ಕಲಬುರ್ಗಿ: ಬಿಳಿ ಮುಟ್ಟು, ಕೆಂಪು ಮುಟ್ಟು ದೋಷದಿಂದ ನರಳುತ್ತಾ ಹೋದವರಿಗೆ ಗರ್ಭಕೋಶಕ್ಕೆ ಕ್ರಿಕೆಟ್ ಬಾಲ್ ಹಾಕಿ ಜೀವನದೊಂದಿಗೆ ಚೆಲ್ಲಾಟವಾಡುತ್ತಿರುವ ಆಂಧ್ರದ ನಾಟಿ ವೈದ್ಯರ ಪ್ರಕರಣಗಳು ಒಂದರ ಮೇಲೆ ಒಂದು ಬಯಲಿಗೆ ಬರುತ್ತಿವೆ.ಆಂಧ್ರಪ್ರದೇಶದ ಪರಗಿ ಬಳಿಯ ಕಲ್ಲೂರ ಗ್ರಾಮದ ಅತ್ತೆ -ಸೊಸೆ ಎಂಬ ನಾಟಿ ವೈದ್ಯರು, ಮುಟ್ಟು ದೋಷವಿದೆ ಎಂದು ಹೋಗುವ ಹೆಂಗಸರಿಗೆ ಕ್ರಿಕೆಟ್ ಬಾಲ್ ಇಲ್ಲವೇ ಗಟ್ಟಿಯಾದ ಬಿಲ್ವ ಪತ್ರಿ ಗಿಡದ ಪತ್ರಿಕಾಯಿಯನ್ನು ಗರ್ಭಕೋಶದ ಮೇಲಿಟ್ಟು ಕಾಲಿಂದ ಜೋರಾಗಿ ಒದ್ದು ಅಮಾನುಷವಾಗಿ ತುರುಕುವ ಘಟನೆ ನಿಜಕ್ಕೂ ಗಡಿ ಭಾಗ ಚಿಂಚೋಳಿ, ಸೇಡಂ ತಾಲೂಕುಗಳಲ್ಲಿ ತಲ್ಲಣಗೊಳಿಸುತ್ತಿದೆ.ಈ ತಾಲೂಕುಗಳ ಹಲವಾರು ಮಹಿಳೆಯರು ಗರ್ಭಕೋಶದೊಳಗೆ ಬಾಲ್ ಹಾಕಿಸಿಕೊಂಡು ಬಂದಿದ್ದು, ನರಳುತ್ತಾ ಆಸ್ಪತ್ರೆಗೆ ಬರಲಾರಂಭಿಸಿದ್ದಾರೆ.ಚಿಂಚೋಳಿ ತಾಲೂಕು ಭೂತಪುರ ಗ್ರಾಮದ ಯಲ್ಲಮ್ಮ ಮುಟ್ಟು ದೋಷ ಹಿನ್ನೆಲೆಯಲ್ಲಿ ಎರಡು ವರ್ಷಗಳ ಹಿಂದೆ ಆಂಧ್ರದ ಕಲ್ಲೂರ ಗ್ರಾಮದ ಭರತಮ್ಮ ಎನ್ನುವ ನಾಟಿ ವೈದ್ಯರ ಬಳಿ ತೋರಿಸಲು ಹೋದಾಗ ಕಣ್ಣಿಗೆ ಬಟ್ಟೆ ಕಟ್ಟಿ ಕ್ರಿಕೆಟ್ ಬಾಲ್ ಹಾಕಿದ್ದಾರೆ. ನೋವಿಗಾಗಿ ಕೆಂಪು ಉಂಡೆಗಳನ್ನು ನೀಡಿದ್ದಾರೆ. ಈಗ ಕೆಲವು ದಿನಗಳಿಂದ ತುಂಬಾ ನೋವುಂಟಾಗಿದ್ದಲ್ಲದೇ ಮೂತ್ರ ಬಂದ್ ಆದ ನಂತರ ಕಲಬುರ್ಗಿಯ ಶಸ್ತ್ರಜ್ಞ ಡಾ| ಸಾಂಬಶಿವರಾಜ ಎನ್ನುವರ ಬಳಿ ಬಂದಾಗ, ನಂತರ ಚಿಕಿತ್ಸೆ ಮಾಡಿದಾಗ ಗರ್ಭಕೋಶದ ಬಾಗಿಲಲ್ಲಿ ಬಾಲ್ ಇರುವುದು ಪತ್ತೆಯಾಯಿತು. ಬಾಲ್ ನೋಡಿ ವೈದ್ಯರು ಗಾಬರಿಯಾದರು. ನಂತರ ವಿಚಾರಿಸಿದಾಗ ನಾಟಿ ವೈದ್ಯರ ಕೈ ಚಳಕ ಬಯಲಿಗೆ ಬಂತು.ಯಲ್ಲಮ್ಮಳ ಹಾಗೆ ಚಿಂಚೋಳಿ ತಾಲೂಕು ಸುಲೇಪೇಟ ಹಾಗೂ ನಿಡಗುಂದಾ ಗ್ರಾಮದ ಮಹಿಳೆಯರೂ ಮುಟ್ಟು ದೋಷದ ಹಿನ್ನೆಲೆಯಲ್ಲಿ ಗರ್ಭಕೋಶದಲ್ಲಿ ಕ್ರಿಕೆಟ್ ಬಾಲ್ ಹಾಕಿಸಿಕೊಂಡು ಬಂದು ಈಗ ನರಳುತ್ತಿದ್ದು, ಆಸ್ಪತ್ರೆಗೆ ಕರೆ ತರಲಾಗುತ್ತಿದೆ. ಹೀಗೆ ಅನೇಕ ಘಟನೆಗಳು ಕೇಳಿ ಬರಲಾರಂಭಿಸಿವೆ. ಅತ್ತೆ ಮೈಗೂಡಿಸಿಕೊಂಡ ಬಂದ ಗರ್ಭಾಶಯಕ್ಕೆ ಬಾಲ್ ಹಾಕುವ ಜೀವ ಬಲಿ ತೆಗೆದುಕೊಳ್ಳುವ ಪದ್ಧತಿಯನ್ನು ಸೊಸೆಯೂ ಮುಂದುವರಿಸಿಕೊಂಡು ಬರುತ್ತಿದ್ದಾಳೆ ಎನ್ನಲಾಗಿದೆ. ಈಗಲಾದರೂ ಮಹಿಳೆಯರು ಇಂತಹ ನಾಟಿ ವೈದ್ಯರಿಂದ ದೂರ ಇರುವುದು ಒಳಿತಾಗಿದೆ.ಜಾಗೃತಿ ಅಗತ್ಯ: ಮುಟ್ಟು ದೋಷ ನಿವಾರಣೆಗೆ ಹಣ್ಣು ಇರಿಸಲಾಗುತ್ತದೆ ಎಂಬುದನ್ನು ಕೇಳಿದ್ದೆ. ಆದರೆ ಕ್ರಿಕೆಟ್ ಬಾಲ್ ಹಾಕಿರುವುದು ನಿಜಕ್ಕೂ ಇಂತಹ ಆಧುನಿಕ ಕಾಲದಲ್ಲೂ ಆಶ್ಚರ್ಯ ಮೂಡಿಸುವಂತಿದೆ. ಇಂತಹ ಕೆಟ್ಟ ನಾಟಿ ವೈದ್ಯರ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎನ್ನುತ್ತಾರೆ ಚಿಕಿತ್ಸೆ ಮಾಡಿದ ಡಾ| ಸಾಂಬಶಿವರಾವ್.