Udayavani | Aug 06, 2012
ಮಹಾಲಿಂಗಪುರ: ಪ್ರತಿಯೊಂದು ರಂಗದಲ್ಲಿ ಛಾಯಾಚಿತ್ರ ಗ್ರಾಹಕರು ದುಡಿಯುತ್ತಿದ್ದಾರೆ. ಛಾಯಾಚಿತ್ರ ವೃತ್ತಿಯು ವಿಚಿತ್ರ, ರಚನಾತ್ಮಕ, ಕುತೂಹಲಕಾರಿ, ಕ್ರೀಯಾಶೀಲ ಮಾಧ್ಯಮವೆನಿಸಿದ್ದು, ಛಾಯಾಚಿತ್ರವು ಇತಿಹಾಸವನ್ನು ಪ್ರತಿಬಿಂಬಿಸುತ್ತದೆ ಎಂದು ಚಿತ್ರನಟಿ ಉಮಾಶ್ರೀ ಹೇಳಿದರು.
ಸ್ಥಳೀಯ ಬನಶಂಕರಿ ಸಾಂಸ್ಕೃತಿಕ ಭವನದಲ್ಲಿ ನಡೆದ ವಲಯ ಛಾಯಾಗ್ರಾಹಕರ ಸಂಘದ ಪ್ರಥಮ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಇತಿಹಾಸ ದಾಖಲೆಗೆ ಸಹಕಾರಿಯಾದ ಛಾಯಾಚಿತ್ರಗಳು ಇತಿಹಾಸದ ಪಳೆಯುಳಿಕೆಗಳೆಂದರೆ ತಪ್ಪಾಗಲಾರದು. ಇಂದಿನ ವೈಜ್ಞಾನಿಕ ಯುಗದಲ್ಲಿ ಛಾಯಾಗ್ರಾಹಕರು ತಮ್ಮ ವೃತ್ತಿಯಲ್ಲಿ ಕಲಾ ನೈಪುಣ್ಯತೆಯೊಂದಿಗೆ ಅಧ್ಯಯನ ಶೀಲತೆಯನ್ನು ಬೆಳೆಸಿಕೊಂಡು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಬೇಕು ಎಂದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಕೆಎಂಎಫ್ ನಿರ್ದೇಶಕ ರಂಗನಗೌಡ ಪಾಟೀಲ, ಮಾನವರ ವಂಶ ಪರಂಪರೆಯ ಗುರುತಿಸುವಿಕೆಯ ಹಿಂದೆ ಛಾಯಾಗ್ರಾಹಕರ ಶ್ರಮ ಅಡಗಿದೆ ಎಂದರು.
ಸಾಹಿತಿ ಸಂಗಮೇಶ ಕೋಟಿ, ಬೆಂಗಳೂರಿನ ಕೆಪಿಎ ಕಾರ್ಯದರ್ಶಿ ಎಸ್. ಪರಮೇಶ್ವರ ಮಾತನಾಡಿದರು. ಛಾಯಾಗ್ರಾಹಕ ಸಂಘದ ಅಧ್ಯಕ್ಷ ನಂದಕುಮಾರ ಹೂಗಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೆಳಗಾವಿ ಜಿಲ್ಲಾ ಛಾಯಾಗ್ರಾಹಕ ಸಂಘದ ಅಧ್ಯಕ್ಷ ರಾಜಾ ಎನ್ ಕಟ್ಟಿ, ತಮ್ಮನಗೌಡ ಕ ಪಾಟೀಲ, ಬಸಪ್ಪ ಪ ವಗ್ಗರ, ಪರಪ್ಪ ಬ ಹುದ್ದಾರ, ಛಾಯಾಗ್ರಾಹಕ ಸಂಘದ ಕಾರ್ಯದರ್ಶಿ ಮಲ್ಲಿಕಾರ್ಜುನ ಹಿಕಡಿ ಅತಿಥಿಗಳಾಗಿ ಆಗಮಿಸಿದ್ದರು. ಮಹಾಲಿಂಗಪುರ ಹಾಗೂ ಸುತ್ತಮುತ್ತಲಿನ ನೂರಾರು ಛಾಯಾಗ್ರಾಹಕರು ಇದ್ದರು.
ಪಿ.ಬಿ. ಮುಧೋಳ ಸ್ವಾಗತಿಸಿದರು. ವಿಶಾಲ ಹೂಗಾರ ನಿರೂಪಿಸಿದರು. ರಾಜು ಮುಗಳಖೋಡ ವಂದಿಸಿದರು.