ಬಿಜಾಪುರ ಪ್ರವಾಸ ಕೈಗೊಳ್ಳುವವರು ಸಾವಿರ ವರ್ಷಗಳಷ್ಟು ಹಳೆಯ ಬಬಲೇಶ್ವರ ದೇವಾಲಯವನ್ನು ಸಂದರ್ಶಿಸುವುದು ಅವಶ್ಯ.
ಬಬ್ಬುಲೇಶ್ವರ ಎಂಬ ಅರಸ (ಕ್ರಿ.ಶ. 1178) ದೇವಾಲಯವೊಂದನ್ನು ಕಟ್ಟಿಸಿದ್ದಾನೆ. ಆದ್ದರಿಂದ ಈ ಊರು "ಬಬಲೇಶ್ವರ' ಎಂಬುದಾಗಿದೆ ಎಂದು ಜನ ಅಭಿಪ್ರಾಯಪಡುತ್ತಾರೆ.

ಅಂದು ಆದಿಲ್ಶಾಹಿ ಸೈನಿಕರು ಹಸಿದು ಬಂದಾಗ ಅವರಿಗೆ "ಅಂಬುಲ ಮುತ್ಯಾ' ಎಂಬ ಪವಾಡಪುರುಷ ತನ್ನಲ್ಲಿರುವ ಒಂದೆ ಗಡಿಗೆ ಯಿಂದ ಅಂಬಲಿ ತೆಗೆದು ಎಲ್ಲರಿಗೂ ತಿನ್ನಿಸಿ ಹೊಟ್ಟೆ ತುಂಬಿಸಿ ಪವಾಡ ಮೆರೆದ ದೇವಾಲಯವಿದೆ. ಅದು ಅವನ ಹೆಸರಿನಲ್ಲಿದೆ. ಇದು 20 ಕಿ.ಮೀ. ದೂರದಲ್ಲಿದೆ.
ಚಾಲುಕ್ಯ ಶೈಲಿಯ ಎರಡು ದೇವಾಲಯಗಳು ಇಲ್ಲಿವೆ. ಕ್ರಿ.ಶ. 1764ರಲ್ಲಿ ಪಟ್ಟಕ್ಕೆ ಬಂದ ಗುರುಪಾದೇಶ್ವರ ಶಿವಯೋಗಿ ಬೃಹನ್ಮಠವಿದೆ. ಶ್ರೀ ಶಾಂತವೀರ ಶಿವಯೋಗಿಗಳು ಈ ನೆಲದಲ್ಲಿ ಆಧ್ಯಾತ್ಮಿಕ ಸಾಧನೆ ಮಾಡಿದ್ದಾರೆ.

ಹೊನವಾಡ
"ಪೊನ್ನ' ಎಂಬ ನಾಣ್ಯವನ್ನು ಬಟವಾಡೆ ಮಾಡುತ್ತಿದ್ದ ಈ ಗ್ರಾಮ; ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ಅಗ್ರಹಾರವಾಗಿತ್ತೆಂದು ಶಾಸನದಿಂದ ತಿಳಿದುಬರುವುದು. ಆದ್ದರಿಂದ ಇದೀಗ "ಹೊನವಾಡ'ವೆಂಬುದಾಗಿದೆ.

ಕ್ರಿ.ಶ. 1054ರಲ್ಲಿ ಚಾಲುಕ್ಯರ ದೊರೆ ಸೋಮೇಶ್ವರನ ರಾಣಿ ಕೇತಲಾದೇವಿ ಈ ಗ್ರಾಮವನ್ನು ಆಳಿದ್ದಾಳೆ. ಈ ಗ್ರಾಮದಲ್ಲಿ ಪ್ರಾಚೀನ ಕಾಲದ ಕೆರೆ, ಬಾವಿಗಳಿವೆ. 1932ರಲ್ಲಿ ಮಹಾತ್ಮ ಗಾಂಧೀಜಿಯವರು ಈ ಮಾರ್ಗವಾಗಿ ಬೆಳಗಾಂವಿಗೆ ಹೊರಡುವಾಗ, ದಾರಿ ಮಧ್ಯ ವಿಶ್ರಾಂತಿಗಾಗಿ ಈ ಗ್ರಾಮದ ಕೆರೆ ಹತ್ತಿರ ಇಳಿದು, ಜನತೆಯನ್ನುದ್ದೇಶಿಸಿ ಸ್ವಾತಂತ್ರ್ಯ ಸಂಗ್ರಾಮ ಕುರಿತು ಭಾಷಣ ಮಾಡಿದ್ದನ್ನು ಇಲ್ಲಿನ ಜನತೆ ನೆನಪಿಸಿಕೊಳ್ಳುತ್ತಾರೆ.
