ಬಿಜಾಪುರ ಜಿಲ್ಲಾ ಪ್ರವಾಸ ಕೈಗೊಳ್ಳುವವರು ಆಲಮಟ್ಟಿ ಜಲಾಶಯವನ್ನು ಕಣ್ತುಂಬಿಕೊಂಡಾಗಲೇ ಅವರ ಪ್ರವಾಸ ಸಾರ್ಥಕವಾಗುತ್ತದೆ.
ಆಲಮಟ್ಟಿಯು ಈಗ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ ಎಂಬ ಹೆಸರಿನಿಂದ ಗುರುತಿಸಿಕೊಂಡು ರಾಷ್ಟ್ರಮಟ್ಟದ ಸುಂದರ ಪ್ರವಾಸಿ ತಾಣವಾಗಿ ರೂಪುಗೊಂಡಿದೆ. ಇಲ್ಲಿ ರಾಕ್ಗಾರ್ಡನ್, ಕೃಷ್ಣಾ ಗಾರ್ಡನ್, ಲವಕುಶ ಗಾರ್ಡನ್ಗಳು ತುಂಬಾ ಅದ್ಭುತವಾಗಿವೆ.

ರಾಷ್ಟ್ರೀಯ ಹೆದ್ದಾರಿ 13 ಮತ್ತು ಗದಗ-ಸೋಲಾಪೂರ ರೇಲ್ವೆ ಮಾರ್ಗದ ಮೂಲಕ ಇಲ್ಲಿಗೆ ತಲುಪಬಹುದು. ಜಿಲ್ಲಾ ಕೇಂದ್ರದಿಂದ 48 ಕಿ.ಮೀ. ದೂರದಲ್ಲಿದೆ.
ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟಿನಿಂದ ಈ ಭಾಗದ ರೈತರಿಗೆ ನೀರಾವರಿ ಅನುಕೂಲವಾಗಿದೆ. 40 ಮೀಟರ್ ಎತ್ತರ, 1.6 ಕಿ.ಮೀ. ಉದ್ದವಾದ ಅಣೆಕಟ್ಟಲ್ಲಿ ಸಂಗ್ರಹಗೊಳ್ಳುವ ನೀರನ್ನು 6.15 ಲಕ್ಷ ಹೆಕ್ಟೇರ್ ಭೂಪ್ರದೇಶಕ್ಕೆ ಕೃಷಿಗಾಗಿ ಒದಗಿಸಲಾಗುವುದು. ಈ ಭಾಗವು ಗುಡ್ಡಗಾಡು ಪ್ರದೇಶವಾಗಿದೆ. ಇಲ್ಲಿ ಕರ್ನಾಟಕದ ಗಾಂಧಿಯೆಂದು ಹೆಸರಾದ ದಿ | ಹಡೇìಕರ್ ಮಂಜಪ್ಪನವರು ಆಶ್ರಮ ನಿರ್ಮಿಸಿಕೊಂಡು ದಾರ್ಶನಿಕರಂತೆ ಬದುಕಿದ್ದರು.

ಜಾಯವಾಡಗಿ
ಈ ಗ್ರಾಮವು ಧಾರ್ಮಿಕ ಕ್ಷೇತ್ರವಾಗಿದೆ. ಇಲ್ಲಿರುವ ಶಿವಪ್ಪ ಮುತಾöನಗುಡಿ, ಪಾದಗಟ್ಟಿಯು ತುಂಬಾ ಪ್ರಸಿದ್ಧವಾದ ಭಕ್ತಿ ತಾಣವಾಗಿದೆ. ಪ್ರತಿ ವರ್ಷದ ಯುಗಾದಿಗೆ ಜಾತ್ರೆ ಜರಗುವುದು. ಪ್ರತಿ ತಿಂಗಳ ಅಮಾವಾಸ್ಯೆಗೆ ಭಕ್ತಾದಿಗಳು ಸಾಗರೋಪಾದಿಯಲ್ಲಿ ಹರಿದುಬಂದು ತಮ್ಮ ಹರಕೆ ತೀರಿಸುವರು.
ರೈತರು ತಮ್ಮ ರಾಸುಗಳನ್ನು ತಂದು, ದೇವಾಲಯ, ಪಾದಗಟ್ಟಿಗೆ ಪ್ರದಕ್ಷಿಣೆ ಹಾಕಿಸುವರು. ಇದರಿಂದ ರಾಸುಗಳಿಗಿದ್ದ ತ್ರಾಸು ನಿವಾರಣೆಯಾಗುವುದೆಂಬ ಪ್ರತೀತಿಯಿದೆ. ಜಾಯವಾಡಗಿ, ಬ.ಬಾಗೇವಾಡಿಯಿಂದ 25 ಕಿ.ಮೀ. ದೂರದಲ್ಲಿದೆ.

