Udayavani | Aug 05, 2012
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದಿಟ್ಟಿರುವ ಪಟ್ಟಿನಿಂದಾಗಿ ಬಿಜೆಪಿ ಸರ್ಕಾರದ ಕೆಲವು ಮಂತ್ರಿಗಳ ಖಾತೆಗಳ ಮರು ಹಂಚಿಕೆ ಪ್ರಕ್ರಿಯೆ ಜಟಿಲಗೊಂಡಿದ್ದು, ವಿಳಂಬವಾಗುವ ಸಾಧ್ಯತೆ ಹೆಚ್ಚಾಗಿದೆ.
ಮುಂಬರುವ ಚುನಾವಣೆ ವೇಳೆಗೆ ಪಕ್ಷವನ್ನೇ ತೊರೆಯಲು ತೆರೆಮರೆಯಲ್ಲಿ ಸಿದ್ಧತೆ ನಡೆಸುತ್ತಿರುವ ಸಚಿವರಿಗೆ ಈಗ ಪ್ರಮುಖ ಖಾತೆಗಳ ಹೊಣೆ ಯಾಕೆ ನೀಡಬೇಕು ಎಂದು ಯಡಿಯೂರಪ್ಪ ಪಕ್ಷದ ಹಿರಿಯ ನಾಯಕರನ್ನು ಒಳಗೊಂಡ ಕೋರ್ ಕಮಿಟಿ ಸಭೆಯಲ್ಲಿ ಪ್ರಶ್ನಿಸಿದ್ದಾರೆ.
ನೇರವಾಗಿ ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿ ಹಾಗೂ ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ ಅವರನ್ನು ಗುರಿಯಾಗಿಸಿಕೊಂಡೇ ಯಡಿಯೂರಪ್ಪ ಅವರು ಈ ಮಾತನ್ನು ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ, ಯಡಿಯೂರಪ್ಪ ಅವರ ಮಾತಿಗೆ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಮ್ಮ ಬೆಂಬಲಿಗರನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಗೌಡರು, ಮುಂದಿನ ಚುನಾವಣೆ ವೇಳೆಗೆ ಯಾರ್ಯಾರು ಪಕ್ಷದಲ್ಲೇ ಉಳಿಯುತ್ತಾರೆ ಎಂಬುದನ್ನು ಕಾದು ನೋಡಬೇಕು ಎಂದು ವ್ಯಂಗ್ಯಮಿಶ್ರಿತವಾಗಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಒಟ್ಟಾರೆ ಖಾತೆಗಳ ಮರುಹಂಚಿಕೆ ಮತ್ತಷ್ಟು ಗೊಂದಲ, ಬಿಕ್ಕಟ್ಟು ಹುಟ್ಟು ಹಾಕುವುದು ಗೊತ್ತಾಗುತ್ತಿದ್ದಂತೆಯೇ ಇದೀಗ ಉಭಯ ಬಣಗಳ ನಾಯಕರು ಸಮಸ್ಯೆ ಬಗೆಹರಿಸುವ ಜವಾಬ್ದಾರಿಯನ್ನು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಹೆಗಲಿಗೆ ಹಾಕಿದ್ದಾರೆ. ಪಕ್ಷದ ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಅವರೂ ಇದೇ ಮಾತನ್ನು ಹೇಳಿದ್ದಾರೆ.
ಶನಿವಾರ ರಾತ್ರಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಖಾತೆಗಳ ಮರುಹಂಚಿಕೆ ಬಗ್ಗೆ ಒಮ್ಮತಾಭಿಪ್ರಾಯಕ್ಕೆ ಬರಲು ಸಾಧ್ಯವಾಗದೇ ಇರುವುದರಿಂದ ಭಾನುವಾರ ಮುಖ್ಯಮಂತ್ರಿ ಶೆಟ್ಟರ್ ಹಾಗೂ ಸದಾನಂದಗೌಡರು ಪ್ರತ್ಯೇಕವಾಗಿ ಪ್ರಧಾನ್ ಅವರೊಂದಿಗೆ ಸಮಾಲೋಚನೆ ನಡೆಸಿದರೂ ಇತ್ಯರ್ಥಕ್ಕೆ ಬರಲು ಸಾಧ್ಯವಾಗಿಲ್ಲ.
ಸದಾನಂದಗೌಡರ ಪಾಳೆಯದಲ್ಲಿ ಗುರುತಿಸಿಕೊಂಡಿರುವ ಕೆಲವು ಸಚಿವರಿಗೆ ಈಗ ನೀಡಲಾಗಿರುವ ಖಾತೆಗಳು ಪ್ರಮುಖವಲ್ಲದ ಕಾರಣ ಹಿಂದೆ ನೀಡಿದ ಭರವಸೆಯಂತೆ ಪ್ರಮುಖ ಖಾತೆಗಳನ್ನು ನೀಡುವ ಸಂಬಂಧ ಶನಿವಾರ ನಡೆದ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆದಿತ್ತು.
ತಮ್ಮ ಬೆಂಬಲಿಗ ಸಚಿವರ ಬಳಿಯಿರುವ ಪ್ರಮುಖ ಖಾತೆಗಳನ್ನು ಬಿಟ್ಟುಕೊಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ ಯಡಿಯೂರಪ್ಪ ಅವರು ಬೇಕಾದರೆ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳುವುದಕ್ಕೆ ಅಭ್ಯಂತರವೇನೂ ಇಲ್ಲ ಎಂಬ ಮಾತನ್ನು ಆಡಿದ್ದಾರೆ.
