ಡಾ| ವಸುಧಾ | Dec 14, 2012
ಕಹಿಬೇವು' - ಸಂಸ್ಕೃತದಲ್ಲಿ "ನಿಂಬಾ' ಎಂದು ಕರೆಯಲಾಗುವ ಈ ಬಹೂಪಯೋಗಿ, ಬಹುಮೂಲ್ಯ ಔಷಧೀಯ ವನಸ್ಪತಿ, ಇಂದು ಹಿಂದೆಂದಿಗಿಂತಲೂ ಹೆಚ್ಚು ವಿಶ್ವಾದ್ಯಂತ ಔಷಧೀಯವಾಗಿ ಮಾನ್ಯವಾಗುತ್ತಿದೆ.
"ಅಝಡಿರ್ಯಾಕ್ಟಾ ಇಂಡಿಕಾ' ಎಂಬ ವೈಜ್ಞಾನಿಕ ಹೆಸರುಳ್ಳ ಈ ಔಷಧೀಯ ಮರವು ಹಿಂದಿನ ಕಾಲದಲ್ಲಿ ಹಳ್ಳಿಗಳಲ್ಲಿ ಅಲ್ಲಲ್ಲಿ ಕಟ್ಟೆಗಳಲ್ಲಿ ಬೆಳೆಸುತ್ತಿದ್ದರು. ಸಾಲುಮರಗಳನ್ನಾಗಿಯೂ ನೆಡುತ್ತಿದ್ದರು. ಇದು ಉತ್ತಮ ಅರ್ಥಾತ್ ಗಾಳಿಯನ್ನು ಶುದ್ಧೀಕರಿಸುವ ಹಲವು ಮುಖ್ಯ ಮರಗಳಲ್ಲಿ ಅಶ್ವತ್ಥ, ಕಹಿಬೇವು ಮುಖ್ಯವಾದವು!
"ನಿಂಬಿಡಿನ್', "ಮಾರ್ಗೊಸೈನ್' ಇವೇ ಮೊದಲಾದ ಔಷ ಧೀಯ ದ್ರವ್ಯಗಳನ್ನು ಹೊಂದಿರುವ ಕಹಿಬೇವು ದೇಶೀಯ ವೈದ್ಯ ಪದ್ಧತಿಗಳಲ್ಲಿ ಮಾತ್ರವಲ್ಲದೇ, ಆಧುನಿಕ ವೈದ್ಯಕೀಯದಲ್ಲೂ ಚರ್ಮ ರೋಗ, ಕ್ಯಾನ್ಸರ್ನಂತಹ ಭೀಕರ ರೋಗಗಳಲ್ಲೂ ಉಪಯುಕ್ತವಾಗಿದೆ.

ಚಳಿಗಾಲ ಬಂತೆಂದರೆ ಚರ್ಮ ಒಣಗುವುದು, ಒಡೆಯುವುದು, ತುರಿಕೆ, ಚರ್ಮರೋಗಗಳು ಹೆಚ್ಚುತ್ತವೆ.
30 ಕಹಿಬೇವಿನ ಎಲೆಗಳನ್ನು ತುಪ್ಪದಲ್ಲಿ ಹುರಿದು, ಆರಿದ ಬಳಿಕ ಅರೆದು ಬಳಿಕ ಜೇನು ಮೇಣ ಅಥವಾ ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ಹಚ್ಚಿದರೆ ಕೈಕಾಲುಗಳು ಒಡೆಯುವುದು, ಬಿರುಕು, ತುರಿಕೆ ಕಡಿಮೆಯಾಗುತ್ತದೆ.
ತುರಿಕೆ, ಕಜ್ಜಿ , ಚರ್ಮರೋಗಗಳಲ್ಲಿ ಹಸಿ ಎಲೆಯ ರಸ ವನ್ನು (2 ಚಮಚ), ಶುದ್ಧ ಜೇನುತುಪ್ಪ (1 ಚಮಚ) ಬೆರೆಸಿ ಸೇವಿಸಬೇಕು. ಅಂತೆಯೇ ತುರಿಕೆ, ಕಜ್ಜಿ , ಚರ್ಮರೋಗವುಳ್ಳ ಭಾಗಗಳಲ್ಲಿ ಕಹಿಬೇವಿನ ಎಲೆಯರಸ ಮತ್ತು ಅರಸಿನ ಬೆರೆಸಿ ಲೇಪಿಸಬೇಕು.
