ರವಿಪ್ರಕಾಶ್ ರೈ | Dec 23, 2012
ನಿಧಾನವಾಗಿ ಯಶಸ್ಸು ತುಳು ಚಿತ್ರರಂಗವನ್ನು ಕೈ ಹಿಡಿಯುತ್ತಿದೆ. ಈ ವರ್ಷ ತುಳು ಚಿತ್ರರಂಗದಲ್ಲಿ ಒಟ್ಟು ನಾಲ್ಕು ಚಿತ್ರಗಳು ತೆರೆಕಂಡಿವೆ. "ಬಂಗಾರª ಕುರಲ್', "ಅಸಲ್-ಕುಸಲ್', "ಸೊಂಪಾ' ಹಾಗೂ "ತೆಲಿಕೆದ ಬೊಳ್ಳಿ'. 2012ರ ಕೊನೆಯ ತುಳು ಚಿತ್ರವಾಗಿ ತೆರೆಕಂಡ "ತೆಲಿಕೆದ ಬೊಳ್ಳಿ' ಈಗ ಪ್ರೇಕ್ಷಕರ ಮನಗೆದ್ದಿದೆ. ಥಿಯೇಟರ್ ಮುಂದೆ ಹೌಸ್ಫುಲ್ ಬೋರ್ಡ್ ಬೀಳುತ್ತಿದೆ. ಪ್ರೇಕ್ಷಕ ಥಿಯೇಟರ್ನಲ್ಲಿ ನಕ್ಕು ನಕ್ಕು ಹೊಟ್ಟೆ ಹುಣ್ಣಾಗಿಸಿಕೊಳ್ಳುತ್ತಿದ್ದಾನೆ. ಈ ಹಿಂದೆ "ಒರಿಯರ್ದೊರಿ ಅಸಲ್' ಯಶಸ್ಸಿನ ಪಟ್ಟ ಪಡೆದಿತ್ತು. ಈಗ "ತೆಲಿಕೆದ ಬೊಳ್ಳಿ' ಕೂಡಾ ಅದೇ ಹಾದಿಯಲ್ಲಿ ಮುನ್ನಡೆಯುವ ಮೂಲಕ ಮತ್ತೂಂದು ಯಶಸ್ಸು ತುಳು ಚಿತ್ರರಂಗಕೆ ದಕ್ಕುವ ಎಲ್ಲಾ ಲಕ್ಷಣಗಳು ದಟ್ಟವಾಗಿವೆ.

ರಂಗಭೂಮಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ದೇವದಾಸ್ ಕಾಪಿಕಾಡ್ ಅವರ ಯಶಸ್ವಿ "ತೆಲಿಕೆದ ಬೊಳ್ಳಿ' ನಾಟಕ ರಂಗಭೂಮಿಯಲ್ಲಿ ಹಿಟ್ಲಿಸ್ಟ್ ಸೇರಿತ್ತು. ಈಗ ಸಿನಿಮಾ ಕೂಡಾ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿ ಕಾಪಿಕಾಡ್ ಅವರದ್ದಾಗಿದ್ದರೆ, ಪಿ.ಎಚ್.ವಿಶ್ವನಾಥ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಸಿನಿಮಾದ ಯಶಸ್ಸಿನಿಂದ ನಿರ್ದೇಶಕರು ಕೂಡಾ ಖುಷಿಯಾಗಿದ್ದಾರೆ. ಶರ್ಮಿಳಾ ಕಾಪಿಕಾಡ್ ಹಾಗೂ ಸುಧೀರ್ ಕಾಮತ್ ನಿರ್ಮಾಪಕರು. ಈಗ ಅವರಿಬ್ಬರೂ ಖುಷಿಯಾಗಿದ್ದಾರೆ. ಕಾರಣ ಸಿನಿಮಾ ಕೂಡಾ ಹಿಟ್ಲಿಸ್ಟ್ ಸೇರುತ್ತಿದೆ. ಮಂಗಳೂರು, ಕಾರ್ಕಳ, ಮೂಡಬಿದ್ರೆ, ಬೆಳ್ತಂಗಡಿಗಳಲ್ಲಿ "ತೆಲಿಕೆದ ಬೊಳ್ಳಿ' ತೆರೆಕಂಡಿದೆ. ಒಮ್ಮೆ ಸಿನಿಮಾ ನೋಡಿದವರು ಮತ್ತೂಮ್ಮೆ ನೋಡುತ್ತಿದ್ದಾರೆ. ಪ್ರತಿ ದಿನ ಮಂಗಳೂರಿನ 14 ಶೋಗಳು ಕೂಡಾ ಹೌಸ್ಫುಲ್ ಆಗುತ್ತಿವೆ. ದೇವದಾಸ್ ಕಾಪಿಕಾಡ್ ಖುಷಿಯಾಗಿದ್ದಾರೆ. "ತುಂಬಾ ಖುಷಿಯಾಗುತ್ತಿದೆ. ಸಿನಿಮಾ ನೋಡಿದವರಿಂದ ಒಳ್ಳೆಯ ಮಾತುಗಳು ಕೇಳಿಬರುತ್ತಿವೆ. ಬೇರ್ಯಾವ ಸಿನಿಮಾಕ್ಕೆ ಪ್ರೇಕ್ಷಕರಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ನಮ್ಮ ಸಿನಿಮಾಕ್ಕೆ ಪ್ರೇಕ್ಷಕರ ಕೊರತೆ ಕಾಡಿಲ್ಲ' ಎನ್ನುತ್ತಾರೆ. ಸಾಮಾನ್ಯವಾಗಿ ತುಳು ನಾಟಕಗಳು ಸಿನಿಮಾದಾಗ ಒಂದು ಅಪವಾದ ಎದುರಾಗುತ್ತದೆ. ಅದೇನೆಂದರೆ ಕ್ಯಾಮರಾ ಮುಂದೆಯೂ ನಾಟಕ ಮಾಡುತ್ತಾರೆ ಎಂಬುದು. ಆದರೆ, ತಮ್ಮ "ತೆಲಿಕೆದ ಬೊಳ್ಳಿ' ಬಗ್ಗೆ ಕಾಪಿಕಾಡ್ ಆ ವಿಷಯದಿಂದ ಮುಕ್ತರಾಗಿದ್ದಾರಂತೆ. ನಾಟಕವನ್ನು ಸಿನಿಮಾ ಮಾಡುವಾಗ ಏನೆಲ್ಲಾ ಬದಲಾವಣೆಗಳು ಬೇಕೋ ಅವೆಲ್ಲವನ್ನು ಮಾಡಿಕೊಳ್ಳುವ ಮೂಲಕ ಸಿನಿಮಾ ಸಿನಿಮಾವಾಗಿಯೇ ಉಳಿದಿದೆ. ಯಾವುದೇ ಅಭಾಸಗಳಾಗಿಲ್ಲ. ಯಾವುದೇ ವಿಷಯದಲ್ಲಿ ರಾಜಿಯಾಗದೇ ಸಿನಿಮಾ ಏನು ಬಯಸುತ್ತೋ ಅವೆಲ್ಲವನ್ನು ನೀಡಿದ ಪರಿಣಾಮ ಸಿನಿಮಾ ಚೆನ್ನಾಗಿ ಬಂದಿದೆ ಎನ್ನುವುದು ಕಾಪಿಕಾಡ್ ಮಾತು. ಸಿನಿಮಾದಲ್ಲಿ ಯಾವುದೇ ಒಂದು ಅಂಶ ಹೈಲೈಟ್ ಆಗದೇ ಕಾಮಿಡಿ, ಲವ್ಸ್ಟೋರಿ, ಸೆಂಟಿಮೆಂಟ್ ಎಲ್ಲವೂ ಒಟ್ಟೊಟ್ಟಿಗೆ ಸಾಗುವುದರಿಂದ ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾಗಿದೆ ಎಂದು ಖುಷಿ ವ್ಯಕ್ತಪಡಿಸುತ್ತಾರೆ.
ಅಂದಹಾಗೆ, ಈ ಸಿನಿಮಾ ಮೂಲಕ ದೇವದಾಸ್ ಕಾಪಿಕಾಡ್ ಅವರ ಮಗ ಅರ್ಜುನ್ ಕಾಪಿಕಾಡ್ ನಾಯಕರಾಗಿ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದಲ್ಲಿ ಭೋಜರಾಜ ವಾಮಂಜೂರು, ಅರವಿಂದ್ ಬೋಳಾರ್, ಲಕ್ಷ್ಮಣ್, ಗೋಪಿನಾಥ್ ಭಟ್ ಸೇರಿದಂತೆ ಅನೇಕರು ಚಿತ್ರದಲ್ಲಿ ನಟಿಸಿದ್ದಾರೆ. ಮತ್ತೂಂದು ವಿಷಯವೆಂದರೆ ಈ ಹಿಂದೆ ಕಾರಣಾಂತರಗಳಿಂದ ದೂರವಾಗಿದ್ದ ದೇವದಾಸ್ ಕಾಪಿಕಾಡ್ ಹಾಗೂ ನವೀನ್ ಡಿ ಪಡೀಲ್ ಈ ಚಿತ್ರದ ಮೂಲಕ ಒಂದಾಗಿ ಪ್ರೇಕ್ಷಕರಿಗೆ ರಸದೌತಣ ಉಣಬಡಿಸಿದ್ದಾರೆ. ಅದೇನೇ ಇದ್ದರೂ "ತೆಲಿಕೆದ ಬೊಳ್ಳಿ' ಚಿತ್ರತಂಡ ಈಗ ಖುಷಿಯಾಗಿರುವುದಂತೂ ಸತ್ಯ.