ಮುಳವಾಡ
ಮುಳವಾಡ ಗ್ರಾಮವು "ಗೌರಿಶಂಕರ' ಜಾತ್ರೆಯಿಂದ ಪ್ರಸಿದ್ಧವಾಗಿದೆ. ಈ ಜಾತ್ರೆಯಲ್ಲಿ ಎಳೆ ಮಕ್ಕಳನ್ನು ದೇವಾಲಯದ ಮೇಲಿನಿಂದ ಕೆಳಗೆ ಎಸೆಯುವರು. ಕೆಳಗೆ ಚಾದರದಲ್ಲಿ ಮಕ್ಕಳನ್ನು ಹಿಡಿದುಕೊಳ್ಳುವರು. ಇದೊಂದು ವಿಲಕ್ಷಣವಾದ ಹರಕೆ ಪದ್ಧತಿ.
ಇಲ್ಲಿ ಭಕ್ತಾದಿಗಳು ದೇವರ ಪೂಜೆಗೆ, ನೈವೇದ್ಯಕ್ಕೆ ಒನಕೆ, ಲಟ್ಟಣಿಗೆಯನ್ನು ನೀಡುವರು. ಕೆಲ ಗಂಡಸರು ಹರಕೆ ತೀರಿಸಲು ಮಡಿ ಸೀರೆಯುಟ್ಟು , ತಲೆಗೆ ಹೂವಿನ ದಂಡೆ ಮುಡಿದು, "ಗಂಡು ಮುತ್ತೈದೆ'ಯಾಗಿ ಸೇವೆ ಸಲ್ಲಿಸುವ ವಾಡಿಕೆಯಿದೆ.
ಮುಳವಾಡದ ಗೌರಿಶಂಕರ ಜಾತ್ರೆ ಈ ಭಾಗದಲ್ಲಿ ತುಂಬಾ ಪ್ರಸಿದ್ಧಿಯನ್ನು ಹೊಂದಿದೆ. ಗೌರಿ ಹುಣ್ಣಿಮೆಯ ದಿನ ಜಾತ್ರೆ ನಡೆಯುವುದು.
ಮುಳವಾಡ ನೀರಾವರಿ ಯೋಜನೆಯಿಂದ ಹೆಸರುವಾಸಿಯಾಗಿದೆ. "ಮುಳವಾಡ ಏತ ನೀರಾವರಿ ಯೋಜನೆ' ಈ ಭಾಗದ ರೈತರ ಕೃಷಿ ಬದುಕಿಗೆ ಜೀವಾಳವಾಗಿದೆ.

ಕೋಲ್ಹಾರ
ಬಸವನ ಬಾಗೇವಾಡಿಯಿಂದ ಪಶ್ಚಿಮಕ್ಕೆ ಕೃಷ್ಣಾ ನದಿ ದಡದಲ್ಲಿರುವ ಪುಟ್ಟ ಗ್ರಾಮ. ಕ್ರಿ.ಶ. 1223ರ ಶಾಸನವು ಈ ಗ್ರಾಮವನ್ನು "ದಕ್ಷಿಣ ವಾರಣಾಸಿ' ಎಂದು ಗುರುತಿಸಿದೆ.
ಕೋಲ್ಹಾರದ ಮೂಲ ಬೇರುಗಳು ಕೃಷ್ಣೆಯ ಹಿನ್ನೀರಿನಲ್ಲಿ ಮುಳುಗಿ ಹೊಸ ನಗರ ತಲೆ ಎತ್ತಿದೆ. ಈ ಊರಿನ ಕೆನೆ ಮೊಸರು ಪ್ರಸಿದ್ಧಿಯಾಗಿದೆ. ಬಾಗಲಕೋಟೆ-ಬಿಜಾಪುರ ಮಾರ್ಗವಾಗಿ ಬರುವ ಪ್ರವಾಸಿಗರು ಕೋಲ್ಹಾರದಲ್ಲಿ ಇಳಿದು ಅವಲಕ್ಕಿ-ಕೆನೆ ಮೊಸರು ಚಪ್ಪರಿಸಿ ತಿನ್ನಲು ಹಂಬಲಿಸುವರು.
ಕೃಷ್ಣಾ ನದಿಯ ಹಿನ್ನೀರಿಗೆ ಮೂರು ಕಿ.ಮೀ. ಉದ್ದದ ಸೇತುವೆಯನ್ನು ನಿರ್ಮಿಸಲಾಗಿದೆ. ಇದು ಇಡೀ ದಕ್ಷಿಣ ಭಾರತದ ದೊಡ್ಡ ಸೇತುವೆ ಮತ್ತು ಕರ್ನಾಟಕ ರಾಜ್ಯದ ಅತೀದೊಡ್ಡ ಸೇತುವೆಯಾಗಿದೆ.
