Udayavani | Aug 20, 2012
ಹುಬ್ಬಳ್ಳಿ: ಬಣಜಿಗ ಸಮಾಜದ ನಿಜವಾದ ಆಸ್ತಿಯೇ ಸ್ವಾಭಿಮಾನ. ಅವಕಾಶವಾದ ಹಾಗೂ ಆದರ್ಶವಾದದ ನಡುವೆ ಅಸ್ತಿತ್ವವಾದವೂ ಇದೆ. ಅವಕಾಶವಾದದಿಂದ ನಮ್ಮ ಅಸ್ತಿತ್ವ ಗುರುತಿಸುವುದಕ್ಕಿಂತ ಸ್ವಾಭಿಮಾನದ ಬದುಕಿನಿಂದ ಅಸ್ತಿತ್ವ ಗುರುತಿಸುವಂತಾಗಬೇಕು ಎಂದು ಚಿತ್ರದುರ್ಗ ಬೃಹನ್ಮಠದ ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಗೋಕುಲ ರಸ್ತೆಯ ಗೋಕುಲ ಗಾರ್ಡನ್ದಲ್ಲಿ ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹೊರತರುವ 'ಬಣಜಿಗ ಬಂಧು' ಮಾಸಪತ್ರಿಕೆಯನ್ನು ರವಿವಾರ ಬಿಡುಗಡೆ ಮಾಡಿ ಅವರು ಮಾತನಾಡಿ, ವಿದ್ಯಾವಂತರು ಹಾಗೂ ಕಾಯಕ ನಿಷ್ಠರಾಗಿರುವ ಬಣಜಿಗ ಸಮಾಜ ಸಂಘಟನೆ ಮೂಲಕ ಸಮಾಜಕ್ಕೆ ಶಕ್ತಿ ತುಂಬಬೇಕು ಎಂದು ಹೇಳಿದರು.
ಹಲವು ವರ್ಷಗಳ ನಂತರ 'ಬಣಜಿಗ ಮಾಸ ಪತ್ರಿಕೆ' ಹೆಸರಿನಲ್ಲಿ ಬಣಜಿಗ ಸಮಾಜ ಒಗ್ಗೂಡಿರುವುದು ಸಂತಸದ ವಿಷಯ. 12ನೇ ಶತಮಾನದಲ್ಲಿ ಬಣಜಿಗರಿಗೆ ಸಮಾಜದಲ್ಲಿ ಸ್ಥಾನ ಹಾಗೂ ಧ್ವನಿ ನೀಡಿದವರು ಬಸವಣ್ಣನವರು. ಅವರ ತತ್ವ, ಸಂಸ್ಕಾರದಿಂದಲೇ ಬಣಜಿಗ ಸಮಾಜದವರು ತಲೆ ಎತ್ತಿ ನಿಲ್ಲುವಂತಾಗಿದೆ. ಬಸವಣ್ಣವರ ಆದರ್ಶಗಳನ್ನು ಮುಂದಿಟ್ಟುಕೊಂಡು ಹೆಜ್ಜೆ ಇಡಬೇಕು. ಸಂಘಟನೆ ಮೂಲಕ ಸಮಾಜ ಮುಂದೆ ಬರಬೇಕು. ಬೇರೆಬೇರೆ ಪ್ರದೇಶಗಳಲ್ಲಿ ವಾಸಿಸುತ್ತಿರುವ ಸಮಾಜದವರನ್ನು ಒಗ್ಗೂಡಿಸಿ ಬಸವತತ್ವಕ್ಕೆ ವರನ್ನು ತರುವ ಕೆಲಸ ಮಾಡಬೇಕು ಎಂದ ಅವರು, ಬೆಂಗಳೂರಿನಲ್ಲಿ ಸಮಾಜದ ಕಾರ್ಯಾಲಯ ತೆರೆಯಲು ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ ಮಾತನಾಡಿ, ಸಮಾಜದ ಸಂಖ್ಯಾ ಬಲದ ಬದಲು ಸಾತ್ವಿಕ ಗುಣಗಳ ಮೂಲಕ ನಮ್ಮನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ನಾವು ಸಮಾಜಕ್ಕೆ ಏನು ಮಾಡಬಹುದು ಎಂದು ಮೊದಲು ಚಿಂತಿಸಬೇಕು. ಜಗತ್ತಿನ ಯಾವುದೇ ಪ್ರದೇಶಕ್ಕೆ ಹೋದರೂ ಬುದ್ಧಿವಂತರು ಅವಕಾಶಗಳನ್ನು ಸೃಷ್ಟಿಸಿಕೊಳ್ಳುತ್ತಾರೆ. ನಾವು ಮೊದಲು ಕೀಳರಿಮೆ ಹಾಗೂ ದುರಭಿಮಾನ ಎರಡನ್ನೂ ಬಿಡಬೇಕು. ಜೊತೆಗೆ ನಮ್ಮೊಂದಿಗೆ ಇತರರನ್ನೂ ಕರೆದೊಯ್ಯುವ ಕೆಲಸ ಮಾಡಬೇಕು. ಆಗ ಸಮಾಜ ಉನ್ನತಿಯತ್ತ ಸಾಗುತ್ತದೆ ಎಂದರು.
ವಿಧಾನ ಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ ಮಾತನಾಡಿ, ಬಣಜಿಗ ಸಮಾಜದಲ್ಲಿ ಉನ್ನತ ಸಾಧನೆ ಮಾಡಿದವರು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಮುಖ್ಯಮಂತ್ರಿಶೆಟ್ಟರ ಅವರು ಬಣಜಿಗ ಸಮಾಜದವರೇ ಆಗಿದ್ದಾರೆ. ಸಮಾಜದ ಹಲವರು ಉತ್ತಮ ಸಾಧನೆ ಮಾಡಲು ಶರಣರ ಮಾರ್ಗದರ್ಶನವೇ ಮುಖ್ಯ ಕಾರಣ ಎಂದರು.
ಮೂರುಸಾವಿರಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಾಸ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ರಾಜ್ಯ ಬಣಜಿಗ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಅಗಡಿ ಅಧ್ಯಕ್ಷತೆ ವಹಿಸಿದ್ದರು. ಕೆ.ಆರ್. ಪೇಟೆ ಗವಿಮಠದ ಶ್ರೀ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ನಿವೃತ್ತ ಪ್ರಾಧ್ಯಪಕ ಡಾ| ವೀರಣ್ಣ ರಾಜೂರ ಮಾಸ ಪತ್ರಿಕೆ ಕುರಿತು ಮಾಹಿತಿ ನೀಡಿದರು. ಪತ್ರಿಕೆ ಸಂಪಾದಕ ಗೊಂಗಡಶೆಟ್ಟಿ, ಸಮಾಜದ ಪ್ರಧಾನ ಕಾರ್ಯದರ್ಶಿ ಗವಿಸಿದ್ಧಪ್ಪ ಕೊಪ್ಪಳ, ತಾರಾದೇವಿ ವಾಲಿ, ಮುತ್ತಣ್ಣ ಬತ್ಲಿ , ಶಿವಣ್ಣ ಅಂಗಡಿ, ಕುಂಬಾರಿ, ಸೋಮಶೇಖರ ಉಮರಾಣಿ, ಬಸವರಾಜ ಯಕಲಾಸಪುರ ಸೇರಿದಂತೆ ರಾಜ್ಯದ ಹಲವಾರು ಪ್ರದೇಶಗಳಿಂದ ಆಗಮಿಸಿದ ಸಮಾಜದ ಪ್ರಮುಖರು ಇದ್ದರು.