ಆದರೆ, ಪಕ್ಷ ತ್ಯಜಿಸುವ ಮುನ್ಸೂಚನೆ ನೀಡಿರುವ ಹಾಗೂ ಆ ದಿಕ್ಕಿನಲ್ಲಿ ಪ್ರಯತ್ನ ನಡೆಸಿರುವ ಸಚಿವರಿಗೆ ಪ್ರಮುಖ ಖಾತೆಗಳನ್ನು ನೀಡುವುದಕ್ಕೆ ತಮ್ಮ ಸ್ಪಷ್ಟ ವಿರೋಧವಿದೆ ಎಂಬ ಮಾತನ್ನು ಮಾತ್ರ ಯಡಿಯೂರಪ್ಪ ಅವರು ಖಡಕ್ಕಾಗಿಯೇ ಪಕ್ಷದ ಇತರ ನಾಯಕರಿಗೆ ಹೇಳಿದ್ದಾರೆ ಎನ್ನಲಾಗಿದೆ.
ಜಾರಕಿಹೊಳಿ ಹಾಗೂ ಬಚ್ಚೇಗೌಡ ಅವರು ಈಗಾಗಲೇ ಅನ್ಯ ಪಕ್ಷಗಳ ಮುಖಂಡರೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರನ್ನು ನಂಬಿಕೊಂಡು ಪ್ರಮುಖ ಖಾತೆಗಳ ಹೊಣೆ ನೀಡುವ ಅಗತ್ಯವಿಲ್ಲ. ಗೋವಿಂದ ಕಾರಜೋಳ ಅವರಿಗೆ ಪ್ರಮುಖ ಖಾತೆಯನ್ನು ನೀಡಲು ತಮ್ಮ ಅಡ್ಡಿಯೇನಿಲ್ಲ. ಕಾರಜೋಳ ಪಕ್ಷದ ಬಗ್ಗೆ ನಿಷ್ಠೆ ಹೊಂದಿದ್ದಾರೆ. ಅವರಿಗೆ ಪ್ರಮುಖ ಖಾತೆ ನೀಡಬೇಕು ಎಂಬುದಕ್ಕೆ ತಮ್ಮ ಸಹಮತವೂ ಇದೆ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
-ಎಂಎಲ್ಸಿಗೆ ವಾಟಾಳ್ ಹೆಸರು ಪ್ರಸ್ತಾಪ-
ವಿಧಾನಪರಿಷತ್ತಿನ ನಾಮನಿರ್ದೇಶಿತ ಸ್ಥಾನಕ್ಕೆ ಮಾಜಿ ಶಾಸಕ ವಾಟಾಳ್ ನಾಗರಾಜ್ ಅವರ ಹೆಸರು ಬಿಜೆಪಿ ಪಾಳೆಯದಲ್ಲಿ ಕೇಳಿಬಂದಿದೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ವಾಟಾಳ್ ಹೆಸರನ್ನು ಪ್ರಸ್ತಾಪಿಸಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಒಟ್ಟು ಮೂರು ಸ್ಥಾನಗಳು ಖಾಲಿಯಿದ್ದು, ಈ ಪೈಕಿ ಎರಡು ಸ್ಥಾನಗಳಿಗೆ ಭಾರತೀಯ ಮಜ್ದೂರ್ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ಸದಾಶಿವ ಹಾಗೂ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ ಅವರನ್ನು ಹೆಸರಿಸಲು ಒಲವು ವ್ಯಕ್ತವಾಗಿದೆ. ಮೂರನೇ ಸ್ಥಾನಕ್ಕೆ ವಾಟಾಳ್ ನಾಗರಾಜ್ ಅವರನ್ನು ನಾಮಕರಣ ಮಾಡುವಂತೆ ಯಡಿಯೂರಪ್ಪ ಅವರು ಸಭೆಯಲ್ಲಿ ಪ್ರಸ್ತಾಪಿಸಿದ್ದು, ಇದರಿಂದ ಪಕ್ಷಕ್ಕೂ ಘನತೆ ಬರುತ್ತದೆ ಎಂಬ ಮಾತನ್ನು ಹೇಳಿದ್ದಾರೆ ಎನ್ನಲಾಗಿದೆ.
ಆದರೆ, ವಾಟಾಳ್ ಹೆಸರಿಗೆ ಇತರ ನಾಯಕರು ಹೆಚ್ಚಿನ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾದರು ಎಂದು ಮೂಲಗಳು ತಿಳಿಸಿವೆ.
ಖಾತೆಗಳ ಮರುಹಂಚಿಕೆ ಬಗ್ಗೆ ನಿರ್ಧಾರ ಕೈಗೊಳ್ಳುವ ಜವಾಬ್ದಾರಿಯನ್ನು ಮುಖ್ಯಮಂತ್ರಿ ಶೆಟ್ಟರ್ಗೆ ನೀಡಲಾಗಿದೆ. ನಾವು ಯಾರೂ ಇದರಲ್ಲಿ ಮಧ್ಯೆ ಪ್ರವೇಶಿಸುವುದಿಲ್ಲ
-ಧರ್ಮೇಂದ್ರ ಪ್ರಧಾನ್, ಬಿಜೆಪಿ ರಾಜ್ಯ ಉಸ್ತುವಾರಿ