ತೀವ್ರವಾದ ತುರಿಕೆ, ಗುಳ್ಳೆಗಳಿರುವಾಗ ಕಹಿಬೇವಿನ ಎಲೆಯ ರಸಕ್ಕೆ ಸ್ವಲ್ಪ ಉಪ್ಪು , ಅರಸಿನ ಹುಡಿ ಬೆರೆಸಿ ಲೇಪಿಸಿದರೆ ಶೀಘ್ರ ಶಮನಕಾರಿ.
ಅಂತೆಯೇ ತುರಿಕೆ, ಕಜ್ಜಿ , ಗಜಕರ್ಣ ಮೊದಲಾದವುಗಳಲ್ಲಿ ಕಹಿಬೇವಿನ ಮರದ ಬೀಜಗಳನ್ನು ಜಜ್ಜಿ , ಕೊಬ್ಬರಿ ಎಣ್ಣೆ ಮತ್ತು ಕರ್ಪೂರದ ಪುಡಿ ಬೆರೆಸಿ ಲೇಪಿಸಿದರೆ ಶಮನಕಾರಿ.
ಚಳಿಗಾಲದಲ್ಲಿ ಚಳಿಯ ತೀವ್ರತೆಯಿಂದಾಗಿ ಕೈಕಾಲು, ಪಾದಗಳಲ್ಲಿ ಸೆಳೆತ, ಕೈಕಾಲು ತಣ್ಣಗಾಗುವುದು ಸಾಮಾನ್ಯ. ಬೇವಿನ ಎಣ್ಣೆಗೆ ನಾಲ್ಕಾರು ಹನಿ ನೀಲಗಿರಿ ಎಣ್ಣೆ ಬೆರೆಸಿ ಲೇಪಿಸಿ ಮಾಲೀಶು ಮಾಡಿದರೆ ಗುಣಕಾರಿ.
ಕಹಿಬೇವಿನಲ್ಲಿ ಕ್ರಿಮಿಹರ ಗುಣವಿದೆ. ಕಹಿಬೇವಿನ ಕಡ್ಡಿಯಿಂದ ಹಲ್ಲುಜ್ಜುವುದರಿಂದ ಹಲ್ಲು ವಸಡಿನ ನೋವು ಶಮನವಾಗಿ ಹಲ್ಲು ಶುಭ್ರವಾಗಿ, ಗಟ್ಟಿಯಾಗುತ್ತದೆ. ಮುಖ ದುರ್ಗಂಧ ಶಮನಕಾರಿಯೂ ಹೌದು.
ಮಧುಮೇಹದಲ್ಲಿ ಕಹಿಬೇವು ರಾಮಬಾಣ! ಬೇವಿನ ಚಿಗುರೆಲೆಗಳನ್ನು ಅರೆದು ಎರಡು ಹುಣಸೇಬೀಜದಷ್ಟು ಪ್ರಮಾಣದಲ್ಲಿ ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಮಧುಮೇಹ ನಿಯಂತ್ರಣಕ್ಕೆ ಬರುವುದು.
ಕಹಿಬೇವಿನ ಎಲೆಗಳನ್ನು ಹಸಿಯಾಗಿ ತಿನ್ನುವುದರಿಂದ ಅಥವಾ 4 ಚಮಚ ಎಲೆಯ ರಸ ಸೇವಿಸುವುದರಿಂದ ಅಥವಾ ಕಹಿಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ, ಇಂಗಿಸಿ ಕಷಾಯ ಮಾಡಿ ಸೇವಿಸುವುದರಿಂದಲೂ ಮಧುಮೇಹ ನಿಯಂತ್ರಣಕ್ಕೆ ಬರುವುದು.
ಕಹಿಬೇವು ಉತ್ತಮ ಯಕೃತ್ ಉದ್ದೀಪಕ ಅಥವಾ ಲಿವರ್ ಟಾನಿಕ್. ಅರಸಿನ ಕಾಮಾಲೆಯಿಂದ ಬಳಲುವವರಿಗೆ ಕಹಿಬೇವಿನ ರಸ ಮತ್ತು ಕೆಂಪು ಕಲ್ಲು ಸಕ್ಕರೆ ಮಿಶ್ರಮಾಡಿದ ಔಷಧಗಳನ್ನು 1/8 ಕಪ್ನಷ್ಟು , ನಿತ್ಯ ಖಾಲಿ ಹೊಟ್ಟೆಯಲ್ಲಿ ಒಂದು ವಾರ ನೀಡಿದರೆ ಪರಿಣಾಮಕಾರಿ.
