ಹಚ್ಚ ಹಸಿರಿನ ನಡುವೆ ಕಂಗೊಳಿಸುತ್ತಿರುವ ಕಾಸರಗೋಡು ನಗರದ ನೈಸರ್ಗಿಕ ವೈಭವನ್ನು ಕಾಣುವುದೇ ಒಂದು ಅನನ್ಯ ಅನುಭವ.

ಚಂದ್ರಗಿರಿ ನದಿಗೆ ಹತ್ತಿರದಲ್ಲಿರುವ ನಗರ. ಸಮುದ್ರಮಟ್ಟದಿಂದ 31 ಮೀಟರ್ ಎತ್ತರದಲ್ಲಿದೆ. ಜಿಲ್ಲೆಯ ಒಂದು ಪ್ರಧಾನ ಆಡಳಿತ, ವ್ಯಾವಹಾರಿಕ ನಗರ. ಅಡಿಕೆ, ಕೊಬ್ಬರಿ, ಗೇರು ಮುಂತಾದವುಗಳ ಪ್ರಮುಖ ಮಾರಾಟ ಕೇಂದ್ರ. ಸಮೀಪದ ತಾಳಿಪಡು³ನಲ್ಲಿ ಗೇರು ಬೀಜ ಕಾರ್ಖಾನೆಯೂ ಇದೆ. ಇಲ್ಲಿನ ಕಾಸರಗೋಡು ಸೀರೆ ಹೆಚ್ಚು ಜನಪ್ರಿಯತೆ ಗಳಿಸಿದೆ.

ನಗರದಿಂದ 5 ಕಿ.ಮೀ. ದೂರದಲ್ಲಿರುವ ವಿದ್ಯಾನಗರದಲ್ಲಿ 1957ರಲ್ಲಿ ನಿರ್ಮಾಣವಾಗಿರುವ ಬೃಹತ್ ಸರಕಾರಿ ಕಾಲೇಜೊಂದಿದೆ. ಜಿಲ್ಲೆಯ ವಿದ್ಯಾರ್ಥಿಗಳ ಒಂದು ಪ್ರಧಾನ ಶೈಕ್ಷಣಿಕ ಕೇಂದ್ರವಾಗಿರುವ ಇಲ್ಲಿಗೆ ಪ್ರತಿವರ್ಷ ಹಲವು ರ್ಯಾಂಕ್ಗಳು ಸಿಗುತ್ತಿವೆ. ಇಲ್ಲಿ ಕನ್ನಡ ವಿದ್ಯಾರ್ಥಿಗಳ "ಸ್ನೇಹರಂಗ' ಎಂಬ ಪ್ರತ್ಯೇಕ ಸಂಘಟನೆಯಿದ್ದು, ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿದೆ. ಕನ್ನಡ ಸಂಶೋಧನಾ ಕೇಂದ್ರವೂ ಇಲ್ಲಿದೆ.

ನಗರದಿಂದ 5 ಕಿ.ಮೀ. ದೂರದಲ್ಲಿ ಕೂಡ್ಲು (ರಾಮದಾಸ ನಗರ) ಎಂಬ ಸ್ಥಳವೊಂದಿದ್ದು, ಇದು ಚಾರಿತ್ರಿಕವಾಗಿ ವಿಶೇಷವಾಗಿದೆ. ಯಕ್ಷಗಾನ ರಂಗಕ್ಕೆ ಇಲ್ಲಿನ ಕೊಡುಗೆ ಅಪಾರ. ಕೂಡ್ಲು ಮೇಳ ಈ ಹಿಂದೆ ಯಕ್ಷಗಾನ ಸೇವೆ ಮಾಡಿದೆ. ಸ್ವಾತಂತ್ರ್ಯ ಹೋರಾಟದಲ್ಲೂ ಇಲ್ಲಿನ ಕೊಡುಗೆ ಸಾಕಷ್ಟಿದೆ.

ತಳಂಗರೆ ಟೊಪ್ಪಿ
ಮಾಪಿಳ್ಳ ಪಾಟ್ ಮತ್ತು ಮುಸ್ಲಿಮರ ಟೊಪ್ಪಿಗೆ ತಳಂಗರೆ ಪ್ರಸಿದ್ ಪಡೆದಿದೆ. ಮಾಪಿಳ್ಳ ಪಾಟ್ ರಚನೆಗೆ ಇಲ್ಲಿನವರ ಕೊಡುಗೆ ಅಪಾರ. ಮುಸ್ಲಿಮರ ಟೊಪ್ಪಿ ನಿರ್ಮಾಣ ಮತ್ತು ಮಾರಾಟದಲ್ಲೂ ಈ ಪ್ರದೇಶದ ಪಾಲು ದೊಡ್ಡದು. ಇದು ಇಲ್ಲಿ ಗುಡಿಕೈಗಾರಿಕೆಯಂತಾಗಿದೆ. ವಿವಿಧ ವಿನ್ಯಾಸಗಳ, ಕಸೂತಿ ಕೆಲಸಗಳಿಂದೊಡಗೂಡಿದ ಟೊಪ್ಪಿ ಇಲ್ಲಿ ತಯಾರಾಗುತ್ತದೆ.
ಕುಂಬಳೆ
ಕಾಸರಗೋಡು ನಗರದಿಂದ 12 ಕಿ.ಮೀ. ಉತ್ತರಕ್ಕಿರುವ ನಗರ, ಐತಿಹಾಸಿಕ ಪ್ರದೇಶ. ಕುಂಬಳೆ ರಾಜರ ಕೇಂದ್ರಸ್ಥಾನವಾಗಿತ್ತು. 1514ರಲ್ಲಿ ಪೋರ್ಚುಗೀಸ್ ಪ್ರಯಾಣಿಕರಾದ ಡ್ನೂರ್ತ್ ಬಾಬೊìಸಾ ಇಲ್ಲಿಗೆ ಭೇಟಿ ನೀಡಿದ್ದ ಉಲ್ಲೇಖವಿದೆ. ಸಮುದ್ರ ಕಿನಾರೆಗೆ ತಾಗಿಕೊಂಡಿರುವ ಪ್ರದೇಶ. ಸಮೀಪ ಆರಿಕ್ಕಾಡಿ ಎಂಬಲ್ಲಿ ಅಳಿದುಳಿದ ಕೋಟೆಯ ಅವಶೇಷಗಳಿವೆ.

ಇದೀಗ ಇದೇ ಕೋಟೆಯ ನಡುವೆ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಲಾಗಿದೆ. ಯಕ್ಷಗಾನದ ಜನಕ ಎಂದು ಹೇಳಲಾಗುವ ಪಾರ್ತಿಸುಬ್ಬನ ಹುಟ್ಟೂರು. ಆತ ತನ್ನ ಯಕ್ಷಗಾನ ಪ್ರಸಂಗಗಳನ್ನು ಇಲ್ಲಿನ ಶೇಡಿಕಾವು ಶಂಕರನಾರಾಯಣ ದೇವಸ್ಥಾನದಲ್ಲಿ ಕುಳಿತು ರಚಿಸಿದ್ದಾನೆ ಎಂದು ಹೇಳಲಾಗುತ್ತಿದೆ.