ಆಕಾಶದೆತ್ತರದ ಮಹಲ್ ಎಂದು ಕರೆಯಿಸಿಕೊಳ್ಳುವ ಬಿಜಾಪುರದ ಈ ಸ್ಮಾರಕ ಇದೀಗ ಉದ್ಯಾನವನವಾಗಿದ್ದು ಪ್ರವಾಸಿಗರ ಅಕರ್ಷಣೆಯ ಕೇಂದ್ರವಾಗಿದೆ.
ಆಕಾಶದೆತ್ತರದ ಮಹಲ್ ಎಂದು ಕರೆಯಿಸಿಕೊಳ್ಳುವ ಈ ಸ್ಮಾರಕ ಇದೀಗ ಉದ್ಯಾನವನವಾಗಿದೆ. ಕ್ರಿ.ಶ. 1561ರಲ್ಲಿ ಒಂದನೆಯ ಅಲಿ ಆದಿಲ್ಶಾಹ ಕಟ್ಟಿಸಿದನೆಂದು ತಿಳಿದುಬರುವುದು.
ಮೂರು ಬೃಹತ್ತಾಕಾರದ ಕಮಾನು ಹೊಂದಿದೆ. ಅಕ್ಕಪಕ್ಕದಲ್ಲೂ ಕಮಾನು ಹೊಂದಿದೆ. ಒಳಾಂಗಣದಲ್ಲಿ ಎತ್ತರವಾದ ಕಟ್ಟೆಯಿದೆ. "ದರ್ಬಾರ ಹಾಲ್'ನಂತಿರುವ ಈ ಜಾಗದಲ್ಲಿ ಕುಳಿತು ಸುಲ್ತಾನರು ಮನರಂಜನೆ ಕಾರ್ಯಕ್ರಮ ವೀಕ್ಷಿಸುತ್ತಿದ್ದರು.
ಔರಂಗಜೇಬನು ಸಿಕಂದರ ಶಾಹನನ್ನು ಸೆರೆಹಿಡಿದು, ಅವನ ಕೈಗೆ ಬೇಡಿ ಹಾಕಿದ್ದು ಇಲ್ಲಿಯೆ ಎಂದು ಇತಿಹಾಸ ಹೇಳುವುದು.

ಆನಂದ ಮಹಲ್
ಇದು ಕೂಡ ಹೋಲಿಕೆಯಲ್ಲಿ ಗಗನ ಮಹಲ್ನಂತೆ ಕಂಡುಬರುವುದು. ಎರಡನೆಯ ಇಬ್ರಾಹಿಮ್ ಇದನ್ನು ಕ್ರಿ.ಶ. 1591ರಲ್ಲಿ ನಿರ್ಮಿಸಿದ. ಸುಲ್ತಾನ ಮಹಮ್ಮದನ ರಾಣಿಯಾದ "ಹಾಜೀಬಾದಿ ಸಾಹಿಬ'ಳು ಈ ಮಹಲ್ನಲ್ಲಿ ಚಿಕ್ಕ ವಯಸ್ಸಿನ ಎರಡನೆಯ ಅಲಿಯನ್ನು ಮುದ್ದಿನಿಂದ ಬೆಳೆಸಿದಳೆಂದು ತಿಳಿದುಬರುವುದು. ಇದೀಗ ಸರಕಾರಿ ಆಡಳಿತ ಕಚೇರಿಯಾಗಿದೆ.

ಕೆಲವು ಸರಕಾರಿ ಇಲಾಖೆಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಬಿಜಾಪುರ ನಗರದಲ್ಲಿ ಅನೇಕ ಸ್ಮಾರಕಗಳಿವೆ. ಅವುಗಳಲ್ಲಿ ಕೋಟೆ-ಕೊತ್ತಲ, ಬುರುಜು, ನೀರಿನಕೆರೆ, ಕಾರಂಜಿ, ಕಾಲುವೆ, ಮಂದಿರ, ಮಸೀದಿ, ಮಹಲ್, ಅರಮನೆ, ತಂಗುದಾಣ, ಅಡಗುದಾಣ, ಕಳ್ಳ ಮಾರ್ಗ, ಕಳ್ಳಗಿಂಡಿ, ರಾಜಮಾರ್ಗ, ರಹಸ್ಯ ಮಾರ್ಗ, ಗೋರಿ, ಗುಮ್ಮಟ, ಮಿನಾರ್, ನ್ಯಾಯಾಲಯ, ಟಂಕಸಾಲೆ, ನಗರಾಖಾನಾ ಇತ್ಯಾದಿಗಳೊಂದಿಗೆ ಸೂಫಿ ಸಂತರ ದರ್ಗಾಗಳು ಇಲ್ಲಿ ಕಂಡುಬರುತ್ತವೆ.

ವಿಜಯನಗರದ ಅರಸರನ್ನು ಸೋಲಿಸಿದ ನಂತರ (1565) ಆದಿಲ್ಶಾಹಿ ಸಾಮ್ರಾಜ್ಯ ಬೆಳೆಯತೊಡಗಿದ್ದು ವಿಶೇಷ. ಈ ಸಂದರ್ಭದಲ್ಲಿ ಅವರ ಕಲೆ, ವಾಸ್ತುಶಿಲ್ಪ , ಸಾಹಿತ್ಯ ಎಲ್ಲಾ ಬೆಳೆಯತೊಡಗಿದವು.
ಕ್ರಿ.ಶ. 1489ರಿಂದ 1686ರ ವರೆಗಿನ ಅವಧಿಯಲ್ಲಿ ಆದಿಲ್ಶಾಹಿ ಮನೆತನದ ಸುಲ್ತಾನರು ಕಟ್ಟಿದ ಸ್ಮಾರಕ ಅನೇಕ. ಅದರಲ್ಲಿ ಕೆಲವು ಊರ ಹೊರಗಿವೆ. ಅವುಗಳಲ್ಲಿ ಪ್ರಮುಖವಾದವುಗಳನ್ನು ನೋಡಲೇಬೇಕು !