ಧಾರ್ಮಿಕ ಕೇಂದ್ರ ಎಡನೀರು ಮಠ
ಕಾಸರಗೋಡು-ಚೆರ್ಕಳ- ಪುತ್ತೂರು ರಸ್ತೆಯಲ್ಲಿ ಸುಮಾರು 8 ಕಿ.ಮೀ. ಸಂಚರಿಸಿದಾಗ ಎಡನೀರು ಮಠ ಸಿಗುತ್ತದೆ. ಕಲೆ, ಸಂಸ್ಕೃತಿ, ಆಧ್ಯಾತ್ಮಿಕತೆ, ಧಾರ್ಮಿಕತೆಗೆ ವಿಶೇಷ ಕೊಡುಗೆ ನೀಡುತ್ತಿರುವ ಈ ಮಠ ಕೇರಳ-ಕರ್ನಾಟಕದಿಂದ ಅಸಂಖ್ಯಾಕ ಭಕ್ತರು, ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.

ಶಂಕರಾಚಾರ್ಯರ ನಾಲ್ವರು ಪ್ರಧಾನ ಶಿಷ್ಯರಲ್ಲಿ ಒಬ್ಬರಾಗಿದ್ದ ತೋಟಕಾಚಾರ್ಯ ಅವರಿಗೆ ಸೇರಿದ್ದಾಗಿದೆ. ಎಡನೀರು ಮಠವು ತ್ರಿಚಂಬರಂ ಎಂಬಲ್ಲಿನ ಮಠದ ಶ್ರೀಗಳಿಂದ ಸ್ಥಾಪನೆಯಾದದ್ದು ಎಂದು ಹೇಳಲಾಗುತ್ತಿದೆ. ಪ್ರಸ್ತುತ ಈ ಮಠದಲ್ಲಿ ಶ್ರೀ ಕೇಶವಾನಂದ ಸ್ವಾಮೀಜಿ ಅವರು ಕಲೆ, ಸಂಸ್ಕೃತಿ, ಆಧ್ಯಾತ್ಮಿಕತೆ ಮತ್ತು ಧಾರ್ಮಿಕತೆಗೆ ವಿಶೇಷ ಕೊಡುಗೆ ನೀಡುತ್ತಾ ಜನಮನ್ನಣೆ ಗಳಿಸಿದ್ದಾರೆ.
ಕಾಂಚನಂಗಾ

ಪಿ.ಎಸ್. ಪುಣಿಂಚಿತ್ತಾಯರ ಕಲಾಗ್ರಾಮವಿದು. ಮುಳ್ಳೇರಿಯಾ ಸಮೀಪದ ಕಾರಡ್ಕ ಎಂಬಲ್ಲಿದೆ. ಕಲಾಕಾರರು ಮತ್ತು ಪ್ರವಾಸಿಗರ ಕುತೂಹಲದ ಊರು.

ಮಾಯಿಪ್ಪಾಡಿ ಅರಮನೆ
ಕಾಸರಗೋಡು-ಉಳಿಯತ್ತಡ್ಕ- ಪೆರ್ಲ ರಸ್ತೆಯಲ್ಲಿ ಸುಮಾರು 8 ಕಿ.ಮೀ.ದೂರ ಸಾಗಿದಾಗ ಸಿಗುವ ಮಾಯಿಪ್ಪಾಡಿ ಎಂಬಲ್ಲಿ ಕುಂಬಳೆ ರಾಜರಿಗೆ ಸೇರಿರುವ ಅರಮನೆಯೊಂದಿದೆ. ಇಲ್ಲಿ ಈಗಲೂ ಪಟ್ಟಾಭಿಷೇಕದ ವಿವಿಧಾನಗಳು ಸಂಪ್ರದಾಯಬದ್ಧವಾಗಿ ಜರಗುತ್ತಿದೆ.
ಸೀಮೆಯ ಪ್ರಸಿದ್ಧ ದೇವಸ್ಥಾನಗಳ ಮೊಕ್ತೇಸರರು ಇಲ್ಲಿನ ರಾಜರಾಗಿದ್ದಾರೆ. ಚಾರಿತ್ರಿಕ ಪ್ರಧಾನವಾದ ಈ ಅರಮನೆ ಗತಕಾಲದ ಇತಿಹಾಸಕ್ಕೊಂದು ಸಾಕ್ಷಿ. ಕುಂಬಳೆ ಸೇರಿದಂತೆ ಕಾಸರಗೋಡಿನ ಚರಿತ್ರೆಯಲ್ಲಿ ಇದರ ಕೊಡಗೆ ಮಹತ್ತರವಾದುದು.