ಬೇವಿನ ಎಣ್ಣೆಯನ್ನು ಲೇಪಿಸಿ 4-6 ಗಂಟೆಗಳ ಬಳಿಕ ತಲೆಸ್ನಾನ ಮಾಡಿಸಿದರೆ ಮಕ್ಕಳ ತಲೆಕೂದಲ ಹೇನು, ಸೀರು ನಿವಾರಣೆಯಾಗುತ್ತದೆ.
ನಿತ್ಯವೂ 5-6 ಕಹಿಬೇವಿನ ಎಲೆ ಅಥವಾ ಎಲೆಯ ರಸ ಸೇವಿಸಿದರೆ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಬ್ಯಾಕ್ಟೀರಿಯಾ ಸೋಂಕು, ವೈರಾಣುಗಳ ಸೋಂಕು ಮುಂತಾದುವುಗಳಲ್ಲಿಯೂ ಕಹಿಬೇವಿನ ರಸ ಮತ್ತು ಜೇನು ಮಿಶ್ರಣದ ಪ್ರಯೋಗ ಪರಿಣಾಮಕಾರಿ. ರೋಗಬಲ, ರೋಗಿಬಲಕ್ಕೆ ತಕ್ಕಂತೆ ಪ್ರಮಾಣ ನಿರ್ಧರಿಸಬೇಕು.
ಚಳಿಗಾಲದಲ್ಲಿ ಆಗಾಗ್ಗೆ ಕಾಡುವ ಕೆಮ್ಮು , ಕಫ, ಜ್ವರ ನಿವಾರಣೆಗೆ ಕಹಿಬೇವಿನ ಚಕ್ಕೆಯ ಕಷಾಯಕ್ಕೆ ತುಳಸಿಯ ರಸ ಹಾಗೂ ಜೇನು ಬೆರೆಸಿ ಕುಡಿದರೆ ಪರಿಣಾಮಕಾರಿ.
ನಿಂತ ನೀರಿರುವ ಸ್ಥಳಗಳಲ್ಲಿ ಬೇವಿನ ಎಣ್ಣೆಯನ್ನು ಸಿಂಪಡಿಸುವುದರಿಂದ ಸೊಳ್ಳೆಗಳು ನಾಶವಾಗಿ ಮಲೇರಿಯಾವೇ ಮೊದಲಾದ ರೋಗಗಳ ಪ್ರತಿಬಂಧಕೋಪಾಯವಾಗಿ ಉಪಯುಕ್ತ.
ಚಿಕನ್ಪಾಕ್ಸ್ ಮಕ್ಕಳಲ್ಲಿ ಹೆಚ್ಚಾಗಿ ಉಂಟಾಗುವ ವೈರಸ್ನ ಸೋಂಕು. ಅದರ ಗುಳ್ಳೆಗಳು ಒಣಗಲು ಕಹಿಬೇವಿನ ಕಷಾಯ ನಿತ್ಯ ನೀಡಿದರೆ ಹಿತಕರ. ಗುಳ್ಳೆಗಳು ಒಣಗಿದ ಬಳಿಕ ತೀವ್ರ ತುರಿಕೆ ಸಾಮಾನ್ಯ. ಆಗ ಕಹಿಬೇವು ರಸ ಮತ್ತು ಅರಸಿನ ಬೆರೆಸಿ ಲೇಪಿಸಿದರೆ ತುರಿಕೆ ನಿವಾರಕ. ಚಿಕನ್ಪಾಕ್ಸ್ ಸೇರಿದಂತೆ ಇತರ ಚರ್ಮ ರೋಗಗಳಲ್ಲೂ, ಸ್ನಾನದ ನೀರಿಗೆ ಕಹಿಬೇವಿನ ಎಲೆಗಳನ್ನು ಹಾಕಿ ಕುದಿಸಿ ಸ್ನಾನ ಮಾಡಿದರೆ ಶಮನಕಾರಿ.
ಹೀಗೆ ಕಹಿಬೇವು ತನ್ನ ಔಷಧೀಯ ಗುಣಗಳಿಂದಾಗಿ ಆರೋಗ್ಯಕ್ಕೆ ಸಿಹಿಯಾಗಿದೆ !