಡಿ, ಫಲಾನುಭವಿಗಳಿಗೆ ಯೋಜನೆ ಲಾಭ ದೊರೆಯುವ ಪ್ರಕ್ರಿಯೆಯನ್ನು ಸರಳೀಕರಣ ಮಾಡಲಾಗುತ್ತದೆ. ಕಾರ್ಮಿಕರು ಇರುವ ಪ್ರದೇಶಕ್ಕೆ ತೆರಳಿ ನೊಂದಣಿ ಮಾಡಿಸಲು ಸಂಚಾರಿ ನೊಂದಣಿ ಬಸ್ನ್ನು ಬಿಡುಗಡೆ ಮಾಡಲಾಗಿದೆ ಎಂದರು.